ದಶಕಗಳ ಹುಣಸೆ ಮರಗಳಿಗೆ ಬಿತ್ತು ಶಾಸಕರ ಕೊಡಲಿ ಪೆಟ್ಟು..?: ಲೇಔಟ್ ಅಂದ ಹೆಚ್ಚಿಸಲು ಹುಣಸೆ ಮರಗಳ ರೆಂಬೆ-ಕೊಂಬೆಗಳ ಕಟಾವ್: ಶಾಸಕ ಧೀರಜ್ ಮುನಿರಾಜುರವರ ವಿರುದ್ಧ ಪರಿಸರ ಪ್ರೇಮಿಗಳ ಅಕ್ರೋಶ

ನಗರದ ಬಸವ ಭವನದ ಸಮೀಪ ಹಾದು ಹೋಗಿರುವ ದಾಬಸ್ ಪೇಟೆ ಹಾಗೂ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಬೃಹದಾಕಾರವಾದ ಹುಣಸೆ ಮರಗಳು ಇವೆ. ಲಾವಣ್ಯ ಶಾಲೆ ಸಮೀಪ ಶಾಸಕ ಧೀರಜ್ ಮುನಿರಾಜು ಅವರಿಗೆ ಸಂಬಂಧಿಸಿದೆ ಎನ್ನಲಾದ ಲೇಔಟ್ ಮುಂದೆ ಇದ್ದ ಹುಣಸೆ ಮರಗಳ ರೆಂಬೆ ಕೊಂಬೆಗಳ ಕಡಿದು ಮರಗಳ ಅಂದ ಚೆಂದ ಕೆಡಿಸಿದಲ್ಲದೇ ನಗರದ ಸೌಂದರ್ಯವನ್ನು ಹಾಳು ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಈ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಣಸೆ ಮರಗಳ ಇರುವದರಿಂದ ಹೆದ್ದಾರಿಯಲ್ಲಿ ಒಂದು ರೀತಿಯ ಸೌಂದರ್ಯ ಎದ್ದು ಕಾಣುತ್ತಿತ್ತು. ಬಹಳ ವರ್ಷಗಳಿಂದ ಈ ಮರಗಳು ಯಾರಿಗೂ ಎನೂ ತೊಂದರೆ ಮಾಡಿಲ್ಲ. ಈಗ ತೊಂದರೆ ಮಾಡುತ್ತವೆ ಎಂದು ರೆಂಬೆ ಕೊಂಬೆಗಳಿಗೆ ಕೊಡಲಿ ಹಾಕಿದ್ದಾರೆ ಎಂದು ಪರಿಸರ ಪ್ರೇಮಿ ಚಿದಾನಂದ ಅವರು ಆರೋಪಿಸಿದ್ದಾರೆ.

ಒಳನೋಟಕ್ಕೆ ಶಾಸಕರ ಲೇಔಟ್ ಗೆ ಈ ಹುಣಸೆ ಮರಗಳು ತೊಂದರೆ ಕೊಡುತ್ತವೆ.‌ ಮರಗಳಿಂದ ಲೇಔಟ್ ನ ಅಂದ ಚೆಂದ ಹಾಳಾಗುತ್ತೆ, ಈ ಮರಗಳು ಅಡ್ಡಿ ಇರುವುದರಿಂದ ಲೇಔಟ್ ಯಾರಿಗೂ ಕಾಣುವುದಿಲ್ಲ ಎಂದು ಈ ಕೃತ್ಯ ಎಸಗಿರಬಹುದು ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ವಿದ್ಯುತ್ ಲೈನ್ ಗೆ ರೆಂಬೆ ಕೊಂಬೆಗಳು ತಾಕುತ್ತವೆ. ಇದರಿಂದ ಅವಘಡ ಸಂಭವಿಸುತ್ತದೆ ಎಂದು ಹೇಳಿ ಅರ್ಧ ಮರವನ್ನೆ ಕತ್ತರಿಸಲಾಗಿದೆ. ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿಯುತ ಸ್ಥಾನದಲ್ಲಿರುವವರೆ ಹೀಗೆ ಮಾಡಿದರೆ ಸಾಮಾನ್ಯರ ನಡೆ ಯಾವ ರೀತಿ ಇರುತ್ತದೆ‌. ಈ ನಡೆ ಶಾಸಕರಿಗೆ ಗೌರವ ತರುವಂತಹದಲ್ಲ. ತಾಲೂಕಿನಾದ್ಯಂತ ಪರಿಸರ ಪ್ರೇಮಿಗಳ ನಿರಂತರ ಹೋರಾಟದಿಂದ ನೂರಾರು ವರ್ಷಗಳ ಮರಗಿಡಗಳನ್ನು ಉಳಿಸಿ ಬೆಳೆಸಲಾಗಿದೆ. ಅಂತಹ ಮರಗಳಿಗೆ ಈಗ ಶಾಸಕ ಧೀರಜ್ ಮುನಿರಾಜ್ ಅಧಿಕಾರಾವಧಿಯಲ್ಲಿ ಕೊಡಲಿ ಪೆಟ್ಟು ಬೀಳುತ್ತಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಅಧಿಕಾರ ದುರುಪಯೋಗದಿಂದ ಹುಣಸೆ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಅವೈಜ್ಞಾನಿಕವಾಗಿ, ಸೂಕ್ತ ಕಾರಣವಿಲ್ಲದೇ ಮರಗಿಡಗಳನ್ನು ಕಡಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಇಲಾಖೆಯಿಂದ ಲೇಔಟ್ ಮುಂದಿರುವ ನಾಲ್ಕು ಮರಗಳ ಹತ್ತು ಕೊಂಬೆಗಳನ್ನು ಕಡಿಯಲು ಹಾಗೂ ಎರಡು ಮರಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಅನುಮತಿ ಪಡೆದಿದ್ದಾರೆ. ಇದಕ್ಕೂ ಅರಣ್ಯ ಇಲಾಖೆ ಅನುಮತಿ ನೀಡಬಾರದಿತ್ತು. ಅನುಮತಿ ನೀಡಿದ್ದಾರೆಂದರೆ ಅದು ರಾಜಕೀಯ ಪ್ರಭಾವ ಎಂದೇ ಭಾವಿಸಬೇಕಾಗಿದೆ. ತಮ್ಮ ಅಧಿಕಾರ ಬಳಸಿ ಅವೈಜ್ಞಾನಿಕವಾದ ಕೆಲಸವನ್ನು ಕಾನೂನಾತ್ಮಕವಾಗಿ ಮಾಡಲು ಶಾಸಕರು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ಹಾಗೂ ಶಾಸಕರು ತಾಲೂಕಿನಲ್ಲಿ ಪರಿಸರ ನಾಶ ಮಾಡಿ ನಗರದ ಸೌಂದರ್ಯ ಹಾಳು ಮಾಡುತ್ತಿದ್ದಾರೆ. ಪರಿಸರ ನಾಶದಿಂದ ಅನೇಕ ಕಾಯಿಲೆಗಳಿಂದ ಸಾಕಷ್ಟು ಸಾವುನೋವುಗಳನ್ನ ಈಗಾಗಲೇ ಅನುಭವಿಸುತ್ತಿದ್ದೇವೆ. ಈ ಹಿರಿಯ ಮರಗಳು ದೊಡ್ಡಬಳ್ಳಾಪುರದ ಚರಿತ್ರೆಯನ್ನು ಬಿಚ್ಚಿಡುತ್ತವೆ. ಅಂತಹ ಮರಗಳನ್ನು ಕಡಿಯುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಇನ್ನೂ ಬೇಕಾದಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಮಾನ್ಯ ಶಾಸಕರೇ ನಿಮ್ಮ ಅಧಿಕಾರ ಬಳಸಿ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡಿ, ಪರಿಸರ ನಾಶ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *

error: Content is protected !!