ನೋಟಿಸ್ ನೀಡದೆ ದಿನಗೂಲಿ ಬ್ಯಾಂಕ್ ನೌಕರನ ತೆರವು: ಕೆಲಸ ಕಳೆದುಕೊಂಡು ಕಣ್ಣೀರಿಟ್ಟ ನೌಕರಿ ವಂಚಿತ ಹನುಮಂತರಾಜು

ತಾಲ್ಲೂಕಿನ ಯೂನಿಯನ್ ಬ್ಯಾಂಕ್ ಮೆಳೆಕೋಟೆ ಶಾಖೆಯಲ್ಲಿ ಪರಿಶಿಷ್ಟ ಜಾತಿಯ ಹನುಮಂತರಾಜು ರವರನ್ನು ಯಾವುದೇ ನೋಟಿಸ್ ನೀಡದೆ, ಕೆಲಸದಿಂದ ತೆಗೆದು ಹಾಕಿದ ಕ್ರಮಕ್ಕೆ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ಬಿ.ಎಸ್.ಎಫ್.ಐ ನ ರಾಜ್ಯ ಕಾರ್ಯದರ್ಶಿ ಕೆ.ನಾಗರಾಜ್ ಶಾನಭೋಗ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ಯೂನಿಯನ್ ಬ್ಯಾಂಕಿನಲ್ಲಿ ಪರಿಶಿಷ್ಟ ಜಾತಿಯ ಯುವಕ ಎಂ.ಹನುಮಂತರಾಜು ಎಂಬುವರು ಸತತವಾಗಿ 15 ವರ್ಷ ಬ್ಯಾಂಕಿನಲ್ಲಿ ದುಡಿಯುತ್ತಿದ್ದಾರೆ, ತಮ್ಮ ಚುರುಕುತನದ ಸೇವೆಯಿಂದ ಗ್ರಾಹಕವರ್ಗ ಹಾಗೂ ಸಿಬ್ಬಂದಿ ವರ್ಗದ ಮೆಚ್ಚುಗೆಯನ್ನೂ ಪಡೆದಿರುತ್ತಾರೆ.

ಈ ನಡುವೆ, ಹಲವು ವರ್ಷಗಳು ಕಾದರೂ ನೌಕರಿ ಖಾಯಂ ಆಗದ ಹಿನ್ನೆಲೆ ಹನುಮಂತರಾಜು ಮತ್ತು ಇತರ ಐದು ಮಂದಿ ಸೇರಿ ತಮ್ಮ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಖಾಯಂ ನೇಮಕಾತಿಗಾಗಿ ಬೆಂಗಳೂರಿನ ಕಾರ್ಮಿಕ ಕಚೇರಿಯಲ್ಲಿ ದೂರನ್ನು ದಾಖಲಿಸಿದ್ದರು, ಈ ಅರ್ಜಿ ಇನ್ನು ಇತ್ಯರ್ಥವಾಗಿಲ್ಲ.

ಈ ಮಧ್ಯೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಜನರಲ್ ಮ್ಯಾನೇಜರ್ ರವರು ಮೌಖಿಕವಾಗಿ ಮಳೆಕೋಟೆ ಶಾಖಾಧಿಕಾರಿಗೆ ನಿರ್ದೇಶನ ನೀಡಿ, ಮಾರ್ಚ್ 10, ರಿಂದ ಹನುಮಂತರಾಜುರನ್ನು ಕೆಲಸಕ್ಕೆ ಸೇರಿಸಬೇಡಿ ಎಂದು ಆದೇಶ ಕೊಟ್ಟಿದ್ದಾರೆಂದು ತಿಳಿಸಿ ಬ್ಯಾಂಕ್ ನ ಮ್ಯಾನೇಜರ್, ಹನುಮಂತರಾಜುಗೆ ಮುನ್ಸೂಚನೆಯಾಗಿ ಯಾವುದೇ ನೋಟೀಸ್ ನೀಡದೆ ಏಕಾಏಕಿ ಕೆಲಸಕ್ಕೆ ಬರದಂತೆ ಸೂಚಿಸಿರುವುದು I.D ಆಕ್ಟ್ ನ ಸೆಕ್ಷನ್ 33ರ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕಳೆದ 15 ವರ್ಷಗಳಿಂದ ಹನುಮಂತರಾಜು ರವರನ್ನು ಬ್ಯಾಂಕ್ ಚೌಕಟ್ಟಿಗೆ ಸೀಮಿತವಾದ ಕೆಲಸವಲ್ಲದೆ ಇತರೆ ಬೇರೆ ಕೆಲಸಗಳನ್ನು ದುಡಿಸಿಕೊಂಡು ಈಗ ಕಾನೂನು ಬಾಹಿರವಾಗಿ ಅವರನ್ನು ಬೀದಿಗೆ ತಳ್ಳಿರುವ ಯೂನಿಯನ್ ಬ್ಯಾಂಕಿನ ಕ್ರಮವನ್ನು ಬ್ಯಾಂಕಿನ ನೌಕಕರ ಸಂಘಟನೆ (ಬಿ.ಇ.ಎಫ್.ಐ) ರ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಒಬ್ಬ ಪರಿಶಿಷ್ಟ ಜಾತಿಗೆ ಸೇರಿರುವ ಯುವಕನ ಮೇಲೆ ಆಡಳಿತ ಅಧಿಕಾರಿಗಳು ನಡೆಸಿದ ದುರ್ನಡತೆಯ ವಿರುದ್ಧ ಈ ಕೂಡಲೇ ಬೆಂಗಳೂರಿನ ರೀಜಿನಲ್ ಲೇಬರ್ ಕಮಿಷನರ್ ರವರು ಕ್ರಮ ಜರುಗಿಸಬೇಕು ಮತ್ತು ಹನುಮಂತರಾಜು ರವರನ್ನು ಈ ಕೂಡಲೇ ಬ್ಯಾಂಕಿನಲ್ಲಿ ಕೆಲಸಕ್ಕೆ‌ ಸೇರಿಸಿಕೊಂಡು ಖಾಯಂ ಗೊಳಿಸಬೇಕು ಎಂದು ಬ್ಯಾಂಕಿನ ಉನ್ನತ ಅಧಿಕಾರಿಗಳನ್ನೂ ಈ ಮೂಲಕ ಒತ್ತಾಯಿಸಿದರು.

ಬಳಿಕ ಕೆಲಸ ಕಳೆದುಕೊಂಡ ಹನುಮಂತರಾಜು ಮಾತನಾಡಿ, ಆರಂಭದಲ್ಲಿ 2 ವರ್ಷ ಕೆಲಸ ಮಾಡಿ ನಂತರ ಕೆಲಸ ಖಾಯಂಗೊಳಿಸಲಾಗುವುದು ಎಂದು ಆಸೆ ತೋರಿಸಿ ಕೆಲಸಕ್ಕೆ ಸೇರಿಸಿಕೊಂಡ ಬ್ಯಾಂಕ್‌ ನವರು 10 ವರ್ಷಕ್ಕೂ ಹೆಚ್ಚು ಕಾಲ ದುಡಿಸಿಕೊಂಡಿದ್ದಾರೆ, ಈ ನಡುವೆ ಯೂನಿಯನ್ ಬ್ಯಾಂಕ್ ಶಾಖೆಗೆ ವರ್ಗಾವಣೆಯಾಗಿ ಬಂದ ಎಲ್ಲಾ ಶಾಖಾಧಿಕಾರಿಗಳು ಮತ್ತು ಡಿಜಿಎಂ, ಜೋನಲ್ ಅಧಿಕಾರಿಗಳು, ಮುಖ್ಯ ಕಚೇರಿಗೆ ಹೋಗಿ ಮುಖಾಮುಖಿ ಭೇಟಿಯಾಗಿ ನೌಕರಿ ಖಾಯಂ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಮನವಿ ಮಾಡಿಕೊಂಡಿದ್ದೆ ಆದರೇ ಯಾವುದೇ ಪ್ರಯೋಜನವಾಗಿಲ್ಲ.

ಈ ಕಾರಣದಿಂದಾಗಿ ನಾನು ಲೇಬರ್ ಕೋರ್ಟ್ ಗೆ ನೌಕರಿ ಖಾಯಂ ಗೊಳಿಸುವಂತೆ ಅರ್ಜಿ ಹಾಕಿದ್ದೆ, ಇದೇ ಕಾರಣವಾಗಿರಿಸಿಕೊಂಡು ನನ್ನ ಜಾಗಕ್ಕೆ‌ ಬೇರೆಯವರನ್ನು ಸೇರಿಸಿ ನನ್ನ ಖಾತೆಗೆ ಹಣ ಹಾಕದೇ ನಗದು ರೂಪದಲ್ಲಿ ನೀಡಿ ಈಗ ಏಕಾಏಕಿ ನನ್ನನ್ನು ಕೆಲಸದಿಂದ ತೆರವುಗೊಳಿಸಿದ್ದಾರೆ,

ಈಗಾಗಲೇ ಬ್ಯಾಂಕ್ ಗಾಗಿ 15 ವರ್ಷ ಕೆಲಸ ನಿರ್ವಹಿಸಿದ್ದೇನೆ, ಈಗ ನನಗೆ 45 ವರ್ಷ, ನನ್ನ ಕುಟುಂಬಕ್ಕೆ ಆಧಾರವಾಗಿರುವ ನನ್ನನ್ನ ಏಕಾಏಕಿ ಕೆಲಸಕ್ಕೆ ಬರಬೇಡ ಎಂದು ಹೇಳಿ ನನ್ನ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ, ಅಧಿಕಾರಿಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಣ್ಣೀರಿಟ್ಟರು.

ಕಚೇರಿ ಸಹಾಯಕ ಹುದ್ದೆಗೆ ಖಾಯಂ ನೌಕರ ನೇಮಕ ಆಗಿದ್ದರಿಂದ ದಿನಗೂಲಿ ನೌಕರ ಹನುಮಂತರಾಜು ಅವರನ್ನು ತೆರವುಗೊಳಿಸಲಾಗಿದೆ. ಒಂದೇ ಹುದ್ದೆಗೆ ಇಬ್ಬರನ್ನು ನೇಮಕ ಮಾಡಲು ಆಗುವುದಿಲ್ಲ, ಹೀಗೆ ಮಾಡಿದರೆ ಬ್ಯಾಂಕಿಗೆ ಹೊರೆ ಆಗುತ್ತದೆ ಎಂದು ಯೂನಿಯನ್ ಬ್ಯಾಂಕ್ ಮೆಳೆಕೋಟೆ ಶಾಖೆ ಮ್ಯಾನೇಜರ್ ನವೀನ್ ಪ್ರತಿಕ್ರಿಯಿಸಿದರು.

ಏಪ್ರಿಲ್ 4 ರಂದು ದೆಹಲಿಯಲ್ಲಿ ಧರಣಿ

ನೌಕರರ ಮೇಲೆ ದೌರ್ಜನ್ಯವಾಗಿ ನಡೆಸಿಕೊಳ್ಳುತ್ತಿರುವ ಪ್ರಕರಣಗಳು ಈಗಾಗಲೇ ದೇಶದ ಹಲವು ಕಡೆಗಳಲ್ಲಿ ನಡೆಯುತ್ತಿದೆ ಇದನ್ನು ಖಂಡಿಸಿ ದೇಶದ‌ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಬ್ಯಾಂಕ್ ನೌಕರರ ಸಂಘಟನೆಯಿಂದ ಧರಣಿ ಸತ್ಯಾಗ್ರಹ ಮಾಡುತ್ತಿದೆ ಎಂದು ಬಿ.ಇ.ಎಫ್.ಐ ನ ರಾಜ್ಯ ಕಾರ್ಯದರ್ಶಿ ನಾಗೇಶ್ ಶ್ಯಾನಬೋಗ್ ತಿಳಿಸಿದರು.

ಈ ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಮಾದವ, ಹನುಮಂತರಾಜು, ಇತರರು ಇದ್ದರು.

Leave a Reply

Your email address will not be published. Required fields are marked *