ಫವತಿ ಖಾತೆ ವಿಶೇಷ ಆಂದೋಲನ: ಅವಧಿ ವಿಸ್ತರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕು ವ್ಯಾಪ್ತಿಯ ರೈತ ಬಾಂಧವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಫವತಿ ಖಾತಾ ಪ್ರಕರಣಗಳು ಬಹಳಷ್ಟು ಇದ್ದು ಅವರ ವಾರಸುದಾರರು ಸರ್ವೆ ನಂಬರ್ ಗಳ ಫವತಿ ಖಾತೆ ಬದಲಾವಣೆ ಮಾಡಿಸಿಕೊಳ್ಳದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು ಈ ಬಗ್ಗೆ ವಿಶೇಷ ಆಂದೋಲನದ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಫವತಿ ಖಾತೆ ಪ್ರಕರಣಗಳನ್ನು ವಿಲೇವಾರಿ ಮಾಡಲು ಜನವರಿ 05 ರಿಂದ ಫೆಬ್ರವರಿ 05 ವರೆಗೆ ಅರ್ಜಿಗಳನ್ನು ಸ್ವೀಕರಿಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು.

ಆದರೆ ಫವತಿ ಖಾತೆ ಅರ್ಜಿಗಳು ನಿರೀಕ್ಷಿತ ಮಟ್ಟದಲ್ಲಿ ಸ್ವೀಕೃತವಾಗದ ಕಾರಣ ಹಾಗೂ ಇನ್ನೂ ಹೆಚ್ಚಿನ ರೈತರುಗಳು, ಫಲಾನುಭವಿಗಳು ಫವತಿ ಖಾತೆ ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶ ವಿಸ್ತರಿಸಲು ಕೋರಿರುವ ಮೇರೆಗೆ ಪಾವತಿ ವಾರಸು ಖಾತೆ ಆಂದೋಲನವನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿರುತ್ತದೆ.

ಖಾತೆ ಬದಲಾವಣೆಗೆ ಅರ್ಜಿಯೊಂದಿಗೆ ಅರ್ಜಿದಾರರ ಆಧಾರ್ ಕಾರ್ಡ್, ಗಣಕೀಕೃತ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಪ್ರಮಾಣ ಪತ್ರ ( affidavit) ಇನ್ನಿತರೆ ದಾಖಲಾತಿಗಳು (ಅಗತ್ಯವಿದ್ದಲ್ಲಿ) ಸಲ್ಲಿಸಬೇಕು.
ಆದ್ದರಿಂದ ರೈತರು ಮೇಲಿನ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರ್, ಗ್ರೇಡ್-2 ತಹಶೀಲ್ದಾರ್, ನಾಡಕಚೇರಿ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಅಥವಾ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ದಾಖಲಾತಿಗಳನ್ನು ಸಲ್ಲಿಸಿ ಸದುಪಯೋಗ ಪಡೆಯಲು ಹಾಗೂ ಫವತಿ ಖಾತೆ ಆಂದೋಲನವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *