ಪ್ಯಾಲೆಸ್ಟೈನ್ ಯುದ್ದ ನಿಲ್ಲಿಸಲು ಪ್ರಧಾನಿ ಮೋದಿ ಮಧ್ಯೆ ಪ್ರವೇಶಿಸಬೇಕು- ಸಿಪಿಐಎಂ ಒತ್ತಾಯ

ಕೋಲಾರ: ಪ್ಯಾಲೆಸ್ಟೀನ್ ದೇಶದ ಜನರ ಮೇಲೆ ನಿರಂತರವಾಗಿ ನಡೆಯುತ್ತಲೇ ಇರುವ ಯುದ್ಧವನ್ನು ನಿಯಂತ್ರಿಸಲು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪ್ರಯತ್ನಿಸಬೇಕು ಎಂದು ಒತ್ತಾಯಿಸಿ ನಗರದ ತಹಶಿಲ್ದಾರ್ ಕಚೇರಿ ಮುಂದೆ ಸೋಮವಾರ ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕಳೆದ 2023ರ ಅಕ್ಟೋಬರ್‌ನಿಂದ ಗಾಜಾ ಪಟ್ಟಿ ಮೇಲೆ ಇಸ್ರೇಲ್ ದೇಶವು ನಡೆಸುತ್ತಿರುವ ಅಮಾನವೀಯ ಯುದ್ಧ ಎಂಟು ತಿಂಗಳು ಕಳೆದರು ಮುಂದುವರಿಯುತ್ತಲೇ ಇದ್ದು, ಜಗತ್ತಿನಾದ್ಯಂತ ಸ್ವಾತಂತ್ರ್ಯ ಹಾಗೂ ಶಾಂತಿಪ್ರಿಯ ಜನರಲ್ಲಿ ಕಳವಳ ಮೂಡಿಸಿದೆ. ತನ್ನದೇ ಸ್ವಂತ ದೇಶವನ್ನು ಹೊಂದುವ ಪ್ಯಾಲೆಸ್ಟೀನ್ ಜನರ ಮಹತ್ತರವಾದ ಆಕಾಂಕ್ಷೆಗೆ ದನಿಯಾಗಿ ಹೋರಾಡುತ್ತಿರುವ ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ನೆಪವಾಗಿಟ್ಟುಕೊಂಡು ಈ ಬಾರಿ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಪೂರ್ಣ ಪ್ರಮಾಣದ ಯುದ್ಧವನ್ನೇ ಸಾರಿದೆ ಎಂದು ಆರೋಪಿಸಿದರು.

ಪ್ಯಾಲೆಸ್ತೀನಿ ಜನರು ಏಳು ದಶಕಗಳಿಂದ ನೆಲ ಮತ್ತು ನೆಲೆ ಕಳೆದುಕೊಳ್ಳುವಿಕೆ ಹಾಗೂ ವಸಾಹತುಶಾಹಿ ಅತಿಕ್ರಮಣದ ಕಷ್ಟ ನಷ್ಟಕ್ಕೆ ಗುರಿಯಾಗಿದ್ದಾರೆ. ಇಸ್ರೇಲ್ 1948ರಲ್ಲಿ ಅವರನ್ನು ತಾಯ್ನೆಲದಿಂದ ಹೊರಗಟ್ಟಿದೆ. ಭಾರತ ತನ್ನ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಪ್ಯಾಲೆಸ್ಟೀನಿ ಜನರಿಗೆ ಪೂರ್ಣ ಸಹಾನುಭೂತಿ ಮತ್ತು ಸೌಹಾರ್ದತೆ ವ್ಯಕ್ತಪಡಿಸುತ್ತಾ ಬಂದಿದೆ. ಆದರೆ ಆ ದೇಶದಲ್ಲಿ ಅಸಹಾಯಕವಾದರೂ ಕೆಚ್ಚೆದೆಯಿಂದ ಬದುಕುತ್ತಿರುವ ಧೀರ ಜನರ ಮೇಲೆ ದಬ್ಬಾಳಿಕೆ ನಡೆಸುವವರ ಪರವಾಗಿ ಹೋಗುತ್ತಿರುವಂತೆ ಕಾಣುತ್ತಿದ್ದು ಭಾರತ ಅನುಸರಿಸಿಕೊಂಡು ಬಂದ ಅಲಿಪ್ತ ನೀತಿಗೇ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಪ್ರಸಕ್ತ ಯುದ್ಧದಲ್ಲಿ ಈವರೆಗೆ 36 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದು ಅವರಲ್ಲಿ ಗಣನೀಯ ಸಂಖ್ಯೆಯ ಮುಗ್ಧ ಮಕ್ಕಳು ಮತ್ತು ಮಹಿಳೆಯರು ಇರುವುದು ಹೃದಯ ಕಲಕುವ ಸಂಗತಿಯಾಗಿದೆ. ಈ ಸಮರವನ್ನು ಮುಂದುವರಿಸಿದರೆ ಮಾನವ ದುರಂತವೇ ಸಂಭವಿಸಲಿದೆ ಎಂಬ ವಿಶ್ವ ಸಂಸ್ಥೆಯ ಅಭಿಪ್ರಾಯವನ್ನು ಧಿಕ್ಕರಿಸಿರುವ ಇಸ್ರೇಲ್ ಧೋರಣೆಗೆ ಅಮೆರಿಕದಂತೆ ಭಾರತ ಸರಕಾರ ಕೂಡ ಬೆಂಬಲ ನೀಡುತ್ತಿರುವುದು ಖಂಡನೀಯವಾಗಿದೆ ಎಂದರು.

ತನ್ನ ಸ್ವಂತ ದೇಶದ ಕನಸನ್ನು ಸಾಕಾರಗೊಳಿಸಲು ಹೋರಾಡುತ್ತಿರುವ ಪ್ಯಾಲೆಸ್ಟೀನಿ ಜನರ ಪರವಾಗಿ ನಿಲ್ಲುವುದು ಮಹಾನ್ ಸಾಮ್ರಾಜ್ಯಶಾಹಿ ವಿರೋಧಿ ಹಾಗೂ ವಸಾಹತುಶಾಹಿ ವಿರೋಧಿ ಪರಂಪರೆಯನ್ನು ಹೊಂದಿರುವ ಭಾರತದ ಆದ್ಯ ರಾಜಕೀಯ ಹಾಗೂ ಮಾನವೀಯ ಕರ್ತವ್ಯವಾಗಿದೆ. ಆದ್ದರಿಂದ, ಗಾಜಾ ಪಟ್ಟಿಯಲ್ಲಿ ಯುದ್ಧ ಮುಂದುವರಿಸಲು ಅನುಕೂಲವಾಗುವಂತೆ ಇಸ್ರೇಲ್‌ಗೆ ಯಾವುದೇ ರೀತಿಯ ಸಹಾಯ-ಸಹಕಾರ ನೀಡಬಾರದೆಂದು ಹಾಗೂ ಜಾಗತಿಕ ರಂಗದಲ್ಲಿ ಭಾರತ ಹೊಂದಿರುವ ಪ್ರತಿಷ್ಠೆ-ಪ್ರಭಾವವನ್ನು ಬಳಸಿಕೊಂಡು ಮಧ್ಯಪ್ರವೇಶಿಸಿ ಯುದ್ಧವನ್ನು ಕೊನೆಗೊಳಿಸಲು ಗರಿಷ್ಠ ಪ್ರಯತ್ನವನ್ನು ಮೋದಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪಿ.ಶ್ರೀನಿವಾಸ್, ಪಿ.ಆರ್.ಸೂರ್ಯನಾರಾಯಣ, ಮುಖಂಡರಾದ ಪಿ.ತಂಗರಾಜ್, ಎಸ್.ಡಿ. ಆನಂದರಾಜ್, ಪಿ.ಆರ್.ಶಂಕರ್, ಎಂ.ವಿಜಯಕೃಷ್ಣ, ಹನುಮಂತರಾಯ, ಅಪ್ಪಯ್ಯಣ್ಣ ವಿ.ನಾರಾಯಣರೆಡ್ಡಿ, ಎನ್.ಎನ್.ಶ್ರೀರಾಮ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *