ಆನೇಕಲ್ : ಕಾನೂನು ರಕ್ಷಣೆ ಮಾಡುವ ಪೊಲೀಸರೇ ತಮ್ಮ ಕರ್ತವ್ಯ ಮರೆತು ಪರಸ್ಪರ ಹೊಡೆದಾಡಿಕೊಂಡರೆ ಯಾರನ್ನೂ ಕೇಳುವುದು.. ಇದೀಗ ಅಂತಹದ್ದೇ ಒಂದು ಘಟನೆ ರಾಜ್ಯ ಗಡಿಭಾಗ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.
ಗೋವಿಂದರಾಜನಗರ ಪೊಲೀಸರಿಂದ ಅತ್ತಿಬೆಲೆ ಪೊಲೀಸ್ ಠಾಣೆಯ ಮುಖ್ಯಪೇದೆ ಆದ ಅಪ್ರೋಜ್ ಖಾನ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದೀಗ ಹಲ್ಲೆ ನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಗೋವಿಂದರಾಜನಗರ ಠಾಣೆಯ ಪೊಲೀಸರು ಅತ್ತಿಬೆಲೆ ಟೋಲ್ ಬಳಿ ಇನೋವಾ ಮತ್ತು ಸ್ವಿಫ್ಟ್ ಕಾರಿನಲ್ಲಿ ಎಂಟಕ್ಕೂ ಅಧಿಕ ಪೊಲೀಸರು ನಿಲ್ಲಿಸಿಕೊಂಡಿದ್ದರು. ಈ ವೇಳೆ ಮುಖ್ಯಪೇದೆ ಅಪ್ರೋಜ್ ಖಾನ್ ಅವರ ಮಗ ಅಲಿಅಜಗರ್ ಖಾನ್ ಬೇಕರಿಗೆ ಬೈಕ್ನಲ್ಲಿ ಬಂದಿದ್ದ..
ಅಲಿಅಜಗರ್ ಖಾನ್ನ ಬರುತ್ತಿದ್ದಂತೆ ಬೈಕ್ ಅಡ್ಡಗಟ್ಟಿದ ಗೋವಿಂದರಾಜನಗರ ಪೊಲೀಸರು ದಾಖಲಾತಿ ನೀಡುವಂತೆ ಕೇಳಿದ್ದಾರೆ. ಅಲ್ಲದೇ ಅಲಿಅಜಗರ್ ಖಾನ್ನ ಕತ್ತಿನ ಪಟ್ಟಿಯನ್ನು ಹಿಡಿದು ಹಲ್ಲೆ ಮಾಡಿದ್ದಾರೆ.
ಈ ವೇಳೆ ಪೊಲೀಸರು ಹಲ್ಲೆ ನಡೆಸುತ್ತಿದ್ದಂತೆ ಅಲಿ ನನ್ನ ತಂದೆ ಪೊಲೀಸ್ ಎಂದು ಹೇಳಿದ್ದಾನೆ. ಇದರಿಂದ ಇನ್ನಷ್ಟು ಸಿಟ್ಟಾದ ಪೊಲೀಸರು ಇನ್ನಷ್ಟು ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಅಪ್ರೋಜ್ ಖಾನ್ ಬಂದು ನನ್ನ ಮಗನನ್ನು ಏಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ನೀನು ಯಾವ ಪೊಲೀಸ್ ಎಂದು ಮೊಬೈಲ್ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕಾರಿನಲ್ಲಿ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಅಪ್ರೋಜ್ ಖಾನ್ ದೂರು ನೀಡಲು ಹೋಗಿದ್ದಾರೆ. ಆದರೆ, ಡಿವೈಎಸ್ಪಿ ಮೋಹನ್ ಕುಮಾರ್, ಇನ್ಸ್ ಪೆಕ್ಟರ್ ರಾಘವ್ ರಿಂದ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.