
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಕೂಗಳತೆ ದೂರದಲ್ಲಿರುವ ದಲಿತ ಕಾಲೋನಿಯಲ್ಲಿ ಚರಂಡಿ ಇದ್ದು ಇಲ್ಲದಂತಾಗಿತ್ತು. ಕೊಳಚೆ ನೀರು ಮನೆಯ ಮುಂದೆ ಶೇಖರಣೆಯಾಗಿ, ರಸ್ತೆಯಲ್ಲಿಯೇ ಕೊಳೆತು ಇಡೀ ಪ್ರದೇಶ ದುರ್ನಾತ ಬೀರುತ್ತಿತ್ತು. ಸೊಳ್ಳೆ, ನೊಣ ಸೇರಿದಂತೆ ಇತರೆ ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿತ್ತು. ಇದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿತ್ತು. ಅದರೆ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಶುಚಿತ್ವದತ್ತ ಸ್ವಲ್ಪವೂ ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿ ಪ್ರತಿಭಟನೆ ಮಾಡಿ ಪಂಚಾಯಿತಿ ವಿರುದ್ಧ ದಿಕ್ಕಾರ ಕೂಗಿದ್ದರು. ಈ ಕುರಿತು “ಪಬ್ಲಿಕ್ ಮಿರ್ಚಿ” ವರದಿ ಮಾಡಿತ್ತು….

“ಪಬ್ಲಿಕ್ ಮಿರ್ಚಿ” ವರದಿ ಹಾಗೂ ನಿವಾಸಿಗಳ ಪ್ರತಿಭಟನೆ ಬೆನ್ನಲ್ಲೇ ಎಚ್ಚೆತ್ತ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ, ಜನಪ್ರತಿನಿಧಿಗಳು ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ….
ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಪಂಚಾಯಿತಿ ವಿರುದ್ಧ ದಲಿತರು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆ 15ನೇ ಹಣಕಾಸು ಅನುದಾನದಡಿಯಲ್ಲಿ 2ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಪಂಚಾಯಿತಿ ಮೂಲಗಳು ತಿಳಿಸಿವೆ…