ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಗೈದ ಸಿಎಂ ಸಿದ್ದರಾಮಯ್ಯ

ಸತ್ಯದ ನಾಡಾಗಿರುವ ಕರ್ನಾಟಕಕ್ಕೆ ಆಗಮಿಸಿರುವ ಸುಳ್ಳಿನ ಸರದಾರರಾದ ಸನ್ಮಾನ್ಯ ನರೇಂದ್ರ ಮೋದಿ ಅವರಿಗೆ ಸ್ವಾಗತ. ಕಾನೂನು ಪ್ರಕಾರ ಶಿಕ್ಷಾರ್ಹವಾಗಿರುವ ನಿಮ್ಮ ಸುಳ್ಳುಗಳ ಬಗ್ಗೆ ಯಾರೂ, ಯಾವುದೇ ಕ್ರಮ ಕೈಗೊಳ್ಳುವ ಸ‍್ಥಿತಿಯಲ್ಲಿ ಇಲ್ಲ ಎನ್ನುವುದು ನಮಗೂ ಗೊತ್ತಾಗಿದೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೋರುತ್ತೇನೆ. ನಿಮ್ಮ ಇತ್ತೀಚಿನ ಅತಿದೊಡ್ಡ ಸುಳ್ಳಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ನಿಮಗೆ ಕೇಳಬೇಕೆಂದಿದ್ದೇನೆ, ನಿಮ್ಮ ಇಂದಿನ ಭಾಷಣದಲ್ಲಿ ಆ ಪ್ರಶ್ನೆಗಳಿಗೆ ಉತ್ತರಿಸುವಿರೆಂದು ನಂಬಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

‘‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ’’ ಎಂಬ ಅಪ್ಪಟ ಸುಳ್ಳನ್ನು ನಿರ್ಲಜ್ಜವಾಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಿರಲ್ಲಾ? ಇದಕ್ಕೆ ನಿಮ್ಮಲ್ಲಿ ಆಧಾರ ಏನಿದೆ? ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯ ಯಾವ ಪುಟದಲ್ಲಿ ಈ ಭರವಸೆ ಇದೆ. ಯಾವ ಹಿರಿಯ ನಾಯಕರು ಇದನ್ನು ಹೇಳಿದ್ದಾರೆ? ದಯವಿಟ್ಟು ತಿಳಿಸಿ ಇಲ್ಲವಾದರೆ ಸುಳ್ಳು ಆರೋಪಕ್ಕಾಗಿ ಕನಿಷ್ಠ ವಿಷಾದವನ್ನಾದರೂ ಸೂಚಿಸಿ ಎಂದು ಆಗ್ರಹಿಸಿದ್ದಾರೆ.

ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಪಕ್ಷದ ವೇದಿಕೆಯಲ್ಲಿಯೂ ಚರ್ಚೆಯಾಗಿಲ್ಲ. ಆ ಚರ್ಚೆಯನ್ನು ಪಕ್ಷ ನಡೆಸಿದ್ದರೆ ಅದಕ್ಕೆ ಆಧಾರ ಕೊಡಿ. ಸ್ಯಾಮ್ ಪಿತ್ರೋಡಾ ಅವರು ಇದನ್ನು ಪ್ರಸ್ತಾಪಿಸಿ ಈ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿರುವುದು ನಿಜ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರದ ಚರ್ಚೆ ಶುರುಮಾಡಿರುವುದೇ ನಿಮ್ಮ ಸಹದ್ಯೋಗಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. 2019ರ ಬಜೆಟ್ ನಲ್ಲಿ ಇದನ್ನು ಸೇರಿಸುವ ಬಗ್ಗೆ ಚರ್ಚೆ ನಡೆದಿರುವುದಕ್ಕೆ ಆ ಕಾಲದ ಪತ್ರಿಕೆಗಳ ವರದಿಗಳೇ ಸಾಕ್ಷಿ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ಈಗ ನಿರ್ಮಲಾ ಸೀತಾರಾಮನ್ ಅವರನ್ನೂ ದೇಶದ್ರೋಹಿ ಪಟ್ಟಿಗೆ ಸೇರಿಸುವಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಪತ್ತಿನ ಸಮಾನ ಹಂಚಿಕೆ ಎನ್ನವುದು ಒಂದು ಉದಾತ್ತ ಚಿಂತನೆಯಾಗಿದೆ. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ನಮ್ಮ ದೇಶದಲ್ಲಿ 1953ರಲ್ಲಿಯೇ ಎಸ್ಟೇಟ್ ತೆರಿಗೆ ಹೇರಲಾಗಿತ್ತು. ಅದನ್ನು ರದ್ದು ಮಾಡಿದವರು ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು. 1998ರ ವರೆಗೆ ಚಾಲ್ತಿಯಲ್ಲಿದ್ದ ಗಿಫ್ಟ್ ತೆರಿಗೆಯನ್ನು ರದ್ದು ಮಾಡಿದವರು ಆಗಿನ ಪ್ರಧಾನಿ ಹೆಚ್.ಡಿ.ದೇವೇಗೌಡರು. ಮೋದಿಯವರೇ ನಿಮ್ಮದೇ ಸರ್ಕಾರ 2015ರಲ್ಲಿ ಸಂಪತ್ತಿನ ಮೇಲಿನ ತೆರಿಗೆಯನ್ನೂ ರದ್ದು ಮಾಡಿದೆ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮದು ಸೂಟುಬೂಟು ಸರ್ಕಾರ, ಶ್ರೀಮಂತರ ಪರ ಮತ್ತು ಬಡವರ ವಿರೋಧಿ ಸರ್ಕಾರ ಎನ್ನುವ ನಮ್ಮ ಆರೋಪ ಆಧಾರರಹಿತವಾದುದೇನಲ್ಲ. 2019ರಲ್ಲಿ ನಿಮ್ಮದೇ ಸರ್ಕಾರ ಶೇಕಡಾ 30ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ 22ಕ್ಕೆ ಇಳಿಸಿದೆ ಎನ್ನುವುದು ನಿಮಗೆ ತಿಳಿದಿರಲಿ. ಈ ಮೂರ್ಖತನದ ನಿರ್ಧಾರದಿಂದಾಗಿ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಕಳೆದುಕೊಂಡ ಆದಾಯ 1.81 ಲಕ್ಷ ಕೋಟಿ ರೂಪಾಯಿ. ದೇಶದ ಬಡವರ ಕಲ್ಯಾಣಕ್ಕಾಗಿ ವ್ಯಯವಾಗಬೇಕಾಗಿದ್ದ ಈ ಹಣ ಕಾರ್ಪೋರೇಟ್ ದೊರೆಗಳ ಜೇಬಿಗೆ ಸೇರಿದೆ. ಅವರ ಲಾಭದಲ್ಲಿ ಯಾರ ಪಾಲು ಎಷ್ಟು? ಪ್ರಧಾನಿ ಮೋದಿಯವರೇ, ಇದೇನಾ ನಿಮ್ಮ ಕಲ್ಪನೆಯ ಸಮಾನ ಆಸ್ತಿ ಹಂಚಿಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬುದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಡೆಸಿದಂತೆ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವುದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ರಾಜಕೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂಬುದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಖಚಿತ ಅಭಿಪ್ರಾಯವಾಗಿತ್ತು. ಪ್ರಧಾನಿ ಮೋದಿಯವರೇ ನೀವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದರೆ ಧೈರ್ಯದಿಂದ ಹಾಗೆಂದು ಹೇಳಿಬಿಡಿ. ಇದು ನಿಮ್ಮಿಂದ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಸಂಪತ್ತಿನ ಸಮಾನ ಹಂಚಿಕೆಯ ನಮ್ಮ ಆಶಯವನ್ನೇ ತಿರುಚಿ ಅದಕ್ಕೆ ಕೋಮುವಾದಿ ಬಣ್ಣ ಬಳಿಯಲು ಮುಂದಾಗಿರುವ ಜಾಣ ಪ್ರಧಾನಿಯವರೇ, ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿರುವ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವುದಾಗಿ ರಾಹುಲ್ ಗಾಂಧಿಯವರು ಹೇಳಿದ ಕೂಡಲೇ ನಿಮ್ಮ ಹೊಟ್ಟೆ ಉರಿಯುತ್ತಿರುವುದು ಯಾಕೆ? ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಪಾವತಿ ಮಾಡದೆ ನಿಮ್ಮ ಉದ್ಯಮ ಮಿತ್ರರು ವಿದೇಶಕ್ಕೆ ಪರಾರಿಯಾದಾಗ ನಿಮಗೆ ಹೊಟ್ಟೆ ಉರಿಯಲಿಲ್ಲವೇ? ಇದೇನಾ ನಿಮ್ಮ ಸಮಾನ ಆಸ್ತಿ ಹಂಚಿಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ದೇಶದ ರೈತರು ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕಳೆದ ಹತ್ತು ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆ ಬೇಡಿಕೆಯನ್ನು ತಳ್ಳಿ ಹಾಕುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರೇ ಉದ್ಯಮಿಗಳಿಗೆ ಸೇರಿರುವ 16 ಲಕ್ಷ ಕೋಟಿ ರೂಪಾಯಿಯನ್ನು ಒಂದೇ ಏಟಿಗೆ ಮನ್ನಾ ಮಾಡಿದಾಗ ದೇಶದ ಆಸ್ತಿಯನ್ನು ಸಮಾನ ಹಂಚಿಕೆಮಾಡಬೇಕೆಂದು ನಿಮಗೆ ಅನಿಸಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರೂ 33, ಲಾಲ್ ಬಹದ್ದೂರ್ ಶಾಸ್ತ್ರಿ 5, ಇಂದಿರಾ ಗಾಂಧಿಯವರು 66, ರಾಜೀವ್ ಗಾಂಧಿಯವರು 16, ವಿ.ಪಿ.ಸಿಂಗ್ ಅವರು 2, ಐ.ಕೆ.ಗುಜ್ರಾಲ್ ಅವರು 3, ವಾಜಪೇಯಿ ಅವರು 17 ಮತ್ತು ಮನಮೋಹನ್ ಸಿಂಗ್ ಅವರು 23 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ನೀವು ಒಂದೇ ಒಂದು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಿಲ್ಲ. ನಿಮ್ಮ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ 23 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದೀರಿ. ನಿಮ್ಮ ಕಲ್ಪನೆಯ ಸಮಾನ ಆಸ್ತಿ ಹಂಚಿಕೆ ಎಂದರೆ ಇದೇನಾ? ಎಂದಿದ್ದಾರೆ.

ನಮ್ಮ ಕಾಂಗ್ರೆಸ್ ಪಕ್ಷ ಭೂ ಸುಧಾರಣೆ ಕಾಯ್ದೆಯ ಮೂಲಕ ಉಳುವವನನ್ನೇ ಭೂಮಿಯ ಒಡೆಯರನ್ನಾಗಿ ಮಾಡಿ, ಭೂ ರಹಿತರಿಗೆ ಭೂಮಿ ಹಂಚಿಕೆ ಮಾಡಿತು. ಮನೆ ಇಲ್ಲದವರಿಗೆ ಮನೆ, ಶಿಕ್ಷಣಕ್ಕಾಗಿ ಶಾಲೆ, ಆನಾರೋಗ್ಯ ಹೋಗಲಾಡಿಸಲು ಆಸ್ಪತ್ರೆಗಳನ್ನು ನಿರ್ಮಿಸಿತು ಎಂದು‌ ಹೇಳಿದ್ದಾರೆ.

ನಿಮ್ಮ ಹತ್ತು ವರ್ಷಗಳಲ್ಲಿ ನೀವು ಆಸ್ತಿಮಾಡಿಕೊಟ್ಟಿದ್ದು ಅದಾನಿ-ಅಂಬಾನಿಗಳಿಗೆ ಮಾತ್ರ ಅಲ್ಲವೇ? ವಿಮಾನ ನಿಲ್ದಾಣಗಳು,ಬಂದರುಗಳು, ಕಲ್ಲಿದ್ದಲು ಗಣಿಗಳು, ಅನಿಲ-ತೈಲ ನಿಕ್ಷೇಪಗಳು, ಹೆದ್ದಾರಿ ಟೋಲುಗಳು, ವಿದ್ಯುತ್ ನಿಗಮಗಳು ಒಂದೇ ಎರಡೇ ಇವೆಲ್ಲವೂ ನಿಮ್ಮ ಕಾಲದಲ್ಲಿಯೇ ಅಲ್ಲವೇ ಅದಾನಿ-ಅಂಬಾನಿ ಮಡಿಲು ಸೇರಿದ್ದು? ಇದೇನಾ ನಿಮ್ಮ ಸಮಾನ ಆಸ್ತಿ ಹಂಚಿಕೆ? ಎಂದು ಪ್ರಶ್ನೆ‌ ಮಾಡಿದ್ದಾರೆ.

Ramesh Babu

Journalist

Recent Posts

ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್

  ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…

8 hours ago

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣದ ಪಾಲು

ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…

11 hours ago

ಆಸ್ತಿ ವ್ಯಾಮೋಹಕ್ಕೆ ಹೆತ್ತ ತಾಯಿಯ ಕೊಲೆ: ಕಲ್ಲು ಎತ್ತಿ ಹಾಕಿ ಕೊಂದ ಮಗ.!

ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…

11 hours ago

ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್….! ಏಕೆ ಗೊತ್ತಾ….?

ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…

12 hours ago

ಪಿಟಿಸಿಎಲ್ ಕಾಯ್ದೆ ವಿರುದ್ದ ತೀರ್ಪು ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯ

ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…

13 hours ago

ಸಾಲದ ಸುಳಿಗಿಂತಲೂ ಕಿರುಕುಳವೇ ಮಾರಕ…

ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…

18 hours ago