ಪ್ರತಿ ಗ್ರಾಮ ಪಂಚಾಯಿತಿ ಗ್ರಂಥಾಲಯವು ಮಕ್ಕಳ ಸ್ನೇಹಿ ಗ್ರಂಥಾಲಯವಾಗಬೇಕು. ಮಕ್ಕಳ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ನೀಡಿ ಬಾಲ್ಯದಿಂದಲೇ ಓದಿನ ಅಭಿರುಚಿ ಬೆಳಸಬೇಕು ಎಂದು ಎಎನ್ಎಸ್ಎಸ್ಐಆರ್ ಡಿ ಜಿಲ್ಲಾ ತರಬೇತಿ ಸಂಯೋಜಕ ಬೈಲಾಂಜಿನ ಮೂರ್ತಿ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ಕುರಿತು ಮೂರು ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಂಥಾಲಯ ಮೇಲ್ವಿಚಾರಕರಿಗೆ ಸಮಯ ಪಾಲನೆ, ಶಿಸ್ತು ಪಾಲನೆ, ಹೊಸ ಹೊಸ ಮಕ್ಕಳ ನೋಂದಣಿ ಮಾಡಿಸುವುದು, ಮಕ್ಕಳು ಪ್ರತಿನಿತ್ಯ ಗ್ರಂಥಾಲಯಕ್ಕೆ ಬಂದು ಓದುವ ಹಾಗೆ ಪ್ರೇರೇಪಿಸಬೇಕು ಎಂದರು.
ಇತ್ತೀಚಿನ ಮಕ್ಕಳು ಮೊಬೈಲ್ ಗೀಳಿಗೆ ದಾಸರಾಗಿದ್ದು, ಅದರಿಂದ ಅವರನ್ನು ಹೊರತಂದು ಗ್ರಂಥಾಲಯದಲ್ಲಿ ಪುಸ್ತಕ ಹಿಡಿದು ಓದುವಂತ ವಾತಾವರಣ ಸೃಷ್ಟಿಸಬೇಕು. ಸಣ್ಣ ಕಥೆ, ಕಥೆ ಪುಸ್ತಕ, ಪರಿಸರ, ನೈರ್ಮಲ್ಯ, ಕ್ರೀಡೆ, ಮನರಂಜನಾ ಪುಸ್ತಕ, ಬಣ್ಣಬಣ್ಣದ ಚಿತ್ರಗಳಿರುವ ಪುಸ್ತಕಗಳನ್ನು ನೀಡಿ ಓದುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಮಕ್ಕಳು ಪುಸ್ತಕಗಳನ್ನು ಓದುವುದರಿಂದ ಮಾನಸಿಕವಾಗಿ ಪರಿಪಕ್ವವಾಗಿ ತನ್ನ ಆಲೋಚನಾ ಕ್ರಮ ಬದಲಾಗುತ್ತದೆ. ಸೃಜನಾತ್ಮಕ ಚಿಂತನೆ ಬೆಳೆಯುತ್ತದೆ. ಅಕ್ಷರ ಜ್ಞಾನ ವೃದ್ಧಿಯಾಗಿ ಭಾಷೆ ಬಗ್ಗೆ ಹಿಡಿತಸಿಗುತ್ತದೆ. ವಿಷಯ ತಿಳಿದುಕೊಂಡಷ್ಟು ಪ್ರಶ್ನೆ, ವಿಮರ್ಶೆ ಮಾಡುವ ಮನೋಭಾವ ಬೆಳೆಯುತ್ತದೆ ಆದ್ದರಿಂದ ವಿಶ್ವಾಸದ ಮೂಲಕ ಮಕ್ಕಳನ್ನು ಗ್ರಂಥಾಲಯದ ಕಡೆ ಸೆಳೆದು ಓದುವ ಹವ್ಯಾಸ ಹೆಚ್ಚಿಸಬೇಕು ಎಂದು ಸೂಚಿಸಿದರು.
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ದೇಶದ ಅಭಿವೃದ್ಧಿಗೆ ಗ್ರಂಥಾಲಯಗಳು ಮಹತ್ತರವಾದ ಪಾತ್ರ ವಹಿಸುತ್ತವೆ ಎಂದರು.
2021ರಲ್ಲಿ ಮಕ್ಕಳಿಗೆ ‘ಓದುವ ಬೆಳಕು’ ಯೋಜನೆಯಡಿ ಗ್ರಂಥಾಲಯದಲ್ಲಿ ಉಚಿತ ನೋಂದಣಿ ಮಾಡಿಸುವ ಮೂಲಕ ಗ್ರಂಥಾಲಯದತ್ತ ಹೆಜ್ಜೆ ಹಾಕುವಂತೆ ಮಾಡಲಾಯಿತು.
ಸಾರ್ವಜನಿಕರನ್ನು ವಿಶ್ವಾಸ, ಸೌಜನ್ಯದಿಂದ ಗ್ರಂಥಾಲಯಕ್ಕೆ ಸೆಳೆಯಬಹುದು. ವಿಶೇಷ ಚೇತನರಿಗಾಗಿ ಪ್ರತಿಯೊಂದು ಗ್ರಂಥಾಲಯಗಳಲ್ಲಿ ರ್ಯಾಂಪ್ ವ್ಯವಸ್ಥೆ ಮಾಡಬೇಕು. ಗ್ರಂಥಾಲಯದ ಸಹಾಯದಿಂದ ಓದಿ ಉತ್ತಮ ಸ್ಥಾನಕ್ಕೇರಿರುವ ಮಹನೀಯರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಎಂದರು.
ತರಬೇತಿ ನಿರ್ವಾಹಕಿ ರಮಾಮಣಿ, ಸಂಪನ್ಮೂಲ ವ್ಯಕ್ತಿ ರಂಗಸ್ವಾಮಿ, ತಾ.ಪಂ ಎಓ ವೆಂಕಟರಾಜು, ಟಿಪಿಓ ರಾಮಾಂಜಿನಯ್ಯ, ವ್ಯವಸ್ಥಾಪಕ ವೆಂಕಟೇಶ್ ಬಾಬು ಸೇರಿದಂತೆ ಮತ್ತಿತರರು ಇದ್ದರು.
ಇದರ ಜೊತೆಗೆ ಗ್ರಂಥಾಲಯದಲ್ಲಿ ವೈಜ್ಞಾನಿಕ ನಿರ್ವಹಣೆಗಾಗಿ ಡಿಡಿಸಿ ಅಥವಾ ಸಿ.ಸಿ. ಯ ಕ್ಲಾಸಿಫಿಕೆಷನ್ ಗೆ ಮೇಲ್ವಿಚಾರಕರಿಗೆ ತರಬೇತಿ ನೀಡಿ ಪುಸ್ತಕಗಳ ವಿಂಗಡಣೆಗೆ ಹೆಚ್ಚು ಒತ್ತು ನೀಡುವುದು ಸೂಕ್ತ.