ಪ್ರತಿಯೊಬ್ಬ ವಿದ್ಯಾರ್ಥಿ ಕ್ರೀಯಾಶೀಲತೆ, ಪ್ರಶ್ನೆ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು. ಇದರ ಜೊತೆಗೆ ಆಧುನಿಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಅರಿವು ವೃದ್ಧಿಸಿಕೊಳ್ಳಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಗುರುವಾರ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ, ನಗರದ ನೆಲದಾಂಜನೇಯಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ ಹಾಗೂ ಬೆಂಗಳೂರಿನ ಬ್ಲಾಸಮ್ ಆಸ್ಪತ್ರೆ ವತಿಯಿಂದ ನಡೆದ ಕಾರ್ಮಿಕರ ಉಚಿತ ಆರೋಗ್ಯ ತಪಾಸಣ ಶಿಬಿರ, ಲ್ಯಾಪ್ ಟಾಪ್ ವಿತರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿ, ಖಾಸಗಿ ಉದ್ಯೋಗ ಸಂಸ್ಥೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾಗದ ರಹಿತ ವ್ಯವಸ್ಥೆಯನ್ನ ಅಳವಡಿಸಿಕೊಳ್ಳಲಾಗುತ್ತಿದೆ. ಕಂಪ್ಯೂಟರ್ ಜ್ಞಾನವು ಶಿಕ್ಷಣದ ಒಂದು ಭಾಗವೇ ಆಗಿದೆ. ಕಾರ್ಮಿಕರ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕಾರ್ಮಿಕ ಇಲಾಖೆ ನೀಡುತ್ತಿರುವ ಲ್ಯಾಪ್ ಟಾಪ್ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ದೇಶವನ್ನು ಕಟ್ಟುವ ಕೆಲಸದಲ್ಲಿ ಕಟ್ಟಡ ಕಾರ್ಮಿಕರ ಕೊಡುಗೆಯು ಮಹತ್ವದ್ದಾಗಿದೆ. ಕಟ್ಟಡ ನಿರ್ಮಾಣ ಕೆಲಸದಲ್ಲಿ ನೂತನ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಕುರಿತು ಕಾರ್ಮಿಕರು, ಮೇಸ್ತ್ರಿಗಳಿಗೆ ತರಬೇತಿಗಳನ್ನು ನೀಡುವ ಕಡೆಗೂ ಕಾರ್ಮಿಕ ಇಲಾಖೆ ಗಮನ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಸಂಸ್ಥಾಪಕ ಸಲಹೆಗಾರ ಪ್ರೊ.ಚಂದ್ರಪ್ಪ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ವತಿಯಿಂದ ಸೂಕ್ತ ರೀತಿಯಲ್ಲಿ ಕಟ್ಟಡ ಪರವಾನಗಿ ಸಮಯದಲ್ಲಿ ಸಂಗ್ರಹವಾಗುವ ಸೇಸ್ ನ್ನು ಕಾರ್ಮಿಕ ಇಲಾಖೆಗೆ ಜಮೆ ಮಾಡುತ್ತಿಲ್ಲ. ಇದರಿಂದಾಗಿ ಕಾರ್ಮಿಕ ಇಲಾಖೆಯ ನಿಧಿಗೆ ಹಣ ಸಂಗ್ರಹ ಕಡಿಮೆಯಾಗುತ್ತಿದೆ.ಇದರಿಂದ ಕಾರ್ಮಿಕ ಮಕ್ಕಳಿಗೆ ನೀಡಲಾಗಿತ್ತಿದ್ದ ವಿದ್ಯಾರ್ಥಿ ವೇತನ ಕಡಿಮೆಯಾಗಿದೆ. ಈ ಬಗ್ಗೆ ಶಾಸಕರು ಸರ್ಕಾರದ ಗಮನಕ್ಕೆ ತರುವ ಮೂಲಕ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆರ್ಥಿಕ ನೆರವು ದೊರೆಯುವಂತೆ ಮಾಡಬೇಕು ಎಂದರು.
ಕಾರ್ಮಿಕ ಇಲಖೆಯ ಜಿಲ್ಲಾ ಮಟ್ಟದ ಅಧಿಕಾರಿ ಎಚ್.ಆರ್.ನಾಗೇಂದ್ರ ಮಾತನಾಡಿ, ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪಿಯುಸಿ ಹಂತದಲ್ಲೇ ಲ್ಯಾಪ್ ಟಾಪ್ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಪದವಿ ಹಂತದ ಶಿಕ್ಷಣದವರೆಗೂ ಲ್ಯಾಪ್ಟಾಪ್ಗಳು ಉಪಯೋಗಕ್ಕೆ ಬರಲಿವೆ. ತಾಲ್ಲೂಕಿನ 40 ಜನ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅರವಿಂದ ಶಂಕರಗೌಡ ವಹಿಸಿದ್ದರು. ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎಸ್.ಸುಬ್ಬರಾವ್, ಕಾರ್ಮಿಕ ಇಲಾಖೆ ನಿರೀಕ್ಷಕ ದಯಾನಂದಸಾಗರ್, ಸಂಘದ ಕಾರ್ಯದರ್ಶಿ ಜಗದೀಶ್, ಸಂಘಟನ ಕಾರ್ಯದರ್ಶಿ ರುದ್ರಮೂರ್ತಿ, ಖಜಾಂಚಿ ಸಿ.ಸತೀಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ನಗರಸಭೆ ಸದಸ್ಯರಾದ ಭಾಸ್ಕರ್, ಬಂತಿವೆಂಕಟೇಶ್ ವತ್ಸಲಾ, ಹಂಸಪ್ರಿಯಾ, ಪದ್ಮನಾಭ್, ಲಕ್ಷ್ಮೀಪತಿ, ನಾಗರತ್ನ, ರಾಜಣ್ಣ ಸೇರಿದಂತೆ ಇತರರು ಇದ್ದರು.