ಬೆಳೆ ಪರಿಹಾರ, ಬ್ಯಾಂಕ್ ನಿಂದ ಸಾಲ, ಕೃಷಿ ಮತ್ತು ಕೃಷಿಯೇತರ ಇಲಾಖೆಗಳಿಂದ ಸವಲತ್ತು ಪಡೆಯಲು ಪ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೋಂದಾಯಿಸಿಕೊಂಡು ತಮ್ಮ ತಾಕುಗಳನ್ನು ಸೇರ್ಪಡೆಗೊಳಿಸುವುದು ಕಡ್ಡಾಯವಾಗಿರುತ್ತದೆ.
ರೈತರಲ್ಲಿ ನೋಂದಣಿ ಮಾಡಿಸಿಕೊಳ್ಳುವ ಕುರಿತು ಅರಿವು ಮೂಡಿಸುತ್ತಿದ್ದರೂ ಇನ್ನು ಹಲವು ತಾಕುಗಳು ಸೇರ್ಪಡೆಗೆ ಬಾಕಿ ಉಳಿದಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ರೈತರ ತಾಕುಗಳನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ ಡಿ.26ರಿಂದ ಡಿ.30ರವರೆಗೆ ಅಭಿಯಾನ ಕೈಗೊಳ್ಳಲಾಗುತ್ತಿದೆ.
ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳನ್ನು ಹೋಬಳಿ ವ್ಯಾಪ್ತಿಗೆ ನಿಯೋಜಿಸಿದ್ದು ಅಭಿಯಾನದ ಅವಧಿಯಲ್ಲಿ ಹೆಚ್ಚಿನ ರೈತರು ತಮ್ಮ ತಾಕುಗಳನ್ನು ನೋಂದಾಯಿಸಿಕೊಳ್ಳುವಂತೆ ಕ್ರಮ ವಹಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು.
ಅಧಿಕಾರಿಗಳು ಅಭಿಯಾನದ ಸಮಯದಲ್ಲಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಅಗತ್ಯ ದಾಖಲೆಗಳನ್ನು (ಪಹಣಿ ಪತ್ರಿಕೆ, ಆಧಾರ್ ಸಂಖ್ಯೆ, ಬ್ಯಾಂಕ್ ಪಾಸು ಪುಸ್ತಕ, ಹಾಗೂ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪತಿಗಳನ್ನು ಒದಗಿಸಿ ಸಹಕರಿಸಬೇಕು.
ಅಲ್ಲದೇ, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಹಾಗೂ ಬಾಕಿಯಿರುವ ತಾಕುಗಳನ್ನು ಸೇರ್ಪಡೆಗೊಳಿಸುವ ಕುರಿತು ರೈತರ ಕರೆಗಳಿಗೆ ಮಾಹಿತಿ ನೀಡುವ ಸಲುವಾಗಿ ಉಪ ಕೃಷಿ ನಿರ್ದೇಶಕರ ಕಚೇರಿ, ಬೀರಸಂದ್ರ, ಬೆಂಗಳೂರು ಜಿಲ್ಲೆ ಇಲ್ಲಿ ರೈತರ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.
ರೈತರು ಅಭಿಯಾನದ ಅವಧಿಯಲ್ಲಿ ಹೆಚ್ಚಿನ ಮಾಹಿತಿಗಾಗಿ ಪೂರ್ವಾಹ್ನ 8.00 ರಿಂದ ಸಂಜೆ 7.00 ಗಂಟೆಯವರೆಗೆ ಸಹಾಯವಾಣಿ ಕೇಂದ್ರದ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ:080-26676143 ರೈತರು ಈ ಅವಕಾಶದ ಸದುಪಯೋಗವನ್ನು ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.