ಮನುಷ್ಯ ಸಾಮಾನ್ಯದವನಲ್ಲ. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಗಾದೆ ಮಾತು, ಇಂದು ಎಲ್ಲೂ ಕೂಡ ಅದು ಅನ್ವಯಿಸುತ್ತಿಲ್ಲ. ಅವನ ಆಸೆಗಳಿಗೆ ಇತಿಮಿತಿಗಳು ಇಲ್ಲದೆ ಆಸೆ -ದುರಾಸೆಯಿಂದ ಪ್ರಕೃತಿಯ ಮೇಲೆ ದಬ್ಬಾಳಿಕೆಗಳು ನಡೆಯುವ ಘಟನೆಗಳ ಕಾವು ಇತ್ತೀಚಿನ ಬೆಳವಣಿಗೆಯಾಗಿಬಿಟ್ಟಿದೆ.
ಆಹಾರ ಗಳಿಕೆಯ ಕೇಂದ್ರವಾಗಿದ್ದ ಕೃಷಿ ಕೂಡ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಅಪಾರವಾದ ಅರಣ್ಯವನ್ನ ನಾಶ ಮಾಡಿ ದೊಡ್ಡ ದೊಡ್ಡ ರೆಸಾರ್ಟ್ ಗಳನ್ನು ಕಟ್ಟಿಕೊಳ್ಳಲಾಗಿದೆ.
ಪ್ರಕೃತಿದತ್ತವಾಗಿ ಅತ್ಯಂತ ಸಂಪತ್ಭರಿತವಾದ ನಮ್ಮ ಭಾರತ ನಿಜಕ್ಕೂ ನೈಸರ್ಗಿಕ ನಿರ್ಮಿತವಾದ ಅಪಾರವಾದ ಅರಣ್ಯಗಳನ್ನ ಹೊಂದಿರುವಂತ ದೊಡ್ಡ ದೇಶ.
ಅರಣ್ಯ ಲೋಕದಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ಸಾವಿರಾರು ಪ್ರಾಣಿ, ಪಕ್ಷಿಗಳ ಜೀವಸಂಕುಲಗಳಿವೆ ಎನ್ನುವುದನ್ನು ಮರೆತು, ಪ್ರಕೃತಿಯೊಂದಿಗೆ ಮತ್ತು ಜೀವ ಸಂಕುಲಗಳ ಜೊತೆ ಅಭಿವೃದ್ಧಿ ಹೆಸರಿನಲ್ಲಿ ಮಾನವನು ದಬ್ಬಾಳಿಕೆ ಮಾಡುತ್ತಿದ್ದಾನೆ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿ ಕೂಡ ತಾವು ನೆಲೆಸಿರುವ ಪರಿಸರದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಬದುಕುತ್ತಿರುತ್ತವೆ. ಈ ಶತಮಾನದ ಪ್ರಾರಂಭದಲ್ಲಿ ಭೂಮಿಯ ಮೇಲಿದ್ದ ಜೀವ ಪ್ರಭೇದಗಳು ಈಗಾಗಲೇ ನಶಿಸಿ ಹೋಗಿವೆ. ಕೆಲವು ಪ್ರಭೇದಗಳು ಅವಸಾನದ ಅಂಚಿನಲ್ಲಿವೆ. ಇಂತಹ ಜೀವ ಸಂಕುಲಗಳನ್ನು ಮತ್ತು ಅರಣ್ಯಗಳನ್ನು ರಕ್ಷಿಸುವ ಬದಲು ಭೂಮಿಯ ಮೇಲಿನ ಪರಿಸರವನ್ನು ಹಾಳುಗೆಡುವುದರಲ್ಲಿ ಮನುಷ್ಯ ಮುಖ್ಯ ಪಾತ್ರವಹಿಸುತ್ತಿದ್ದಾನೆ.
ಇತ್ತೀಚೆಗೆ ನಡೆದ ಲಾಸ್ ಎಂಜಲೀಸ್ ದುರಂತದಲ್ಲಿ ಸಿಲುಕಿ ಅದೆಷ್ಟೋ ಮುಗ್ಧ ಪ್ರಾಣಿ ಪಕ್ಷಿಗಳು ಬೆಂಕಿಯ ಕೆನ್ನಾಲೆಗೆ ಸಿಲುಕಿ ಸುಟ್ಟು ಕರಕಲಾಗಿದೆ. ಇಂದಿಗೂ ಕೂಡ ಅಲ್ಲಿನ ಜೀವ ಸಂಕುಲಗಳು ಸಂದಿಗ್ದ ಪರಿಸ್ಥಿತಿಯಲ್ಲಿ ಬದುಕುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಅವುಗಳ ಆವಾಸಸ್ಥಾನಗಳನ್ನ ವಶಪಡಿಸಿಕೊಂಡು. ವಿವಿಧ ದೊಡ್ಡ ದೊಡ್ಡ ಯೋಜನೆಗಳ ನೆಪದಲ್ಲಿ ಅಪಾರ ಪ್ರಮಾಣದ ಅರಣ್ಯವನ್ನು ಬಯಲು ಮಾಡಲಾಗುತ್ತಿದೆ.
ಇದು ಕೇವಲ ಅಮೆರಿಕ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಎಲ್ಲಾ ದೇಶಗಳಲ್ಲೂ ಈ ಸಮಸ್ಯೆ ಕಂಡು ಬರುತ್ತದೆ. ದುರಾದೃಷ್ಟವೇನೆಂದರೆ ನಮ್ಮ ಭಾರತದಲ್ಲಿ ಕೂಡ ಪ್ರಗತಿಗಾಗಿ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಾಶ ಮಾಡಲಾಗುತ್ತಿದೆ. ಈಗ ಪ್ರಸ್ತುತ ನಡೆಯುತ್ತಿರುವ ಹೈದರಾಬಾದ್ ನ ಗಚ್ಚಿಬೌಲಿಯಲ್ಲಿ ಸುಮಾರು 400 ಎಕರೆ ಅರಣ್ಯ ಪ್ರದೇಶದ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
1974 ರಿಂದ ಹೈದರಾಬಾದ್ ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗವಾಗಿರುವ 400 ಎಕರೆಗಳ ಅರಣ್ಯವನ್ನ ವಿವಿಧ ಉದ್ದೇಶಗಳಿಗಾಗಿ ಸರ್ವನಾಶ ಮಾಡಲಾಗುತ್ತಿದೆ. ಸದಾ ಹಚ್ಚ ಹಸಿರಿನಿಂದ ಕಂಗೊಳಿಸಿ ಅಲ್ಲಿನ ವಾತಾವರಣವನ್ನ ತಂಪಾಗಿಸುತ್ತಿದ್ದ ಅರಣ್ಯದಲ್ಲಿ ಈಗ ನೀರಸ ಮೌನ ಆವರಿಸಿದೆ.
ಈ ಅರಣ್ಯದಲ್ಲಿ ವಿವಿಧ ಜಾತಿಯ ಹೂ ಬಿಡುವ ಸಸ್ಯಗಳು, ಕೆಲವು ಜಾತಿಯ ಸಸ್ತನಿಗಳು, ಸರಿ ಸೃಪಗಳು, ಪಕ್ಷಿಗಳು ಅರಣ್ಯವನ್ನೇ ನಂಬಿರುವಂತ ಲಕ್ಷಾಂತರ ಪ್ರಾಣಿಗಳ ಅಳಿವು -ಉಳಿವು ಕೂಡ ನಮ್ಮ ಕೈಯಲ್ಲಿದೆ. ಜೆಸಿಬಿಗಳ ಸದ್ದಿಗೆ ನವಿಲುಗಳ ಆರ್ತನಾದ ಎಂಥವರ ಕಲ್ಲು ಹೃದಯವನ್ನು ಕರಗಿಸುವಂತಿದೆ. ಹಲವಾರು ವರ್ಷಗಳಿಂದ ಅರಣ್ಯ ಪ್ರದೇಶವನ್ನ ಆವಾಸಸ್ಥಾನವಾಗಿ ಮಾಡಿಕೊಂಡಿದ್ದ ಜಿಂಕೆ ಮೊಲ ಮುಂತಾದ ಕಾಡು ಪ್ರಾಣಿಗಳು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಗಳು ಪ್ರಾಣಿ ಪ್ರಿಯರಿಗೆ ಕಣ್ಣಂಚಲಿ ನೀರು ತರಿಸುತ್ತಿದೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಅಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರತಿಭಟನೆಗೂ ಕೂಡ ಅವಕಾಶವಿಲ್ಲದಂತಾಗಿದೆ. ನೂರಾರು ವರ್ಷಗಳಿಂದ ಕೂಡಿ ಸಮೃದ್ಧವಾಗಿದ್ದ ಆ ಪ್ರದೇಶ ಇಂದು ಕೊಡಲಿನ ಒಂದೊಂದು ಏಟಿಗೆ ಸರ್ವಪತನ ಕಾಣುತ್ತಿದೆ. ಅದೆಷ್ಟೋ ಮುದ್ದ ಪ್ರಾಣಿ ಪಕ್ಷಿಗಳು ನರಕಯಾತನೇ ಅನುಭವಿಸುತ್ತಿವೆ.
ಇಂಥ ಘಟನೆಗಳು ಪದೇ ಪದೇ ನಡೆಯುತ್ತಿದ್ದರು ಕೂಡ ನಾವುಗಳು ಏಕೆ ಮೌನ ತಾಳುತಿದ್ದೇವೊ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತಿದೆ.
ಪ್ರಗತಿಯ ಹೆಸರಿನಲ್ಲಿ ದುರ್ಬಲ ಜೀವಿಗಳು ಮೌನವಾಗಿ ಅಳಿಯುತ್ತಿದೆ. ಅವಸಾನದ ಕ್ಷಣದಲ್ಲಿ ದನಿಯತ್ತು ಕೂಗಲು ಕೂಡ ಅವಕ್ಕೆ ಅವಕಾಶವಿಲ್ಲವೇನೋ ಎಂಬಂತೆ ಇದೆ ಅವುಗಳ ಆರ್ತನಾದ. ರಾಜಕೀಯ ಶೂನ್ಯತೆಯ ನಡುವೆ ಅರಣ್ಯಗಳ, ಪ್ರಾಣಿ ಪಕ್ಷಿಗಳ ರಕ್ಷಣೆ ನಮ್ಮದಾಗಬೇಕಿದೆ. ಪರಿಸರ ಸಂರಕ್ಷಣೆ ಕೇವಲ ಧ್ಯೆಯವಾಕ್ಯವಾಗಿರದೆ. ಅದು ನಮ್ಮ ಬದುಕಿನ ಕರ್ತವ್ಯವಾಗಬೇಕಿದೆ. ಜನಸಾಮಾನ್ಯರಿಗೂ ಕೂಡ ಪ್ರಕೃತಿಯ ಕುರಿತು ಅರಿವು ಮೂಡಿಸಿ ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲ ಉಳಿವಿಗಾಗಿ ನಾವುಗಳು ಎಚ್ಚೆತ್ತುಕೊಳ್ಳಬೇಕಿದೆ.
🖋📝🖊ಅಪ್ಪುರಾಜ್, ಸ್ನಾತಕೋತ್ತರ ವಿದ್ಯಾರ್ಥಿ