
ನವರಾತ್ರಿಯ ಉತ್ಸವ ನಾಡಿನೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ. ವಿಶೇಷವಾಗಿ ದೇವತೆಗಳಿಗೆ ಶರನ್ನವರಾತ್ರಿ ಪೂಜೆ, ಹೋಮವನ್ನು ಅರ್ಪಿಸಲಾಗುತ್ತಿದೆ. ನಗರದ ದೇವತೆ ಶ್ರೀ ಮುತ್ಯಾಲಮ್ಮ ದೇವಿಗೆ ನವರಾತ್ರಿಯ ಒಂಭತ್ತನೇ ದಿನದಂದು ಬಂಗಾರದ ಸ್ವರ್ಣಲಂಕಾರ ಮಾಡಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
ಇಂದು ಬೆಳಗ್ಗೆಯಿಂದಲೇ ದೇವಿಯ ದರ್ಶನ ಪಡೆಯಲು ಭಕ್ತಾಧಿಗಳ ದಂಡು ಹರಿದು ಬರುತ್ತಿದೆ. ಈ ಬಾರಿಯ ನವರಾತ್ರಿಯು ಅಕ್ಟೋಬರ್ 3 ರಿಂದ ಪ್ರಾರಂಭವಾಗಿತ್ತು. ಚಾಮುಂಡೇಶ್ವರಿ ದೇವಿಗೆ ಒಂಭತ್ತು ದಿನ ಯಾವ ರೀತಿ ಅಲಂಕಾರ ಮಾಡಿ ಪೂಜಿಸಲಾಗುವುದೋ ಅದೇರೀತಿ ಶ್ರೀ ಮುತ್ಯಾಲಮ್ಮ ದೇವಿಗೂ ಅಲಂಕರಿಸಿ ಪೂಜಿಸಲಾಗುತ್ತಿದೆ.

ದೇವಿಗೆ ಈ ಒಂಭತ್ತು ದಿನಗಳಿಂದಲೂ ವಿಧವಿಧವಾದ ಅಲಂಕಾರ ಮಾಡಲಾಗಿತ್ತು, ಮೊದಲನೇ ದಿನದಂದು ಕರಗದ ಅಲಂಕಾರ, ಎರಡನೇ ದಿನ ಮುತ್ತಿನ ಅಲಂಕಾರ, ಮೂರನೇ ದಿನ ಹೂವಿನ ಅಲಂಕಾರ, ನಾಲ್ಕನೇ ದಿನ ಅರ್ಧನಾದೇಶ್ವರ ಅಲಂಕಾರ, ಐದನೇ ದಿನ ಲಿಂಗದಾಲಂಕಾರ, ಆರನೇ ದಿನ ಚಾಮುಂಡೇಶ್ವರಿ ಅಲಂಕಾರ, ಏಳನೇ ದಿನ ಶಾರದಾಂಬೆ ಅಲಂಕಾರ, ಎಂಟನೇ ದಿನ ನವ ಹೂಗಳ ಅಲಂಕಾರ, ಇಂದು ಸ್ವರ್ಣಾಲಂಕಾರ ಮಾಡಲಾಗಿದೆ. ಈ ಒಂಭತ್ತು ದಿನಗಳ ಕಾಲ ದೇವಿಯ ಒಂಭತ್ತು ರೂಪಗಳನ್ನು ಪೂಜಿಸಲಾಗುತ್ತಿದೆ.

ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ರಂಗೋಲಿ, ದೇವಿಯನ್ನು ಒಲಿಸಿಕೊಳ್ಳಲು ಹಾಡುಗಳನ್ನು ಹಾಡಲಾಗುತ್ತದೆ. ಆ ತಾಯಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಸಿರಿ ಸಂಪತ್ತು ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ಎಂದು ಪೂಜಿಸಲಾಗುತ್ತಿದೆ…