
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ತಾಲೂಕಿನ ಪಾಲ್ ಪಾಲ್ ದಿನ್ನೆಯಲ್ಲಿ ಕೃಷಿ ಬೃಂದಾವನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದರ ಅಂಗವಾಗಿ ಬೆಳೆ ಕ್ಷೇತ್ರೋತ್ಸವ, ಕೃಷಿ ವಸ್ತು ಪ್ರದರ್ಶನ, ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷಿ ವಿದ್ಯಾರ್ಥಿಗಳು 3 ತಿಂಗಳಿಂದ ಹಳ್ಳಿಯಲ್ಲಿ ಬಿಡಾರ ಹೂಡಿದ್ದು, ರೈತರ ಮಾಹಿತಿ ಕಲೆ ಹಾಕಿ ಸಮಸ್ಯೆಗಳ ಪಟ್ಟಿ ಮಾಡಿ ಅದರ ಬಗ್ಗೆ ಹೊಸ ತಂತ್ರಜ್ಞಾನ, ತಾಂತ್ರಿಕ ಪ್ರಾತ್ಯಕ್ಷಿಕೆ ಜೊತೆ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ಕೃಷಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಹೆಚ್ಚಾಗಬೇಕಿದೆ. ರೈತರಿಗೆ ಹೊಸ ತಂತ್ರಜ್ಞಾನ ಮತ್ತು ತಳಿಗಳ ಪರಿಚಯವಾಗಬೇಕಿದ್ದು, ಸುಸ್ಥಿರ ಕೃಷಿ ಲಾಭದಾಯಕ ಎಂದು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಹೊಸ ತಂತ್ರಜ್ಞಾನ ಮತ್ತು ತಳಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿಗಳು ರೈತರೊಂದಿಗೆ ಒಡನಾಟದಲ್ಲಿರುವ ಮೂಲಕ ರೈತರಿಗೆ ಹೆಚ್ಚು ಸಹಕಾರಿ ಆಗುವಂತೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೋತ್ಥಾನ ಗೋಶಾಲೆ ಮುಖ್ಯಸ್ಥ ಗವ್ಯ ಸಿದ್ಧ ವೈದ್ಯ ಡಾ.ಜೀವನ್ ಕುಮಾರ್, ಸಾವಯವ ಕೃಷಿಯ ಬಗ್ಗೆ ಇಂದು ಹೆಚ್ಚಿನ ಪ್ರಚಾರವಾಗಬೇಕಿದ್ದು, ಗೋವಿನ ಮಹತ್ವದ ಬಗ್ಗೆ ಅರಿಯಬೇಕಿದೆ. ಪುಸ್ತಕದ ಅರಿವಿಗಿಂತ ಪ್ರಾಯೋಗಿಕ ಅರಿವು ಮುಖ್ಯ ಎಂದು ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.
ರೈತರ ಸಂವಾದದಲ್ಲಿ ವಿಜ್ಞಾನಿ ಡಾ.ಎಲ್.ಎನ್.ಆರ್.ರೆಡ್ಡಿ ಮಾತನಾಡಿ, ಸುಸ್ಥಿರ ಕೃಷಿ ಲಾಭದಾಯಕ ಮತ್ತು ಹೆಚ್ಚಿನ ವೈಜ್ಞಾನಿಕ ಕೃಷಿ ಅಳವಡಿಸಿ ಕೊಳ್ಳುವುದು ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕೃಷಿ ಶಿಬಿರದ ಸಹ ಸಂಯೋಜಕ ಡಾ.ಪಂಕಜಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾಬಾಯಿ, ಅಪ್ಪಯ್ಯಪ್ಪ, ವೆಂಕಟೇಶ್, ವಾಸುದೇವ, ರೈತ ಮಹಿಳೆ ರೂಪಾ ,ರೈತ ಮುಖಂಡ ನರಸಿಂಹ ಗೌಡ, ಸಂಪನ್ಮೂಲ ವಿಜ್ಞಾನಿಗಳಾದ ಲಕ್ಷ್ಮೀನಾರಾಯಣ ರೆಡ್ಡಿ , ಲಕ್ಷ್ಮೀಪತಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿದ್ದರು.