
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಹಾಡೋನಹಳ್ಳಿಯ ಖಾಸಗಿ ಲೇಔಟ್ನ ನಿರ್ಜನ ಪ್ರದೇಶದಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯ ನಿವಾಸಿಗಳು. ಹುಡುಕಾಟ ನಡೆಸಿದ್ದು ಸುಮಾರು 5 ದಿನಗಳ ಮಗುವನ್ನು ರಕ್ಷಿಸಿ, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದರು.
ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು, ನಗರದ ತಾಯಿ-ಮಗು ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರವಾಗಿ ನಿತ್ರಾಣವಾಗಿದ್ದ ಮಗುವಿಗೆ ಸೂಕ್ತ ಆರೈಕೆ, ಚಿಕಿತ್ಸೆ ನೀಡಿದ ಸರ್ಕಾರಿ ತಾಯಿ ಮಗು ಆಸ್ಪತ್ರೆ ವೈದ್ಯರಾದ ಡಾ.ಸವಿತಾ, ಡಾ.ಗಾಯತ್ರಿ ಮಗುವಿನ ಜೀವ ಉಳಿಸಿದ್ದಾರೆ.
ನವಜಾತ ಗಂಡು ಮಗು 1 ಕೆ.ಜಿ 800 ಗ್ರಾಂ ತೂಕವಿದ್ದು, ಮಗುವಿನ ಜೀವ ಉಳಿಸುವುದು ಸವಾಲಿನ ಕಾರ್ಯವಾಗಿತ್ತು. ಆಸ್ಪತ್ರೆಯಲ್ಲಿ ಪ್ರಸೂತಿಯಾಗಿದ್ದ ತಾಯಂದಿರಿಗೆ ಮನವಿ ಮಾಡಿ ಮಗುವಿಗೆ ಹಾಲುಣಿಸಲು ಒಪ್ಪಿಸಿದ್ದು, ಜೊತೆ ಪೌಡರ್ ಹಾಲನ್ನು ಕೂಡ ಮಗುವಿಗೆ ಕುಡಿಸಲಾಗುತ್ತಿದೆ ಎಂದು ವೈದ್ಯರಾದ ಡಾ.ಸವಿತಾ, ಡಾ.ಗಾಯತ್ರಿ ತಿಳಿಸಿದರು.
ಕಳೆದ ಒಂದು ವಾರದಿಂದ ಹಾರೈಕೆ ಮಾಡಿದ ವೈದ್ಯರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ಕಾರಿ ದತ್ತು ಕೇಂದ್ರದ ಕಾರ್ಯಕರ್ತೆ ಹೇಮಾ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವ ಅಧಿಕಾರಿಗಳು ದತ್ತು ಪಡೆಯಲು ಅರ್ಜಿ ಸಲ್ಲಿಸಿರುವ ಪೋಷಕರಿಗೆ ಈ ಮಗುವನ್ನು ಹಸ್ತಾಂತರ ಮಾಡಲಿದ್ದಾರೆ.