ಪಬ್ಲಿಕ್ ಮಿರ್ಚಿ ವರದಿ ಫಲಶೃತಿ: ಮುಜರಾಯಿ ಇಲಾಖೆಯ ಲಕ್ಷ ಲಕ್ಷ ಹಣ ನುಂಗಿದ ರೆವೆನ್ಯೂ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ಅಮಾನತು: ಹೇಮಂತ್ ಕುಮಾರ್ ಪತ್ನಿಯಿಂದ 50 ಲಕ್ಷ ರೂ. ವಾಪಸ್

ದೊಡ್ಡಬಳ್ಳಾಪುರ ತಹಶೀಲ್ದಾ‌ರ್ ಹಾಗೂ ಕೇಸ್ ವರ್ಕರ್ ಹೆಸರಿನ ನಕಲಿ ಸಹಿ ಬಳಸಿ ಮುಜರಾಯಿ ಇಲಾಖೆಯ ಲಕ್ಷ ಲಕ್ಷ ಹಣವನ್ನು ದೋಖಾ ಮಾಡಿರುವ ಆರೋಪದ ಮೇಲೆ‌ ಸಾಸಲು ಹೋಬಳಿ ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್‌ ನನ್ನು ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸಿ ಕೋರ್ಟ್ ಆದೇಶದ ಮೇರೆಗೆ ಜೈಲಿಗಟ್ಟಿದ್ದಾರೆ.

ಇದಲ್ಲದೇ ವಂಚನೆ ಮಾಡಿದ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ನನ್ನು ಅಮಾನತುಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಆದೇಶ ಮಾಡಿದ್ದಾರೆ.

ಅಮಾನತು ಮಾಡಿರುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿ ಬಸವರಾಜು ಹೇಳಿದ್ದಾರೆ.

ಈ ಹೇಮಂತ್ ಕುಮಾರ್ ಲಕ್ಷ ಲಕ್ಷ ಹಣವನ್ನ ಲಪಟಾಯಿಸಿದ್ದ. ಈ ವಂಚನೆ ಪ್ರಕರಣವನ್ನು ದೊಡ್ಡಬಳ್ಳಾಪುರ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಬಯಲು ಮಾಡಿದ್ದರು.

ಈ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ದೊಡ್ಡಬಳ್ಳಾಪುರ ಪೊಲೀಸರು ಹೇಮಂತ್ ಕುಮಾರ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಸದ್ಯ ಹೇಮಂತ್ ಕುಮಾರ್ ಪತ್ನಿ 50 ಲಕ್ಷ ರೂಪಾಯಿ ವಾಪಸ್ ದೊಡ್ಡಬಳ್ಳಾಪುರ ನಗರದ ಎಸ್ ಬಿ ಐ ಬ್ಯಾಂಕ್ ತಹಶೀಲ್ದಾರ್ ಖಾತೆಗೆ ಹಣ ಜಮಾ ಮಾಡಿದ್ದಾರೆ ಎಂಬ ಮಾಹಿತಿ ಒದಗಿಬಂದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಮುಜರಾಯಿ ಇಲಾಖೆ ಎಫ್‌ಡಿಎ ಕರ್ತವ್ಯದಿಂದ ಸಾಸಲು ಹೋಬಳಿ ಆರ್ ಐ ಆಗಿ ವರ್ಗಾವಣೆ ಆದ ಬಳಿಕ ಹೇಮಂತ್ ಕುಮಾರ್ ಅವರು ದಾಖಲೆಗಳನ್ನು ನೀಡುವ ವೇಳೆ ಚೆಕ್‌ ಬುಕ್ ಗಳನ್ನು ನೀಡದೆ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಬಳಿಕ ಹಲವು ಕಂತುಗಳಲ್ಲಿ ತಹಶಿಲ್ದಾರ್ ಅವರ ನಕಲಿ ಸಹಿ ಬಳಸಿ ಲಕ್ಷ ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪಬ್ಲಿಕ್ ಮಿರ್ಚಿ ಸವಿಸ್ತಾರ ವರದಿ ಮಾಡಿತ್ತು. ಪಬ್ಲಿಕ್ ಮಿರ್ಚಿ ವರದಿ ಬೆನ್ನಲ್ಲೇ ವಂಚನೆ ಮಾಡಿದ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ನನ್ನು ಅಮಾನತುಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಆದೇಶ ಮಾಡಿದ್ದಾರೆ.

ನಕಲಿ ಸಹಿ ಬಳಸಿದ್ದ ಚೆಕ್ ಗಳನ್ನು ಬೆಂಗಳೂರಿನ ಮೃತಪಟ್ಟಿರುವ ಮಹಿಳೆಯೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ಆ ಮಹಿಳೆ ಕಳೆದ ಎಂಟು ತಿಂಗಳ ಹಿಂದೆಯೇ ಮೃತಪಟ್ಟಿದ್ದು, ಮೊಮ್ಮಗನ ಬಳಿ ಬ್ಯಾಂಕ್ ದಾಖಲೆ, ಮೊಬೈಲ್, ಸಿಮ್ ಪಡೆದುಕೊಂಡು ಹಂತ ಹಂತವಾಗಿ ಹಣವನ್ನು ಡ್ರಾ ಮಾಡಿಕೊಂಡಿದ್ದನು ಎನ್ನಲಾಗಿದೆ.

ಒಮ್ಮೆ ಹಣ ಡ್ರಾ ಮಾಡಲು ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್‌ ತನ್ನ ಪತ್ನಿಯನ್ನೇ ಬ್ಯಾಂಕ್ ಗೆ ಕಳುಹಿಸಿ ಹಣ ಡ್ರಾ ಮಾಡಿಕೊಂಡಿರುವ ದೃಶ್ಯ ಬ್ಯಾಂಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಆಕೆ ಕೂಡ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿರುವ ಮಾಹಿತಿ ಒದಗಿಬಂದಿದೆ.

ಪೊಲೀಸ್ ತನಿಖೆ ವೇಳೆ ಮನೆಯಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಸಿಮ್, ಸೀಲ್, ಸಹಿ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ..

ಈತ ಈ ದೋಖಾ ಮಾಡಿದ ಹಣದಲ್ಲಿ 10 ಲಕ್ಷ ರೂ. ಕೊಟ್ಟು ಒಡವೆ ಖರೀದಿ, ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು, ಮನೆಯೊಂದನ್ನು ದುರಸ್ತಿ ಮಾಡಲು 30 ಲಕ್ಷ‌ ಖರ್ಚು ಮಾಡಿರುವುದಲ್ಲದೇ ಆನ್ ಲೈನ್ ಗೇಮ್ ಗೂ ಹಣ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *