ಬಲವಂತದ ಭೂಸ್ವಾಧೀನಕ್ಕೆ ವಿರೋಧ ಸೇರಿ 5 ಮಹತ್ವದ ನಿರ್ಣಯ: ಸಮ್ಮೇಳನದ 5 ನಿರ್ಣಯಗಳು ಇಲ್ಲಿವೆ ಓದಿ…

ಭೂಮಿ, ನೀರು, ಪರಿಸರ, ಭಾಷೆ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ 5 ಮಹತ್ವದ ನಿರ್ಣಯಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ.

ಭಾನುವಾರ ಸಮ್ಮೇಳನ ವೇದಿಕೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್ ನಿರ್ಣಯಗಳನ್ನು ಮಂಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಿಕ ಚಿಂತನೆಗಳನ್ನು ಮಾತ್ರ ಆದ್ಯತೆಯ ವಿಷಯಗಳನ್ನಾಗಿ ಪರಿಗಣಿಸದೆ ನಾಡಿನ ಸಮಗ್ರ ಅಭಿವೃದ್ದಿ ಮತ್ತು ಸವಾಲು, ನೆಲದ ಹೋರಾಟಗಳು, ಆತಂಕಗಳ ಬಗ್ಗೆಯೂ ತನ್ನ ಇಚ್ಛಾಶಕ್ತಿಯನ್ನು ಹಲವು ವೇಳೆ ಪ್ರದರ್ಶಿಸಿದೆ. ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗದ ಆಶೋತ್ತರಗಳೂ ಸಾಹಿತ್ಯಿಕ ಚಿಂತನೆಗಳ ಮೂಲ ಆಶಯವೇ ಆಗಿದೆ ಎಂದರು.

*ಸಮ್ಮೇಳನದ 5 ನಿರ್ಣಯಗಳು:*

1. ಅಭಿವೃದ್ದಿಯ ಹೆಸರಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ಇತರೆ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾದೀನ ಪಡಿಸಿಕೊಳ್ಳುವ ಪ್ರಯತ್ನಗಳನ್ನು ಸಮ್ಮೇಳನ ಸ್ಪಷ್ಟವಾಗಿ ವಿರೋಧಿಸುತ್ತದೆ. ರೈತರ ಹಿತಾಸಕ್ತಿಯೇ ಪರಮೋಚ್ಛವಾಗಿದ್ದು, ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯಲ್ಲಿಕಳೆದ 1 ಸಾವಿರಕ್ಕೂ ಹೆಚ್ಚು ದಿನಗಳಿಂದ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತದೆ.

2. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ, ಕೊನಘಟ್ಟ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ರಾಸಾಯನಿಕ ತ್ಯಾಜ್ಯ ನೀರನ್ನು ಜೀವಂತ ಕೆರೆಗಳಿಗೆ ಹರಿಸುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ಕುರಿತ ಹೋರಾಟವನ್ನು ಸಮ್ಮೇಳನ ಬೆಂಬಲಿಸುತ್ತದೆ. ಈ ಭಾಗದ ಗ್ರಾಮಗಳಿಗೆ 3ನೇ ಹಂತದ ಶುದ್ದೀಕರಿಸಿದ ನೀರನ್ನು ಪೂರೈಸುವ ಮತ್ತು ಶುದ್ದ ಕುಡಿಯುವ ನೀರಿನ ಪೂರೈಕೆಗೆ ಕೂಡಲೇ ಕ್ರಮ ವಹಿಸುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತದೆ.

3. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆ-ಕುಂಟೆಗಳು, ಜಲಮೂಲಗಳು, ಜೀವಿ ವೈವಿಧ್ಯತೆಯನ್ನು ರಕ್ಷಿಸಿ, ಪರಂಪರೆಯ ಅನನ್ಯತೆಯನ್ನು ಉಳಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ದೊಡ್ಡಬಳ್ಳಾಪುರ ಸೇರಿದಂತೆ ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ಬಿಬಿಎಂಪಿ ಕಸ ಸಂಸ್ಕರಣಾ ನೂತನ ಘಟಕಗಳನ್ನು ತೆರೆಯಬಾರದು.

4. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ನುಡಿ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳ್ಳಬೇಕು. ಕನ್ನಡವನ್ನು ಭವಿಷ್ಯದ ಉದ್ಯೋಗದಾಯಿ ಭಾಷೆಯಾಗಿ ರೂಪಿಸುವ ನಿಟ್ಟಿನಲ್ಲಿ ವಿಜ್ಞಾನ, ತಂತ್ರಜ್ಞಾನ, ಆಡಳಿತ, ಕಾನೂನಿನ ಭಾಷೆಯಾಗಿ ರೂಪಿಸಲು ಕ್ರಮ ವಹಿಸಬೇಕು. ಪಾರಿಭಾಷಿಕ ಪದಕೋಶಗಳ ರಚನೆ ಮತ್ತು ಪ್ರಕಟಣೆಗೆ ಸರ್ಕಾರ ಮುಂದಾಗಬೇಕು.

5. ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ಕೈಗಾರಿಕಾ ವಸಾಹತುಗಳು, ಕಾರ್ಖಾನೆ, ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಬೇಕು. ಡಿ ದರ್ಜೆ ಹುದ್ದೆಗಳಿಗೆ ಮಾತ್ರ ಸೀಮಿತವಾಗದೆ, ಉನ್ನತ ಹಂತದ ಹುದ್ದೆಗಳಲ್ಲೂ ಸ್ಥಳೀಯರಿಗೆ ಮೀಸಲಾತಿ ಜಾರಿಗೊಳ್ಳಬೇಕು. ಉದ್ಯೋಗ ಕೌಶಲ್ಯಗಳ ತರಬೇತಿಗೆ ಕ್ರಮ ವಹಿಸಬೇಕು. ಜ್ಞಾನಾಧಾರಿತವಾಗಿ ಎಲ್ಲ ಭಾಷೆಗಳಿಗೂ ಮನ್ನಣೆ ನೀಡುವ ಕರ್ನಾಟಕದಲ್ಲಿ ಹಿಂದಿ ಸೇರಿದಂತೆ ಯಾವುದೇ ಭಾಷೆಯ ಬಲವಂತದ ಹೇರಿಕೆಯನ್ನು ಸಮ್ಮೇಳನ ಸ್ಪಷ್ಟವಾಗಿ ವಿರೋಧಿಸುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳನಾಧ್ಯಕ್ಷ ಟಿ.ಕೆಂಪಣ್ಣ, ಜಿಲ್ಲಾ ಕೋಶಾಧ್ಯಕ್ಷ ಡಾ.ಮುನಿರಾಜು, ಕಾರ್ಯದರ್ಶಿ ಅಶ್ವತ್ಥಗೌಡ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ದೇವನಹಳ್ಳಿ ತಾಲೂಕು ಕಾರ್ಯದರ್ಶಿ ದೇವರಾಜ್, ನೆಲಮಂಗಲ ತಾಲೂಕು ಕಾರ್ಯದರ್ಶಿ ಸದಾನಂದ ಆರಾಧ್ಯ, ಭಾನುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಬಗರ್ ಹುಕ್ಕುಂ ಸಮಿತಿ ಸಭೆ ವಿಳಂಬ: ಹಕ್ಕುಪತ್ರಕ್ಕಾಗಿ ರೈತರ ಅಲೆದಾಟ: ಅರ್ಜಿ ಸಲ್ಲಿಸಿ ವರ್ಷಗಳಾದರೂ ಸಾಗುವಳಿ ಚೀಟಿ ಇಲ್ಲ: ಆತಂಕದಲ್ಲಿ ರೈತ

ಗ್ರಾಮೀಣ ಭಾಗದಲ್ಲಿ ಜೀವನ ನಡೆಸಲು ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನೋಪಾಯ ರೂಪಿಸಿಕೊಂಡಿರುವ ರೈತಾಪಿ ವರ್ಗದ ಜನರಿಗಾಗಿ ಸರ್ಕಾರ ಸಾಗುವಳಿ…

1 hour ago

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 56…

16 hours ago

ಮಹತ್ವಾಕಾಂಕ್ಷಿ ಕ್ವಿನ್ ಸಿಟಿಗೆ ಮೊದಲ ಬೃಹತ್ ಹೂಡಿಕೆ ಒಪ್ಪಂದ

ಬೆಂಗಳೂರು ಗ್ರಾಮಾಂತರ: ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ‘ಕ್ವಿನ್ ಸಿಟಿ’ (KWINCity) ಯೋಜನೆಗೆ ಮೊದಲ ಬೃಹತ್ ಹೂಡಿಕೆ…

1 day ago

108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಉದ್ಘಾಟನೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ…

1 day ago

SIR ಜಾಗೃತಿ ಹಾಗೂ ಮತದಾರರ ಪಟ್ಟಿಯ ಸಂರಕ್ಷಣೆ ಕಾರ್ಯಕ್ಕೆ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

ದೇವನಹಳ್ಳಿ: ಮತದಾರರ ವಿಶೇಷ ತೀವ್ರ ಪಟ್ಟಿ ಪರಿಷ್ಕರಣೆ (SIR) ಹಾಗೂ ಜಿಬಿಎ ಚುನಾವಣೆ ಸಂಬಂಧ ಪಕ್ಷದ ಎಲ್ಲಾ ಮುಖಂಡರು ಮತ್ತು…

2 days ago

ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರ “ಹೈಕಮಾಂಡ್ ತೀರ್ಮಾನಕ್ಕೆ ಬದ್ದ”- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಕೆ.ಎಚ್ ಮುನಿಯಪ್ಪ ಮಹತ್ವದ ರಾಜಕೀಯ ಹಾಗೂ ಅನ್ನಭಾಗ್ಯ ಯೋಜನೆ…

2 days ago