ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಜೆಡಿಎಸ್-ಬಿಜೆಪಿ ಒತ್ತಾಯ

ಕೋಲಾರ: ಪ್ರಜ್ವಲ್ ರೇವಣ್ಣ ಅವರಿಗೆ ಮಸಿ ಬಳೆಯುವ ಉದ್ದೇಶದಿಂದ ಪೆನ್‌ಡ್ರೈವ್‌ ಪ್ರಕರಣವನ್ನು ಬೆಳಕಿಗೆ ತಂದು ರಾಜ್ಯದಲ್ಲಿ ಬೆಂಕಿಹಂಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟಿಯಲ್ಲಿ ಮಜಾ ಮಾಡಲು ಹೊರಟಿದ್ದಾರೆ. ಘಟನೆಯ ನೈಜತೆ ಹೊರಬರಬೇಕಾದರೆ ಸಿಬಿಐ ತನಿಖೆಯಾಗಬೇಕು ಎಂದು ಎಂಎಲ್ಸಿ ಇಂಚರ ಗೋವಿಂದರಾಜು ಒತ್ತಾಯಿಸಿದರು

ನಗರದ ಹೊಸ ಬಸ್ ನಿಲ್ದಾಣದ ಬಳಿ ಪೆನ್ ಡ್ರೈವ್ ಘಟನೆಯ ವಿರುದ್ದ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಜೆಡಿಎಸ್‌ ಮತ್ತು ಬಿಜೆಪಿ ಪಕ್ಷದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ 125 ವರ್ಷಗಳ ಇತಿಹಾಸವಿದೆ ಸುಮಾರು 57 ವರ್ಷ ಕಾಲ ಅಧಿಕಾರವನ್ನು ಅನುಭವಿಸಿದ್ದಾರೆ. ಇಂದು ಪ್ರಜಾಪ್ರಭುತ್ವದ ವ್ಯವಸ್ಥೆಯೇ ತಲೆತಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರವು ಪೆನ್ ಡ್ರೈವ್ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿದೆ. ಈ ಘಟನೆಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೈವಾಡವಿದ್ದು, ಸಾಕ್ಷಿಗಳನ್ನು ತಮ್ಮ ಸರಕಾರದ ಪರವಾಗಿ ತಮಗೆ ಬೇಕಾದ ರೀತಿಯಲ್ಲಿ ತನಿಖೆ ನಡೆಸುತ್ತಾರೆ. ಯಾರನ್ನು ಬಂಧಿಸಬೇಕು, ಯಾರನ್ನು ಬಿಡಬೇಕು ಎಂದು ಸರಕಾರದ ಅಣತಿಯಂತೆ ಎಸ್‌ಐಟಿ ಅಧಿಕಾರಿಗಳು ನಡೆಯುತ್ತಿದ್ದಾರೆ. ಈ ಘಟನೆಯ ನೈಜತೆ ಹೊರಬರಬೇಕಾದರೆ ಸಿಬಿಐ ಮಧ್ಯಪ್ರವೇಶಿಸಿ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರವೇ ದೇವೇಗೌಡರ ಕುಟುಂಬದ ವಿರುದ್ದ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ರಾಜ್ಯದ ಮಾನ ಹರಾಜು ಹಾಕಿದ್ದಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿರುವಂತೆ ಪೆನ್‌ಡ್ರೈವ್ ಬಿಡುಗಡೆಯಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವೇ ಪ್ರಮುಖವಾಗಿದೆ. ಹೀಗಾಗಿ ಅವರು ಕೂಡಲೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಜೊತೆಗೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ, ಡಿಕೆಶಿ ಆಡಿಯೊ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಘಟನೆಯಲ್ಲಿ ಭಾಗವಹಿಸಿದವರು ಯಾರೇ ಆಗಲಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಿ. ಅದು ಬಿಟ್ಟು ವಿನಾಕಾರಣ ಸಂತ್ರಸ್ತ ಮಹಿಳೆಯನ್ನು ಬೀದಿಗೆ ತಂದು ಅವಮಾನ ಮಾಡಲು ಹೊರಟಿದ್ದು ಮಹಿಳೆಯರಿಗೆ ಸರಕಾರ ಮಾಡಿದ ಅವಮಾನವಾಗಿದೆ. ಎಸ್ಐಟಿಯ ಕೆಲವು ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ‌ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ ಪಕ್ಷವನ್ನು ಮುಗಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್‌ ಅಧಿಕಾರಿಗಳು ಸೇರಿಕೊಂಡು ಮಾಡುತ್ತಿದ್ದಾರೆ ಇದಕ್ಕೆ ಉತ್ತರವನ್ನು ಮುಂದಿನ ಜೂನ್ 4 ರಂದು ರಾಜ್ಯದ ಜನತೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಮಾಜಿ ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಬಾಬು ಮೌನಿ, ಕೋಚಿಮುಲ್ ನಿರ್ದೇಶಕ ಡಿ.ವಿ ಹರೀಶ್, ಮುಖಂಡರಾದ ವಡಗೂರು ರಾಮು, ಕಡಗಟ್ಟೂರು ದಯಾನಂದ್, ಖಾಜಿಕಲ್ಲಹಳ್ಳಿ ಹರೀಶ್, ಲೋಕೇಶ್ ಮರಿಯಪ್ಪ, ಶಬರೀಷ್, ಚಂಬೆ ರಾಜೇಶ್, ತೋಟಗಳ ಅಶೋಕ್, ಮುದುವಾಡಿ ಮಂಜು, ಅರಾಭಿಕೊತ್ತನೂರು ನಂಜುಂಡಗೌಡ, ರಾಕೇಶ್, ಜನಪನಹಳ್ಳಿ ಆನಂದ್, ದಿಂಬ ನಾಗರಾಜಗೌಡ, ಯಲುವಗುಳಿ ನಾಗರಾಜ್, ಅಮ್ಮನಲ್ಲೂರು ರಮೇಶ್, ಸುಗಟೂರು ಚಲಪತಿ, ನರೇಂದ್ರ ಬಾಬು, ಮುಂತಾದವರು ಇದ್ದರು

Leave a Reply

Your email address will not be published. Required fields are marked *