ಕೋಲಾರ: ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿಯಿಂದ ಭೂಮಿ ಪಡೆದ ರೈತರಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ನೀಡುತ್ತಿರುವ ಕಿರುಕುಳ ಕೂಡಲೇ ನಿಲ್ಲಬೇಕು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ನೇತೃತ್ವದಲ್ಲಿ ಏ15 ರಂದು ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಟಿ.ಎಂ ವೆಂಕಟೇಶ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕೂಡಲೇ ಜಿಲ್ಲಾಡಳಿತ ಬಗರ್ ಹುಕುಂ ಸಾಗುವಳಿ ಭೂಮಿಗಳ ಅರಣ್ಯ ಇಂಡೀಕರಣ ರದ್ದುಪಡಿಸಬೇಕು. ದೌರ್ಜನ್ಯ ಹಿಂಸೆ ಮೂಲಕ ಒಕ್ಕಲೆಬ್ಬಿಸಿರುವ ಎಲ್ಲಾ ರೈತರಿಗೆ ಸ್ವಾಧೀನ ವಾಪಸ್ಸು ನೀಡಬೇಕು. ಅರಣ್ಯ ಇಂಡೀಕರಣದ ಹೆಸರಿನಲ್ಲಿ ನೀಡುತ್ತಿರುವ ಕಂದಾಯ ಹಾಗೂ ಅರಣ್ಯ ಇಲಾಖೆ ನೋಟೀಸ್ ನೀಡುವುದು ನಿಲ್ಲಬೇಕು, ನೀಡಿರುವ ನೋಟೀಸ್ ಗಳನ್ನು ವಾಪಸ್ಸು ಪಡೆಯಬೇಕು. ತಕ್ಷಣ ಎಲ್ಲಾ ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ತಕ್ಷಣ ಹಕ್ಕುಪತ್ರ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ಕೃಷಿ ಪಂಪಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಬಾರದು, ಕೃಷಿ ಪಂಪ್ ಸೆಟ್ ಗಳ ಸ್ವಯಂ ವೆಚ್ಚ ಯೋಜನೆ ಹಿಂಪೆಡೆಯಬೇಕು, ವಿದ್ಯುತ್ ಖಾಸಗೀಕರಣ ಪ್ರಯತ್ನ ಕೂಡಲೇ ನಿಲ್ಲಿಸಬೇಕು ಚನ್ನರಾಯಪಟ್ಟಣ ಕೆಐಎಡಿಬಿಯ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ರದ್ದುಪಡಿಸಬೇಕು ರೈತ ವಿರೋಧಿ ಕಾರ್ಪೋರೇಟ್ ಪರ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ನೀತಿಯನ್ನು ಪಂಜಾಬ್ ಮಾದರಿಯಲ್ಲಿ ತಿರಸ್ಕರಿಸಬೇಕು ರೈತರ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ಮಾರುಕಟ್ಟೆ ಮಧ್ಯಪ್ರವೇಶಕ್ಕಾಗಿ ಕನಿಷ್ಠ 10 ಸಾವಿರ ಕೋಟಿ ರೂ ಗಳ ಅವರ್ತ ನಿಧಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು. ಕೆಲಸದ ದಿನಗಳು 200 ದಿನಕ್ಕೆ ಹೆಚ್ಚಿಸಬೇಕು. ಕೃಷಿ ಕೂಲಿಕಾರರ ಸಮಗ್ರ ರಕ್ಷಣೆಯ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ತರಬೇಕು.
ಕಾರ್ಮಿಕ ಕಾನೂನುಗಳನ್ನು ನಾಶ ಮಾಡುವ ನಾಲ್ಕು ಕಾರ್ಮಿಕ ಸಂಹಿತೆ ತಿರಸ್ಕರಿಸಬೇಕು, ಕನಿಷ್ಠ ದುಡಿಮೆ ಅವಧಿ 12 ಗಂಟೆಗಳಿಗೆ ಹೆಚ್ಚಿಸಿರುವ ಅದೇಶ ವಾಪಸ್ಸು ಪಡೆಯಬೇಕು ದಲಿತರ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು, ಎಸ್ ಸಿ ಎಸ್ ಪಿ / ಟಿ ಎಸ್ ಪಿ ಅನುದಾನ ದುರ್ಬಳಕೆ ನಿಲ್ಲಬೇಕು ಬಗರ್ ಹುಕುಂ ರೈತರ ಮೇಲೆ ಗೊಂಡಾವರ್ತನೆ ತೋರಿರುವ ಗುಬ್ಬಿ ಕಾಂಗ್ರೆಸ್ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕರಾಳ ಕೃಷಿ ಕಾಯ್ದೆಗಳು ,ಭೂ ಸ್ವಾಧೀನ ಕಾಯ್ದೆಗಳನ್ನು ರದ್ದುಪಡಿಸಬೇಕು ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ-ಯುವಜನ ಪರವಾದ ಪರ್ಯಾಯ ನೀತಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಆ,೧೫ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು
ಸಂಯುಕ್ತ ಹೋರಾಟ ಕರ್ನಾಟಕ ಕೋಲಾರ ಜಿಲ್ಲಾ ಸಮಿತಿಯ ಮುಖಂಡರಾದ ವಿಜಯಕೃಷ್ಣ, ಚಿನ್ನಾಪುರ ಮಂಜುನಾಥ, ಭೀಮರಾಜ್, ಸೀಸಂದ್ರ ವೆಂಕಟಾಚಲಪತಿ, ರಾಮಚಂದ್ರ, ರಾಜಪ್ಪ, ವೆಂಕಟೇಶಪ್ಪ ಮುಂತಾದವರು ಹಾಜರಿದ್ದರು