ಕೇಂದ್ರ ಸರ್ಕಾರವು ವಿವಿಧ ಹಿಂದುಳಿದ ಮತ್ತು ಅಂಚಿನಲ್ಲಿರುವ ಗುಂಪುಗಳ ಫಲಾನುಭವಿಗಳಿಗಾಗಿ ವಿವಿಧ ರೀತಿಯ ಸಾಲ ಸೌಲಭ್ಯವನ್ನು ಪಡೆಯಲು ಅನುವಾಗುವಂತೆ ಪಿ.ಎಂ. ಸೂರಜ್ ಪೋರ್ಟಲ್ ನ್ನು ವಿನ್ಯಾಸಗೊಳಿಸಲಾಗಿದ್ದು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿಯ ಜನತೆಯು ಈ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿ, ವಿವಿಧ ಸಾಲ ಸೌಲಭ್ಯವನ್ನು ಪಡೆದು, ಸಬಲೀಕರಣಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೀಡ್ ಬ್ಯಾಂಕ್ನ ಮುಖ್ಯ ಪ್ರಬಂಧಕರಾದ ಕೆ.ಮಧುಕರ್ ಅವರು ಕರೆ ನೀಡಿದರು.
ನೆಲಮಂಗಲ ತಾಲ್ಲೂಕಿನ ಅರಶಿನಕುಂಟೆಯಲ್ಲಿರುವ ರುಡ್ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ಮತ್ತು ಅಂಚಿನಲ್ಲಿರುವ ಗುಂಪುಗಳ ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಪಿ.ಎಂ. ಸೂರಜ್ ಪೋರ್ಟಲ್ ಮೂಲಕ ಉದ್ಯಮಿಗಳಿಗೆ ಆತ್ಮನಿರ್ಭರ್ ಮತ್ತು ಸ್ವಾವಲಂಬಿಯಾಗಲು ಅನುಕರಣೀಯ. ಸಾಲದ ಬೆಂಬಲವನ್ನು ಒದಗಿಸಲಾಗುತ್ತಿದೆ. ಉದಯೋನ್ಮುಖ ಉದ್ಯಮಿಗಳಿಗೆ ತಡೆರಹಿತ ಕ್ರೆಡಿಟ್ ಬೆಂಬಲವನ್ನು ವೆಬ್ ಸೇವೆಯ ಪ್ರಾರಂಭದ ಮೂಲಕ ಒದಗಿಸಲಾಗುವುದು ಎಂದರಲ್ಲದೆ, ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲು ಮತ್ತು ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗಗಳನ್ನು ಉನ್ನತೀಕರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.
ಪರಿಶಿಷ್ಟ ಜಾತಿ ವರ್ಗಗಳು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುವಾಗುವಂತೆ ಹಾಗೂ ಸಾಮಾಜಿಕ ಉನ್ನತಿ, ಉದ್ಯೋಗ ಮತ್ತು ಸಾರ್ವಜನಿಕ ಕಲ್ಯಾಣವನ್ನು ಆಧರಿಸಿದ ಯೋಜನೆ ಇದಾಗಿದ್ದು, ಈ ಪೋರ್ಟಲ್ ಮೂಲಕ ಅರ್ಹರು ಸಾಲದ ಸಹಾಯವನ್ನು ಪಡೆಯಬಹುದು. ಈ ಪೋರ್ಟಲ್ ಮೂಲಕ ಜನರು ಸುಲಭವಾಗಿ ಸಾಲವನ್ನು ಪಡೆಯಲು ಸಾಧ್ಯವಾಗಲಿದ್ದು, ಈ ಪೋರ್ಟಲ್ ಮೂಲಕವೇ ಅರ್ಜಿಯನ್ನು ಸಹ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಂಗನಾಥ್ ಅವರು ಮಾತನಾಡಿ ನಿಗಮ ವಿವಿಧ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಕೇಂದ್ರ ಸರಕಾರದ ಯೋಜನೆಗಳಡಿ ಸೌಲಭ್ಯ ಪಡೆದ ವಿವಿಧ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರವನ್ನು ಸಹ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು, ಸಮಾಜದ ಕಟ್ಟಕಡೆಯ ವರ್ಗಗಳಿಗೆ ಸಾಲದ ಬೆಂಬಲವನ್ನು ಒದಗಿಸುವ ರಾಷ್ಟ್ರವ್ಯಾಪಿ ಉಪಕ್ರಮವಾದ ‘ಪ್ರಧಾನ ಮಂತ್ರಿ ಸಾಮಾಜಿಕ್ ಉತ್ಥಾನ್ ಮತ್ತು ರೋಜ್ಗಾರ್ ಆಧಾರಿತ್ ಜನಕಲ್ಯಾಣ್’ (ಪಿಎಂ-ಸೂರಜ್) ರಾಷ್ಟ್ರೀಯ ಪೋರ್ಟಲ್ ಅನ್ನು ಪ್ರಧಾನ ಮಂತ್ರಿ ಕಚೇರಿಯಿಂದ ವರ್ಚುಯಲ್ ಮೂಲಕ ಚಾಲನೆ ನೀಡಿದ್ದನ್ನು ವಿವಿಧ ಬ್ಯಾಂಕುಗಳ ಫಲಾನುಭವಿಗಳು ಹಾಗೂ ರುಡ್ಸೆಟ್ ಸಂಸ್ಥೆಯ ಶಿಬಿರಾರ್ಥಿಗಳು ಸೇರಿದಂತೆ ಸಾರ್ವಜನಿಕರು ವಿಡಿಯೋ ಸಂವಾದದ ಮುಖೇನ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕರಾದ ಶ್ರೀನಿವಾಸಲು, ರಾಷ್ಟ್ರೀಯ ಮಾಹಿತಿ ಕೇಂದ್ರದ ಮಾಹಿತಿ ಅಧಿಕಾರಿ ಗೌರಿಶಂಕರ್, ರುಡ್ಸೆಟ್ ಸಂಸ್ಥೆಯ ನಿರ್ದೇಶಕ ರವಿಕುಮಾರ್, ವಿವಿಧ ಬ್ಯಾಂಕುಗಳ ಶಾಖಾ ಪ್ರಬಂಧಕರು, ಫಲಾನುಭವಿಗಳು, ರುಡ್ಸೆಟ್ ಸಂಸ್ಥೆಯ ಶಿಬಿರಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.