
ಕೋಲಾರ: ಪಶು ಇಲಾಖೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿ ಜಿಲ್ಲೆಯಾದ್ಯಂತ ರಾಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮ ಮತ್ತು ಗಂಟು ರೋಗ, ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ವಿಶೇಷ ಗ್ರಾಮೀಣ ವೈದ್ಯರ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ನಗರದ ಪಶು ಇಲಾಖೆ ಎದುರು ಪ್ರತಿಭಟನೆ ನೆಡೆಸಿ ಇಲಾಖೆಯ ಉಪ ನಿರ್ದೇಶಕರ, ಮುಖಾಂತರ ಪಶುಪಾಲನಾ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲೆಯಲ್ಲಿನ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾದ ಹೈನುಗಾರಿಕೆಯನ್ನು ಪಶು ವೈದ್ಯರ ನಿರ್ಲಕ್ಷ್ಯದಿಂದ ರಾಸುಗಳಿಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಕಣ್ಣು ಮುಂದೆಯೇ ಹಸುಗಳು ಸಾವನ್ನಪ್ಪುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಪಶು ಇಲಾಖೆ ವಿರುದ್ದ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಆಕ್ರೋಶ ವ್ಯಕ್ತಪಡಿಸಿದರು.
ರೋಗಕ್ಕೆ ತುತ್ತಾದ ರಾಸುಗಳ ಮೂಗಿನಲ್ಲಿ ನಿರಂತರವಾಗಿ ಜೊಲ್ಲು ಕಣ್ಣಿನಿಂದ ನೀರು ಸೋರುತ್ತಾ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತಿವೆ. ದಿನ ಕಳದಂತೆ ಮೈಯಲ್ಲಾ ಗಂಟುಗಳಾಗಿ ಹೊಡೆದು ಹುಣ್ಣಾಗುತ್ತಿವೆ. ಅದರ ಮೇಲೆ ಕಾಗೆ ಮತ್ತಿತರ ಪಕ್ಷಿಗಳು ಚುಚ್ಚಿ ಚುಚ್ಚಿ ಮತ್ತೆ ಗಾಯಗಳಾಗಿ ರಕ್ತ ಸೋರುತ್ತಿದ್ದರೆ, ಇತ್ತ ಚಿಕಿತ್ಸೆ ನೀಡಲು ಸಮಯಕ್ಕೆ ಬಾರದ ಪಶು ವೈದ್ಯರು ದುಬಾರಿ ವೆಚ್ಚ ಭರಿಸಿ ಖಾಸಗಿ ವೈದ್ಯರನ್ನು ಕರೆಸಲಾಗದೆ ಅತಂತ್ರ ಪರಿಸ್ಥಿತಿಯಲ್ಲಿ ರೈತನಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಜೊತೆಗೆ ಇತ್ತ ರೋಗ ಪಿಡಿತ ರಾಸುಗಳನ್ನು ಪ್ರತ್ಯೇಕವಾಗಿ ಇಡಲಾಗದೆ, ಆರೋಗ್ಯವಾಗಿರುವ ರಾಸುಗಳ ಜೊತೆ ಕಟ್ಟಿಕೊಳ್ಳಲಾಗದೆ, ಸಂತೆಯಲ್ಲಿ ಮಾರಾಟ ಮಾಡಲಾಗಲಿಲ್ಲ ರೈತರ ರಕ್ಷಣೆಗೆ ನಿಲ್ಲುವವರೂ ಯಾರು ಎಂದು ಪ್ರಶ್ನೆ ಮಾಡಿದರು.
ರೋಗಗಳಿಂದ ತತ್ತರಿಸಿರುವ ರಾಸುಗಳ ಹಾಲನ್ನು ಡೈರಿಗಳಿಗೆ ಹಾಕುವಂತಿಲ್ಲ. ಪ್ರತಿನಿತ್ಯ ಕರೆದು ಚರಂಡಿಗೆ ಸುರಿದು ಕೈಯಿಂದ ಮೇವು ನೀರಿಗೆ ಹಣ ಹಾಕಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಹೊಣೆಗಾರರು ಯಾರು. ಸ್ವಾಭಿಮಾನದ ಬುದುಕು ನೀಡಿದ ಹೈನುಗಾರಿಕೆಯನ್ನು ಬಿಡುವುದಾ ಇಲ್ಲವೆ, ಲಕ್ಷ ಲಕ್ಷ ಸಂಬಳ ಪಡೆದು, ಸಮರ್ಪಕವಾದ ಚಿಕಿತ್ಸೆ ನೀಡದ ಪಶು ವೈದ್ಯರ ನಿರ್ಲಕ್ಷವಾ ಯಾರ ಮೇಲೆ ನಾವು ದೂರು ನೀಡಬೇಕೆಂದು ಪಶು ಉಪನಿರ್ದೇಶಕರನ್ನು ತರಾಟೆಗೆ ತೆಗದುಕೊಂಡರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ರಾಸುಗಳಿಗೆ ರೋಗ ಬಂದು ಮೃತಪಟ್ಟರೆ ಸಂಬಂಧಪಟ್ಟ ಪಶು ವೈದ್ಯರಿಗೆ ಕರೆ ಮಾಡಿದರೆ, ಕರೆಯನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ಸ್ವೀಕರಿಸಿದರೆ, ಏನಯ್ಯ, ನಿಮ್ಮ ಸಮಸ್ಯೆ ಪದೇ ಪದೇ ಕರೆ ಮಾಡಿ ನಮ್ಮ ಪ್ರಾಣ ತಿನ್ನುತ್ತೀರ ಎಂದು ದೌರ್ಜನ್ಯ ಮಾಡುವ ಜೊತೆಗೆ ಹಸು, ಮೃತಪಟ್ಟಿದೆ ಸ್ವಾಮಿ. ಸರ್ಕಾರಿಂದ ಬರುವ ವಿಮಾ ಹಣವನ್ನು ಕೊಡಿಸಲು ಬಂದು ನೋಡಿ ಎಂದರೆ ನೀವೇ ವೈದ್ಯರೆಂದು ತಿಳಿದುಕೊಂಡು ಹಸುವನ್ನು ನಾಲ್ಕು ಕಡೆ ಕೊಯ್ದು ಪೋಟೋ ಹಿಡಿದು ಕಳುಹಿಸಿ ಸರ್ಕಾರಕ್ಕೆ ಕಳುಹಿಸುತ್ತೇವೆ. ನಿಮ್ಮ ಹಣೆಬರಹ ಇದ್ದರೆ, ಹಣ ಬರುತ್ತದೆ ಎಂದು ಬೇಜವಾಬ್ಧಾರಿಯಿಂದ ಮಾತನಾಡಿರುತ್ತಾರೆಂದು ಆರೋಪ ಮಾಡಿದರು.
ಶ್ರೀಮಂತರ ಮನೆಗಳಲ್ಲಿ ಸಾಕುವ ನಾಯಿಗಳಿಗೆ ಇರುವ ಗೌರವ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತರ ಹಸುಗಳಿಗೆ ಬೆಲೆ ಇಲ್ಲವೆಂದು ಆರೋಪ ಮಾಡುವ, ಜೊತೆಗೆ ಶ್ರೀಮಂತರ ಕರೆ ಮಾಡಿದರೆ, ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಿ, ನಿಯತ್ತಾಗಿ ತಮ್ಮ ಪ್ರಾಮಾಣಿಕತೆಯನ್ನು ತೋರಿಸುವ ಪಶು ವೈದ್ಯರೇ, ರೈತರು ನಿಮಗೆ ಏನು ಅನ್ಯಾಯ ಮಾಡಿದ್ದಾರೆಂದು ಪ್ರಶ್ನೆ ಮಾಡಿದರು.
ಇಲಾಖೆಯ ಅನುದಾನಗಳನ್ನು ರೈತರಿಗೆ ನೀಡಲ್ಲ ಜೊತೆಗೆ ಸರ್ಕಾರದಿಂದ ಬರುವ ಕೋಟ್ಯಾಂತರ ರೂಪಾಯಿ ಪಶು ವೈದ್ಯಕೀಯ ಸಲಕರಣೆಗಳು ಔಷಧಿಗಳನ್ನು ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡುವ ಮೂಲಕ ಕೋಟಿ ಕೋಟಿ ಹಣವನ್ನು ಮಾಡುವ ಜೊತೆಗೆ ಕೋಳಿ, ಹಂದಿ, ಮತ್ತಿತರ ಅನುದಾನವನ್ನು ದುರ್ಬಳಿಕೆ ಮಾಡಿಕೊಳ್ಳುವ ಜೊತೆಗೆ ಔಷಧಿಗಳನ್ನು ರೈತರಿಗೆ ನೀಡದೆ ಕಾಳಸಂತೆಯಲ್ಲಿ ಖಾಸಗಿ ಔಷಧಿ ಅಂಗಡಿಗಳಿಗೆ ಮಾರಾಟ ಮಾಡುವ ದಂದೆ ಹೆಚ್ಚಾಗಿದೆ 24 ಗಂಟೆಯಲ್ಲಿ ರಾಸುಗಳಿಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ವಿಶೇಷ ವೈದ್ಯರ ತಂಡ ರಚನೆ ಮಾಡಿ ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಗಡಿಭಾಗ ಹಾಗೂ ಗ್ರಾಮೀಣ ಪ್ರದೇಶದ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪಶು ಉಪನಿರ್ದೇಶಕ ಜಿ.ಟಿ.ರಾಮಯ್ಯ ಈಗಾಗಲೇ ರೋಗ, ಬಂದಿರುವ ನಗರ ಹಾಗೂ ಗಡಿಭಾಗದ ಗ್ರಾಮೀಣ ಪ್ರದಶಗಳಿಗೆ ವೈದ್ಯರು ಬೇಟಿ ನೀಡಿ, ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ರೈತರ ಸಮಸ್ಯೆ ಇದ್ದರೂ, ನೇರವಾಗಿ ನನಗೆ ಕರೆ ಮಾಡಿ ತಕ್ಷಣ ಆ ಹಳ್ಳಿಗೆ ವೈದ್ಯರನ್ನು ಕಳುಹಿಸಿ ಚಿಕಿತ್ಸೆ ನೀಡಿ ರಾಸುಗಳ ರಕ್ಷಣೆ ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾ.ಅಧ್ಯಕ್ಷ ಮೂರಂಡಹಳ್ಳಿ ಶಿವಾರೆಡ್ಡಿ, ಅಪ್ಪೋಜಿರಾವ್, ಮುನಿಕೃಷ್ಣ, ಚಂದ್ರಪ್ಪ, ಸುಪ್ರಿಂ ಚಲ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಪಾರುಕ್ಪಾಷ, ರಾಜೇಶ್, ಶಶಿ, ಮುನಿರಾಜು, ಶೈಲಜ, ರತ್ನಮ್ಮ, ಗೌರಮ್ಮ, ಮುನಿರತ್ನಮ್ಮ, ವಂಕಟಮ್ಮ, ನಾಗರತ್ನ, ಸೌಭಾಗ್ಯ, ಮುಂತಾದವರು ಇದ್ದರು.