ನೀಟ್ ಅಕ್ರಮ ತನಿಖೆಯೊಂದಿಗೆ ಮರು ಪರೀಕ್ಷೆ ನಡೆಸುವಂತೆ ಎಎಪಿ ಪಕ್ಷ ಒತ್ತಾಯ

ಕೋಲಾರ: ದೇಶಾದ್ಯಂತ ನಡೆದ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) 2024ರಲ್ಲಿ ನಡೆದಿರುವ ಅಕ್ರಮದ ಕುರಿತು ಸಿಬಿಐ ತನಿಖೆಗೆ ವಹಿಸಿ ಮರು ಪರೀಕ್ಷೆಗೆ ಆದೇಶಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಸುರೇಶ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಿಂದ ದಕ್ಷಿಣ ಭಾರತದ ವಿಧ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ದೇಶದಲ್ಲಿ ಸುಮಾರು 4700 ಸೆಂಟರ್ ಗಳಲ್ಲಿ ನೀಟ್ ಪರೀಕ್ಷೆ ಬರೆದಿದ್ದಾರೆ‌. ಕೆಲವು ಸೆಂಟರ್ ಗಳಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಗಳಿಸಿದ್ದು, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 6 ವಿದ್ಯಾರ್ಥಿಗಳು ಟಾಪ‌ರ್ ಆಗಿದ್ದಾರೆ. ಇದು ಅನೇಕ ಅನುಮಾನಗಳು ಮೂಡಿಸಿದೆ ಈ ಬಗ್ಗೆ ಕೇಂದ್ರ ಸರ್ಕಾರವು ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಿಂದ ಲಕ್ಷಾಂತರ ವೈದ್ಯಕೀಯ ವಿಧ್ಯಾರ್ಥಿಗಳ ವ್ಯಾಸಂಗದ ಕನಸು ಭಗ್ನವಾಗಿದೆ. ಅವರಿಗೆ ಅನ್ಯಾಯವಾಗಲಿದೆ ನೀಟ್ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳು ಸಾಕಷ್ಟು ನಷ್ಟ ಅನುಭವಿಸಲಿದ್ದು, ವೈದ್ಯಕೀಯ ಕೋರ್ಸ್ ಸೀಟು ಗಿಟ್ಟಿಸಿಕೊಳ್ಳುವುದು ಕಷ್ಟಕರವಾಗಿದೆ ರಾಜ್ಯಗಳಿಗೆ ಸಿಗಬೇಕಾದ ಶೇಕಡಾ 15% ಮೀಸಲಾತಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಬಾರೀ ಅನ್ಯಾಯವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕನಸ್ಸು ನುಚ್ಚು ನೂರಾಗಿ,ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಹೊಣೆ ಯಾರದು ಎಂದು ಪ್ರಶ್ನಿಸಿದರು.

ಪ್ರತೀ ಸಾಲಿನಲ್ಲಿ 3 ರಿಂದ 4 ವಿದ್ಯಾರ್ಥಿಗಳು ಟಾಪರ್ ಬರುತ್ತಿದ್ದರು, ಆದರೆ ಈ ಭಾರಿ ಸರಿ ಸುಮಾರು 60 ಕ್ಕಿಂತ ಹೆಚ್ಚು ಜನ ಉತ್ತರ ಭಾರತದವರೇ ಟಾಪರ್ ಗಳಾಗಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ನಮಗೆ ಇರುವ ಮಾಹಿತಿ ಪ್ರಕಾರ ವೃತ್ತಿಪರ ಡಾಕ್ಟರ್ ಗಳೇ ಈ ಪರೀಕ್ಷೆಯನ್ನು ಬರೆದಿದ್ದು, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಬಿಡುಗಡೆ ಗೊಂಡಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದು, ಕೆಲವು ರಾಜ್ಯಗಳಲ್ಲಿ ಪರೀಕ್ಷೆ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ಸರಬರಾಜಾಗಿದ್ದು, ಅದಕ್ಕಾಗಿ 60 ರಿಂದ 70 ಗ್ರೇಸ್ ಮಾರ್ಕ್ಸ್ ನೀಡಿರುವುದಾಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ಇದೆಲ್ಲಾ ಉತ್ತರ ಭಾರತ ವಿದ್ಯಾರ್ಥಿಗಳ ಪಾಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಾರೀ ಅನ್ಯಾಯವಾಗಿದ್ದು ಕೂಡಲೇ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನ ಸರಿಪಡಿಸುವಲ್ಲಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್, ನಗರ ಘಟಕದ ಅಧ್ಯಕ್ಷ ನಿಸ್ವಾನ್ ಇದ್ದರು.

Leave a Reply

Your email address will not be published. Required fields are marked *