ಗೂಳ್ಯನಂದಿಗುಂದ ಗ್ರಾಮದ ಸ.ನಂ 191 ರಲ್ಲಿ ನಮ್ಮ ತಾಯಿಯವರಿಗೆ ಮಂಜೂರಾಗಿದ್ದ 3 ಎಕರೆ 30 ಗುಂಟೆ ಜಮೀನಿನಲ್ಲಿ ಕಳೆದ 50 ವರ್ಷಗಳಿಂದ ನಮ್ಮ ಕುಟುಂಬ ಉತ್ತು ಬಿತ್ತಿ ಬೆಳೆತೆಗೆದು ಜೀವನ ಸಾಗಿಸುತ್ತಿದ್ದೇವೆ. ಈಗ ನಮ್ಮ ಜಮೀನಿನ ಪಕ್ಕದ 184/1 ರಲ್ಲಿ ಬೆಂಗಳೂರು ಮೂಲದ ಓನ್ ವೋಲ್ಡ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಮಾಲಿಕರಾದ ಸಜೀದ್ ಆಲಿ ಆಗ ಅವರು ಜಮೀನು ಖರೀದಿ ಮಾಡಿದ್ದು. ಅವರ ಜಮೀನಿನ ಪಕ್ಷದಲ್ಲಿರುವ ನಮ್ಮ ಜಮೀನನ್ನು ಗೂಂಡಾ ಪಡೆ ಕಟ್ಟಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ರೈತ ಮುನಿರಾಜು ಆರೋಪಿಸಿದ್ದಾರೆ.
ನಮ್ಮ ಬದುಕಿಗೆ ಆಧಾರವಾಗಿದ್ದ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ನೀಡಿದ್ದೇವೆ. ಎಲ್ಲವೂ ತಿಳಿದಿದ್ದರೂ ಅಧಿಕಾರಿಗಳು ಮತ್ತು ಪೊಲೀಸರು ಮೌನವಹಿಸಿರುವುದು ವಿಪರ್ಯಾಸ ಎಂದು ತಮ್ಮ ನೋವನ್ನು ತೋಡಿಕೊಂಡರು.
ಇನ್ನು ಸಜೀದ್ ಆಲಿಆಗ ಅವರಿಂದ ನಮ್ಮ ಭೂಮಿ ರಕ್ಷಣೆಗಾಗಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ನ್ಯಾಯಾಲಯವು ಸದರಿ ಭೂಮಿಯಲ್ಲಿ ಯಾವುದೇ ಚಟುವಟಿಕೆ ನಡೆಯುವಂತಿಲ್ಲ ಎಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದರು.
ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆ ಇದ್ದರೂ ಸಹ ನ್ಯಾಯಾಲಯದ ಬೇಸಿಗೆ ರಜೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಸಜೀದ್ ಆಲಿ ಆಗ ಮತ್ತು ಅವರ ಸಹಚರರು ಭೂ ಮಾಪನಾ ಇಲಾಖೆಗೆ ನೀಡಿರುವ ಸರ್ವೇ ಅರ್ಜಿ ಅನುಮೋದನೆಗಾಗಿ ಬಾಕಿ ಉಳಿದಿದ್ದರೂ ಖಾಸಗಿ ಸರ್ವೆ ಅಧಿಕಾರಿಗಳ ಸಹಾಯದಿಂದ ನಮ್ಮ ಸ್ಥಳದಲ್ಲಿ ಅನಧಿಕೃತ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು. ನ್ಯಾಯ ಕೇಳಲು ಹೋದ ನಮ್ಮ ಮೇಲೆ ಗೂಂಡಗಳಂತೆ ವರ್ತಿಸುತ್ತಿದ್ದಾರೆ. ರಕ್ಷಣೆ ನೀಡಬೇಕಿದ್ದ ಪೊಲೀಸ್ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದೆ. ಸಾಜಿದ್ ಅಲಿ ಹಾಗೂ ಸಹಚರರು ರಾತ್ರೋರಾತ್ರಿ ಕಾಂಪೌಂಡ್ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದು ನಮಗೆ ಸೇರಿರುವ ಸರ್ವೇ ನಂಬರ್ 191 ರ 3 ಎಕರೆ 30 ಗುಂಟೆ ಜಮೀನನ್ನು ದಿನೇ ದಿನಕ್ಕೆ ಒತ್ತುವರಿ ಮಾಡುವ ಮೂಲಕ ಈಗಾಗಲೇ ಸುಮಾರು ಒಂದು ಎಕರೆ ಭೂಮಿಯನ್ನು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಕುರಿತು ನಮಗೆ ನ್ಯಾಯ ಬೇಕಿದೆ ವ್ಯವಸಾಯ ಒಂದೇ ನಮ್ಮ ಜೀವನೋಪಾಯಕ್ಕೆ ಮಾರ್ಗವಾಗಿದ್ದು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.
ರೈತ ಮಹಿಳೆ ಪುನೀತ ಮಾತನಾಡಿ ಕಳೆದ ಎಂಟು ತಿಂಗಳಿನಿಂದ ಈ ಸಮಸ್ಯೆ ಉದ್ಭವವಾಗಿದ್ದು ಬೆಂಗಳೂರು ಮೂಲದವರಾದ ಸಾಜಿದ್ ಅಲಿ ಎಂಬುವರು ಸರ್ವೆ ನಂಬರ್ 184/1 ರ ಭೂಮಿ ಖರೀದಿ ಮಾಡಿದ್ದು ಈಗ ತಮ್ಮ ಅಧಿಕಾರ ಬಲ ಹಾಗೂ ಹಣ ಬಲದಿಂದ ನಮ್ಮ ಭೂಮಿಗೆ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ ನಮಗೆ ಭಯ ಹೆಚ್ಚಾಗುತ್ತಿದ್ದು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಪ್ರತಿದಿನದ ಈ ಬೆಳವಣಿಗೆ ಕಾಣುತ್ತಿದ್ದರೆ ನಮ್ಮ ಜೀವಕ್ಕೆ ಕುತ್ತು ಬರಬಹುದು ಎಂಬ ಭಯ ಹೆಚ್ಚಾಗುತ್ತಿದೆ. ಈಗಾಗಲೇ ಒಂದು ಎಕರೆಯಷ್ಟು ಭೂಮಿಯನ್ನು ಅತಿಕ್ರಮ ಪ್ರವೇಶ ಮಾಡಿದ್ದು ಮುಂದೆ ಏನಾಗುವುದು ಎಂಬ ಭಯ ಕಾಡುತ್ತಿದೆ. ಇದೇ ಭೂಮಿಯಲ್ಲಿ ನಾವು ರಾಗಿ, ಜೋಳ ಸೇರಿದಂತೆ ಹಲವು ಬೆಳೆ ಬೆಳೆಯುವ ಮೂಲಕ ನಮ್ಮ ಜೀವನ ಸಾಗಿಸಿದ್ದೇವೆ ಇಂದು ನಮ್ಮ ಭೂಮಿ ಕೈತಪ್ಪಿ ಹೋಗುತ್ತಿದೆ ನಮ್ಮ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಂದಗುಂದ ವೆಂಕಟೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು