ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿಗೆ ಬೇಕಿರುವುದು ಎತ್ತಿನಹೊಳೆ ಹಾಗೂ ಕಾವೇರಿ ನೀರು ಹೊರತು, ಬೆಂಗಳೂರಿನಲ್ಲಿ ಶುದ್ಧೀಕರಿಸಿರುವ ವೃಷಾಭಾವತಿ ನೀರು ಅಲ್ಲ. ವೃಷಾಭಾವತಿ ನೀರಾವರಿ ಯೋಜನೆ ವಿರುದ್ಧ ತಾಲ್ಲೂಕು ಎಲ್ಲಾ ಗ್ರಾಮ ಪಂಚಾಯಿತಿಗಳು 15 ದಿನಗಳಲ್ಲಿ ನಿರ್ಣಯ ಅಂಗೀಕರಿಸಿ ನೀಡುವಂತೆ ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ನಗರದ ಡಾ.ಬಾಬುಜಗಜೀವನ್ ರಾಮ್ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯಿತಿ, ನಗರ ಸಭೆ ಚುನಾಯಿತ ಜನಪ್ರತಿನಿಧಿಗಳ, ವಿವಿಧ ಸಂಘಟನೆ ಮುಖಂಡರ ಹಾಗೂ ಸಾರ್ವಜನಿಕರ ಸಮಾಲೋಚನ ಸಭೆಯಲ್ಲಿ ಮಾತನಾಡಿ, ಸ್ಥಳೀಯ ರೈತರ ವಿರೋಧದ ನಡುವೆಯು ಈಗಾಗಲೇ ನೆಲಮಂಗಲ ತಾಲ್ಲೂಕಿನ ಕೆರೆಗಳಿಗೆ ವೃಷಾಭಾವತಿ ನೀರು ಹರಿಸುವ ಯೋಜನೆಯ ಕಾಮಗಾರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆ ಹಾಗೂ ಅರಳುಮಲ್ಲಿಗೆ ಕೆರೆಗಳಿಗು ಬೆಂಗಳೂರಿನಲ್ಲಿ ಹರಿಯುವ ವೃಷಾಭಾವತಿ ನೀರನ್ನು ಶುದ್ಧೀಕರಿಸಿ ಹರಿಸುವ ಕಾಮಗಾರಿಯ ಸಮಗ್ರ ಯೋಜನಾವರದಿ ಸಿದ್ಧವಾಗುತ್ತಿದೆ. ಹಾಗಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವೃಷಾಭಾವತಿ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸುವ ಯೋಜನೆ ವಿರುದ್ಧ ನಿರ್ಣಯ ಅಂಗೀಕರಿಸಿ ನೀಡಿದರೆ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಎತ್ತಿನಹೊಳೆ ಯೋಜನೆಯಲ್ಲಿ ಯೋಜನೆಯಲ್ಲಿ ತಾಲ್ಲೂಕಿನ ಸಾಸಲು ಹೋಬಳಿಯ 7 ಕೆರೆಗಳಿಗೆ ಮಾತ್ರ ನೀರು ತುಂಬಿಸುವ ಯೋಜನೆ ಇದೆ. ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿರುವ ತಾಲ್ಲೂಕಿನ 28 ಕೆರೆಗಳಿಗು ಎತ್ತಿನಹೊಳೆ ನೀರು ತುಂಬಿಸಬೇಕು. ನಗರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕಾವೇರಿ ನೀರು ಹರಿಸುವ ಪೈಪ್ ಲೈನ್ ಹಾಕಲಾಗಿದೆ. ಇದೇ ಪೈಪ್ ಲೈನ್ ಮೂಲಕ ನಗರಸಭೆ ವ್ಯಾಪ್ತಿಗೆ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗು ಕಾವೇರಿ ನೀರು ಸರಬರಾಜು ಮಾಡಬೇಕು. ಈ ಬಗ್ಗೆ ತಾಲ್ಲೂಕಿನ ಸರ್ವ ಪಕ್ಷ ನಿಯೋಗವನ್ನು ರಾಜ್ಯ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿಗೆ ಕರೆದೊಯ್ದು ಮನವಿ ಮಾಡಲಾಗುವುದು ಎಂದರು.
ದೇವನಹಳ್ಳಿಗೆ ಮಾತ್ರ ಕಾವೇರಿ ನೀರಿಸುವ ಯೋಜನೆ, ಮೆಟ್ರೋ ರೈಲು ಯೋಜನ ಜಾರಿಯಾದರೆ ಸಾಲದು. ನಮ್ಮ ತಾಲ್ಲೂಕಿಗು ಈ ಯೋಜನೆಗಳು ಜಾರಿಯಾಗಬೇಕು. ಇದಕ್ಕೆ ನಾವು ಬೆಂಬಲವಾಗಿ ನಿಂತು ಹೋರಾಟಮಾಡಲು ಸಿದ್ದ ಎಂದು ರಾಜ್ಯ ರೈತ ಸಂಘ ತಾಲ್ಲೂಕು ಕಾರ್ಯದರ್ಶಿ ಆರ್.ಸತೀಶ್ ಹೇಳಿದರು.
ನಮ್ಮ ತಾಲ್ಲೂಕಿಗೆ ಬೆಂಗಳೂರಿನ ಕೊಚ್ಚೆ ನೀರಾಗಿರುವ ವೃಷಾಭಾವತಿ ನೀರು ಹರಿಸುವ, ಬಿಬಿಎಂಪಿ ಕಸ ತಂದು ಸುರಿಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಯಾವುದೇ ತರಹದ ಹೋರಾಟಕ್ಕೂ ನಮ್ಮ ತಾಲ್ಲೂಕಿನ ಜನ ಸಿದ್ದವಾಗದೇ ಇದ್ದರೆ ನಮ್ಮ ಮಕ್ಕಳ ಬದುಕು ಕರಾಳವಾಗಲಿದೆ ಎಂದು ಮುಖಂಡ ತಿ.ರಂಗರಾಜು ಹೇಳಿದರು.
ಮಳೆ ನೀರನ್ನು ಬಳಸಿಕೊಳ್ಳುವ ಕಡೆಗೂ ಆದ್ಯತೆ ನೀಡಬೇಕು. ತಿಪ್ಪೂರು ಸಮೀಪದ ಗೊರವೇಹಳ್ಳಿ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ನೀರು ವ್ಯರ್ಥವಾಗಿ ಹರಿದು ಹೋಗುತ್ತಿವೆ. ಈ ನೀರಿನ ಬಳಕೆಗೆ ಸಮಗ್ರ ಯೋಜನೆ ರೂಪಿಸಬೇಕು. ಕೆಎಐಡಿಬಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಆದರೆ ಸ್ವಾಧೀನವಾಗಿರುವ ಭೂಮಿಯನ್ನು ಮಾತ್ರ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಈ ಅವೈಜ್ಞಾನಿಕ ಭೂಸ್ವಾಧೀನ ನಿಲ್ಲಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಹೇಳಿದರು.
ಜನರಿಗೆ ಕಂಟಕವಾಗಲಿದೆ ಸಿಮೆಂಟ್ ಕಾರ್ಖಾನೆ:
ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರಿನ ಹೊರ ವರ್ತುಲ ರೈಲು ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ರೈಲು ನಿಲ್ದಾಣವು ಪ್ರಮುಖವಾಗಿದೆ. ಆದರೆ ಇದೇ ರೈಲು ನಿಲ್ದಾಣದ ಸಮೀಪ ಖಾಸಗಿ ಕಂಪನಿಯೊಂದು ಸಿಮೆಂಟ್ ತಯಾರಿಕಾ ಕಾರ್ಖಾನೆ ನಿರ್ಮಿಸಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಕಂಟನಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ರೀತಿಯ ಅನುಮತಿಯನ್ನು ನೀಡಬಾರದು. ಈ ಬಗ್ಗೆ ದೊಡ್ಡಬಳ್ಳಾಪುರ ಯೋಜನ ಪ್ರಾಧಿಕಾರಕ್ಕು ಪತ್ರ ಬರೆಯಲಾಗಿದೆ. ಸಿಮೆಂಟ್ ಕಾರ್ಖಾನೆ ಇಲ್ಲಿ ಸ್ಥಾಪನೆಯಾದರೆ ಇದರ ದೂಳಿನಿಂದ ಹತ್ತಾರು ಗ್ರಾಮಗಳ ಜನರ ಆರೋಗ್ಯ ಹಾಳಾಗಲಿದೆ. ರೈತರ ಬೆಳೆಗಳಿಗು ಹಾನಿಯಾಗಲಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ತಿ.ರಂಗರಾಜು, ವತ್ಸಲಾ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದ್ದರು.