ಬಸವಣ್ಣ ಅವರ ಚಿಂತನೆಗಳು ಮತ್ತು ವಿಚಾರಧಾರೆ ಇಂದಿಗೂ ಪ್ರಸ್ತುತ ಎನಿಸಿವೆ. ಸಮಸಮಾಜದ ನಿರ್ಮಾಣ ಬಸವಣ್ಣನವರ ಉದ್ದೇಶವಾಗಿತ್ತು ಎಂದು ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಸವಣ್ಣನವರು ತಮ್ಮ ಸಮಕಾಲೀನ ವಚನಕಾರರ ಮೇಲೆ ಬೀರಿದ ಪ್ರಭಾವದಿಂದಾಗಿ ವಚನ ಸಾಹಿತ್ಯ ಸಮೃದ್ದವಾಗಿ ಬೆಳೆಯಿತು. ವಚನಕಾರರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಚಿಂತನೆಗಳಿಗೆ ಬಸವಣ್ಣನವರು ಪ್ರೇರಕ ಶಕ್ತಿಯಾಗಿದ್ದರು. ಬಸವಣ್ಣನವರು ಸೇರಿದಂತೆ ಎಲ್ಲಾ ವಚನಕಾರರು ತಮ್ಮ ಸಾಹಿತ್ಯವನ್ನು ಕನ್ನಡ ಭಾಷೆಯ ಮೂಲಕ ಜನಸಾಮಾನ್ಯರಿಗೂ ತಲುಪುವಂತೆ ಮಾಡಿದರು. ಸಮಾನತೆ, ಕಾಯಕ ತತ್ವಗಳನ್ನು ಪಾಲಿಸುವವರು ಶಿವಶರಣರಾಗಬಹುದು ಎಂದವರು ಬಸವಣ್ಣನವರು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳನ್ನು ಒಳಗೊಂಡ ಮೊದಲ ಸಂಸತ್ ಎಂಬ ಕೀರ್ತಿಯನ್ನು ಹೊಂದಿರುವ ಅನುಭಾವ ಮಂಟಪವು ಬಸವಣ್ಣ ವಿಚಾರಧಾರೆಗೆ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀ ಡಿದ ಬಸವಣ್ಣನವರು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರಿಗೂ ಸಾಹಿತ್ಯ ರಚನೆಗೆ ಅವಕಾಶ ಮಾಡಿಕೊಟ್ಟರು. ಬಸವಣ್ಣನವರು ಪ್ರತಿಪಾದಿಸಿದ ತತ್ತ್ವ ,ಸಿದ್ಧಾಂತಗಳು ಇಂದಿಗೂ ವಿಶ್ವದಲ್ಲಿ ಆದರ್ಶಪ್ರಾಯಗಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕ ಕೋಶಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಬಸವಣ್ಣನವರ ಸಾಮಾಜಿಕ ಕ್ರಾಂತಿ, ಕಾಯಕ ತತ್ವ ಜಗತ್ತಿನಾದ್ಯಂತ ಪ್ರಸಿದ್ದಿ ಹೊಂದಿದೆ. ಸಮಾನತೆಯಿಂದ ಬದುಕಲು ಅವಕಾಶ ಎಲ್ಲರಿಗೂ ಇದೆ. ಜಾತಿಯತೆ ಮತ್ತು ಅಸಮಾನತೆಯ ವಿರುದ್ದ ಧ್ವನಿ ಎತ್ತಿದವರು ಬಸವಣ್ಣ. ಕರ್ನಾಟಕದಲ್ಲಿ ವೈಚಾರಿಕ ಜಾಗೃತಿಯನ್ನು ಮೂಡಿಸಿದವರು ಬಸವಣ್ಣನವರು ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಹೊಸಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮುನಿರಾಜು, ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕಲಾವಿದ ದರ್ಗಾಜೋಗಿಹಳ್ಳಿ ಮಲ್ಲೇಶ್, ಕಸಾಪ ಪ್ರತಿನಿಧಿ ಷಫೀರ್ ಮುಂತಾದವರು ಭಾಗವಹಿಸಿದ್ದರು.