ಪ್ರತಿಯೊಬ್ಬರೂ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು. ಸಮಾಜದಲ್ಲಿ 850 ವರ್ಷಗಳ ಹಿಂದೆಯೇ ಮೌಢ್ಯಗಳನ್ನು ಬಿಟ್ಟು ವಿಚಾರವಂತಿಕೆ ಬೆಳೆಸಿಕೊಳ್ಳಬೇಕು ಎಂದು ಬಸವಾದಿ ಶರಣರು ಸಾರಿದ್ದರು. ಶಿಕ್ಷಿತರಾದ ಮೇಲೆ ವೈಜ್ಞಾನಿಕವಾಗಿ ಚಿಂತನೆ ಮಾಡುವ ಶಕ್ತಿ ಅಗತ್ಯ. ಉನ್ನತ ಶಿಕ್ಷಣ ಪಡೆದೂ ಕಂದಾಚಾರಗಳಿಗೆ ಜೋತು ಬಿದ್ದರೆ ಅವರನ್ನು ಶಿಕ್ಷಿತರು ಎಂದು ಹೇಳಾಗದು. ಸಮಾಜದ ಜೊತೆಗೆ ಸ್ಪಂದಿಸುವ ಜ್ಞಾನವಿರಬೇಕು. ಆಗ ಮಾತ್ರ ಅವರನ್ನು ಸುಶಿಕ್ಷಿತರು ಎಂದು ಕರೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸ್ವಾಮಿ ವಿವೇಕಾನಂದ ಎಜುಕೇಶನಲ್ ಇನ್ಸ್ಟಿಟ್ಯೂಟ್ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಹಾಗೂ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಬರೀ ಓದು – ಬರೆಯಲು ಮಾತ್ರವಲ್ಲದೆ ಸಾಮಾಜಿಕ ವ್ಯಕ್ತಿಯಾಗಿ ಸಮಾಜದ ಜವಾಬ್ದಾರಿಯನ್ನು ಹೊರುವ, ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು. ಮಕ್ಕಳಿಗೆ ವೈಚಾರಿಕತೆ ತುಂಬಿ ಬೆಳಸಬೇಕು ಎನ್ನುವುದನ್ನು ಪ್ರತಿಯೊಬ್ಬ ಗುರುಗಳು ಬೆಳೆಸಿಕೊಳ್ಳಬೇಕು. ಶಿಕ್ಷಕರಲ್ಲಿ ವೈಚಾರಿಕತೆ ಬಂದರೆ ಮಕ್ಕಳಿಗೆ ಕೂಡ ಅದು ಬರಲು ಸಾಧ್ಯ. ಕೇವಲ ಇಂಗ್ಲಿಷ್ ನಲ್ಲಿ ಮಾತನಾಡಿದರೆ ಅದು ಶಿಕ್ಷಣವಲ್ಲ ಎಂದರು.
ಗುರುದೇವೋಭವ ಎಂದು ಕರೆಯಲ್ಪಡುವ ಶಿಕ್ಷಕರು, ರೈತರು ಹಾಗೂ ಸೈನಿಕರನ್ನು ಹೆಚ್ಚು ಗೌರವದಿಂದ ಕಾಣುತ್ತೇವೆ. ತಂದೆತಾಯಿಗಳ ಮೇಲೂ ಶಿಕ್ಷಣ ನೀಡುವ ಹೊಣೆಯಿದೆ. ಇಂಗ್ಲಿಷ್ ಕಲಿಯಬೇಕು, ಆದರೆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೆ ಹೆಚ್ಚು ಸುಲಭವಾಗಿ ಅರ್ಥವಾಗುತ್ತದೆ ಎಂದು ತಿಳಿಸಿದರು.
ನಮ್ಮ ಕ್ಷೇತ್ರದ ಮಕ್ಕಳು ವಿದ್ಯಾವಂತರಾದರೆ ಅದಕ್ಕಿಂತ ಸಂತೋಷ ಬೇರೆ ಯಾವುದೂ ಇಲ್ಲ. 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ಕಡ್ಡಾಯ ಹಾಗೂ ಅದು ಮೂಲ ಭೂತ ಹಕ್ಕಾಗಿದೆ. ನೂರಕ್ಕೆ ನೂರರಷ್ಟು ಮಕ್ಕಳು ವಿದ್ಯಾವಂತರಾಗಬೇಕು. ದೇಶದಲ್ಲಿ ಕೇವಲ 76 % ಮಾತ್ರ ವಿದ್ಯಾವಂತರಿದ್ದಾರೆ . 75 ವರ್ಷಗಳಾದರೂ ಎಲ್ಲರೂ ಶಿಕ್ಷಣ ಪಡೆದಿಲ್ಲ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ಮನೆ ಮನೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಚಿತ ವಿದ್ಯುತ್, 2,000 ಸಾವಿರ ರೂ. 5 ಕೆಜಿ ಹೆಚ್ಚುವರಿ ಅಕ್ಕಿ ಕೊಡುವ ಯೋಜನೆಗಳನ್ನು ಬಡವರಿಗೆ ನೀಡುವುದು ಖರ್ಚು ಮಾಡುವ ಶಕ್ತಿ ಬರಲಿ ಎಂದು. ಸಾರ್ವತ್ರಿಕ ಮೂಲ ಆದಾಯದ ಆಧಾರದಲ್ಲಿ ಈ ಯೋಜನೆಗಳು ಜಾರಿಯಾಗಿವೆ ಎಂದು ಹೇಳಿದರು.