ಕೋಲಾರ: ಬಡವರ ಮಕ್ಕಳು ಓದಲು ಹಾಸ್ಟೆಲ್ ಗಳಿಗೆ ಬಂದಿದ್ದಾರೆ ಅವರಿಗೆ ಸೂಕ್ತ ಸೌಲಭ್ಯಗಳನ್ನು ನೀಡುವುದು ಅಧಿಕಾರಿಗಳ ಜವಾಬ್ದಾರಿ ಅದು ಬಿಟ್ಟು ಸೌಲಭ್ಯಗಳನ್ನು ಕೊಡದೇ ಮಕ್ಕಳಿಗೆ ಉದಾಸೀನ ಮಾಡಿದರೆ ಪರಿಣಾಮ ಸರಿ ಇರಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಹಾಗೂ ಬಿಸಿಎಂ ಹಾಸ್ಟೆಲ್ ಗಳಲ್ಲಿ ಏನು ನಡೆಯುತ್ತಾ ಇದೆ ಅಂತ ನಮಗೆ ಎಲ್ಲಾ ಗೊತ್ತು, ನಿಮ್ಮಗಳ ಆಡಳಿತ ವೈಖರಿಯ ಬಗ್ಗೆ ಸಾಕಷ್ಟು ದೂರುಗಳು ಕೂಡ ಬಂದಿವೆ. ನಿಮ್ಮ ಆಟ ಇಲ್ಲಿಗೆ ಕೊನೆಯಾಗಬೇಕು ಮತ್ತೆ ಇಂತಹ ದೂರುಗಳು ಮರುಕಳಿಸಬಾರದು ಹಾಸ್ಟೆಲ್ ಗಳು ಅಂದರೆ ಮಾಫಿಯಾ ಆಗಿದೆ, ಮತ್ತೆ ಪುನರಾವರ್ತನೆಯಾದರೆ ಹಾಸ್ಟೆಲ್ ನಿಂದಲೇ ಒದ್ದು ಓಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದ ಜನತೆಗೆ ನೀರು ಒದಗಿಸುವ ನಿಟ್ಟಿನಲ್ಲಿ ಯರಗೋಳ್ ಯೋಜನೆ ತಂದಿದ್ದೇವೆ ಆದರೆ ಅಧಿಕಾರಿಗಳ ಮನೆಗೆ ನೀರು ಹೋಗುತ್ತೇ, ಜನ ಸಾಮಾನ್ಯರ ಮನೆಗೆ ನೀರು ಹೋಗಲ್ಲ ಎಂದರೆ ಜನಕ್ಕೆ ಏನು ಮಾಡಲು ಹೊರಟಿದ್ದೀರಾ ಒಂದು ತಿಂಗಳೊಳಗೆ ನಗರಸಭೆ ವ್ಯಾಪ್ತಿಯ ಪ್ರತಿ ಮನೆಗೆ ಯರಗೋಳ್ ನೀರು ಒದಗಿಸಬೇಕು. ನಗರಸಭೆ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಒದಗಿಸಿರುವ 24 ಗಂಟಗಳ ನಿರಂತರ ವಿದ್ಯುತ್ ಸಂಪರ್ಕವನ್ನು ಖಾಸಗಿಯವರು ಬಳಸಿಕೊಳ್ಳುತ್ತಾ ಇದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ. ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಲು ನಗರಸಭೆ ಆಯುಕ್ತ ಶಿವಾನಂದ್ ಅವರಿಗೆ ಸೂಚಿಸಿದರು.
ಯಾವುದೇ ಸಭೆಯಾಗಲಿ ಅಧಿಕಾರಿಗಳು ಕಾಟಾಚಾರಕ್ಕೆ ಬರೋದು, ಸುಮ್ಮನೆ ಸುಳ್ಳು ಮಾಹಿತಿ ಹೇಳಿ ಹೋಗೋದು ಅಲ್ಲ. ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಎಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಪ್ರಸ್ತುತ ಎಷ್ಟು ನಡೆಯುತ್ತಾ ಇವೆ ಮುಂದೆ ಅವಶ್ಯಕತೆ ಇರುವ ಕಾಮಗಾರಿಗಳ ಬಗ್ಗೆ ಮಾಹಿತಿ ತರಬೇಕು. ಅದಾಗಲೇ ನಾವು ಕೂಡ ಏನಾದರೂ ಮಾಡಲು ಸಾಧ್ಯ. ಈಗಾಗಲೇ ಕೋಲಾರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಕೋಟಿ ಅನುದಾನವನ್ನು ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮಗಳಿಂದ ಗ್ರಾಪಂ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ 42 ಕಿಮೀ ರಸ್ತೆಗಳಿಗೆ ಸೀಮಿತಗೊಳಿಸಲಾಗಿದೆ. ಅನುದಾನ ಎಷ್ಟು ಬೇಕಾದರೂ ಕೊಡುತ್ತೇವೆ ಕೆಲಸ ಮಾಡಬೇಕು ಜನ ನಮ್ಮನ್ನು ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತ ಬೈಕೊಂಡು ಜಮ ಓಡಾಡಬಾರದು ಅಷ್ಟೇ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕೋಲಾರ ತಾಲೂಕನ್ನು ಪ್ಲಾಸ್ಟಿಕ್ ಮುಕ್ತ ತಾಲೂಕು ಮಾಡಿ ಜಿಲ್ಲೆಗೆ ಮಾದರಿಯಾಗುವಂತೆ ಮಾಡಬೇಕು ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಮುಂದಾಗಿ ಹಳ್ಳಿಗಳಿಗೆ ನಗರದಿಂದ ಪ್ಲಾಸ್ಟಿಕ್ ಹೋಗುತ್ತಾ ಇದೆ. ಹಳ್ಳಿಗಳಲ್ಲಿ ಪ್ಲಾಸ್ಟಿಕ್ ಕಂಡು ಬಂದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಹೊಣೆಗಾರಿಕೆಯಾಗಿ ಮಾಡಿ ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಪ್ರತಿಯೊಂದು ಇಲಾಖೆಯಲ್ಲಿ ಸರಕಾರದಿಂದ ಜನಕ್ಕೆ ತಲುಪಿಸಲು ಸಾಕಷ್ಟು ಯೋಜನೆಗಳಿವೆ ಆದರೆ ಸರಿಯಾಗಿ ಜನಕ್ಕೆ ಸೇರುತ್ತಿಲ್ಲ. ಕಾರಣ ಮಾಹಿತಿ ಕೊರತೆ ಜೊತೆಗೆ ಅಧಿಕಾರಿ ನಗರವನ್ನು ಬಿಟ್ಟು ಹಳ್ಳಿಗಳ ಕಡೆ ಹೋಗಲ್ಲ, ರೈತರಿಗೆ ಮಾಹಿತಿ ನೀಡಲ್ಲ, ಸರಕಾರದಿಂದ ಒದಗಿಸುವ ಸಬ್ಸಿಡಿಗಳ ಹೆಚ್ಚಳ ಮಾಡಲು ಮಾಹಿತಿ ಕೊಡಿ ಸಂಬಂಧಿಸಿದ ಅಧಿಕಾರಿಗಳನ್ನು ಹಾಗೂ ಸಚಿವರಿಗೆ ಮನವರಿಕೆ ಮಾಡುತ್ತೇವೆ. ಕೂಲಿಗೆ ಹೋಗುವ ಜನರು ಆಟೋಗಳಲ್ಲಿ ಹೋಗುವಾಗ ಪೋಲೀಸರು ಹಣ ವಸೂಲಿ ಮಾಡುತ್ತಾರೆ ಇವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಪೋಲಿಸ್ ಇಲಾಖೆಗೆ ಸೂಚಿಸಿದರು
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ತಾಪಂ ಇಒ ಮುನಿಯಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.