ನಾನು KRPP ಪಕ್ಷದಿಂದ ಕಣಕ್ಕಿಳಿಯುವುದಿಲ್ಲ ;ವದಂತಿಗೆ ತೆರೆ ಎಳೆದ ಬಿ.ಸಿ.ಆನಂದ್ ಕುಮಾರ್; ಕಿಡಿಗೇಡಿಗಳಿಂದ ಅಪಪ್ರಚಾರ ಎಂದು ಆಕ್ರೋಶ

‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದಿಂದ ದೊಡ್ಡಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಕೆಎಂಎಫ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಬಿ.ಸಿ.ಆನಂದಕುಮಾರ್ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಫೇಸ್ ಬುಕ್ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವದಂತಿಯನ್ನು ಬಿ.ಸಿ.ಆನಂದಕುಮಾರ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಕ್ಷೇತ್ರದ ಮತದಾರರ ದಿಕ್ಕು ತಪ್ಪಿಸಲೆಂದೇ ಕೆಲ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಜಾಲತಾಣಗಳಲ್ಲಿ ಹುಸಿ‌ಸುದ್ದಿ ಪ್ರಕಟಿಸಿದ್ದಾರೆ. ಜೊತೆಗೆ ಬೇಕೆಂತಲೇ ವೈರಲ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದೊಂದು ಸುಳ್ಳು ಸುದ್ದಿ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಲು ಕಿಡಿಗೇಡಿಗಳು‌ ಮಾಡುತ್ತಿರುವ ಷಡ್ಯಂತ್ರ್ಯ. ಮಾಧ್ಯಮ ಬೆಳಕು ಎಂಬ ಫೇಸ್ ಬುಕ್ ಪೇಜ್ ನಲ್ಲಿ ಆಕ್ಷೇಪಾರ್ಹ ಬರಹ ಪ್ರಕಟಿಸಿದ್ದಾರೆ ಎಂದು ದೂರಿದ್ದಾರೆ.

ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದೇನೆ, ಜನವರಿ 20 ರೊಳಗೆ ಸೂಕ್ತ ಅಭ್ಯರ್ಥಿ ಘೋಷಿಸುವಂತೆ ಕಾಂಗ್ರೆಸ್ ರಾಜ್ಯ ನಾಯಕರಿಗೆ ಗಡುವು ಸಹ ನೀಡಿದ್ದೇವೆ. ಹೀಗಿರುವಾಗ ಹೊಸ ಪಕ್ಷದಿಂದ ಚುನಾವಣೆಗೆ ಇಳಿಯಬೇಕಾದ ಅನಿವಾರ್ಯತೆ ಬಂದಿಲ್ಲ. ನನ್ನ ಏಳಿಗೆ ಸಹಿಸದ ಕೆಲವರು ಈ ರೀತಿಯ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇಂತಹ ವದಂತಿಗಳಿಗೆ ಅಭಿಮಾನಿಗಳು, ಕಾರ್ಯಕರ್ತರು ಕಿವಿಗೊಡಬಾರದು ಎಂದು ಬಿ.ಸಿ.ಆನಂದ್ ಕುಮಾರ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *