ನಮಗೆ ಬಿಬಿಎಂಪಿ ಕಸವು ಬೇಡ, ಅನುದಾನವೂ ಬೇಡ- ತಾಲೂಕಿನ ಜನರ ಆರೋಗ್ಯ, ಪರಿಸರ ರಕ್ಷಣೆ ಮುಖ್ಯ- ಶಾಸಕ ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ ತಾಲೂಕಿನ ಜನರ ಆರೋಗ್ಯ, ಪರಿಸರ ರಕ್ಷಣೆ ಮಾಡುವ ಸಲುವಾಗಿ ಚಿಗರೇನಹಳ್ಳಿಯಲ್ಲಿನ ಎಂಎಸ್ ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಬರುವ ಕಸವನ್ನು ನಿಲ್ಲಿಸುವಂತೆ ಆಗ್ರಹಿಸಿ‌ ಮುಂದಿನ‌ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.‌ ಇದಕ್ಕೆ ಎಲ್ಲರು ಪಕ್ಷಾತೀತವಾಗಿ ಬೆಂಬಲಸಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಮನವಿ ಮಾಡಿದರು.

ನಗರದ ಡಾ.ಬಾಬುಜಗಜೀವನ್ ರಾಮ್ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯಿತಿ, ನಗರ ಸಭೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿ, ಎರಡು ವರ್ಷಗಳಿಂದಲೂ ಬಿಬಿಎಂಪಿ ವತಿಯಿಂದ ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನವನ್ನು ಪಡೆಯದೆ ಕಸ ಹಾಕುವುದಕ್ಕೆ ವಿರೋಧಿಸಲಾಗಿದೆ. ನಮಗೆ ಬೇಕಿರುವುದು ಬಿಬಿಎಂಪಿ ಅನುದಾನವಲ್ಲ, ಕಸ ಇಲ್ಲಿಗೆ ಬರುವುದು ನಿಲ್ಲಬೇಕು ಎಂದು ತಿಳಿಸಿದರು.

ಬಿಬಿಎಂಪಿ ಕಸ ಇಲ್ಲಿಗೆ ಬರುತ್ತಿರುವುದರಿಂದ ಅಂತರ್ಜಲ ಕಲುಷಿತವಾಗಿ ದೊಡ್ಡಬೆಳವಂಗಲ ಹಾಗೂ ಸಾಸಲು ಭಾಗದ ಹತ್ತಾರು ಗ್ರಾಮಗಳ ಜನರು ನಾನಾ ರೀತಿಯ ಚರ್ಮ ರೋಗ ಸೇರಿದಂತೆ ಹಲವಾರು ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅಂತರ್ಜಲ ಬಳಕೆಯಿಂದ ಬೆಳೆಗಳು ಸಹ ಹಾಳಾಗುತ್ತಿವೆ. ಇದರ ವಿರುದ್ಧ ಈಗಾಗಲೇ ಹಲವಾರು ಜನ ರೈತರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ದಾಖಲಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಹ ಎಂಎಸ್ ಜಿಪಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ವರದಿ ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದಲು ಕಸ ವಿಲೇವಾರಿ ಘಟಕ ಮುಚ್ಚುವಂತೆ ನಿರ್ಣಯ ಅಂಗೀಕರಿಸಿದ್ದಾರೆ ಎಂದರು.

ಸ್ಥಳೀಯ ಗ್ರಾಮ ಪಂಚಾಯಿತ ಹಾಗೂ ತಾಲ್ಲೂಕು ಆಡಳಿತದ ಗಮನಕ್ಕು ತರದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ್ಕೆ ರಸ್ತೆ ನಿರ್ಮಿಸಿರುವ ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಮಗೆ ಬಿಬಿಎಂಪಿ ಕಸವು ಬೇಡ, ಬಿಬಿಎಂಪಿ ಅನುದಾನವು ಬೇಡ ಎಂದರು.

ರಾಜ್ಯದಲ್ಲಿ ಸುಮಾರು 8 ಬಿಬಿಎಂಪಿ ಕಸ ವಿಲೇವಾರಿ ಘಟಕಗಳು ಇವೆ. ಅದರಲ್ಲಿ ನಮ್ಮ ದೊಡ್ಡಬಳ್ಳಾಪುರದಲ್ಲಿರೋದು ಖಾಸಗಿ ಒಡೆತನದಲ್ಲಿ ಇದೆ. ಇನ್ನುಳಿದ 7 ಕಸವಿಲೇವಾರಿ ಘಟಕಗಳು ಸರ್ಕಾರ ನೋಡಿಕೊಳ್ಳುತ್ತಿದೆ. ಖಾಸಗಿಯವರ ಉದ್ಧಾರ ಆಗೋದಕ್ಕೆ ನಾವು ಕಸ ಹಾಕಿಸಿಕೊಳ್ಳಬೇಕಾ…? ಕೂಡಲೇ ಈ ಘಟಕಕ್ಕೆ ಬರುವ ಕಸ ನಿಲ್ಲಬೇಕು ಎಂದು ಒತ್ತಾಯಿಸಿದರು.

ಸರ್ಕಾರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕೆನ್ನುವ ಚಿಂತೆ ಇಲ್ಲ. ಈ ಬಾರಿಯೇ ತಾಲೂಕಿನ ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನೀರು ಒದಗಿಸಬೇಕು ಇದು ನಮ್ಮ ಆಗ್ರಹ ಎಂದರು.

ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ತಿ.ರಂಗರಾಜು, ವತ್ಸಲಾ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದ್ದರು.

One thought on “ನಮಗೆ ಬಿಬಿಎಂಪಿ ಕಸವು ಬೇಡ, ಅನುದಾನವೂ ಬೇಡ- ತಾಲೂಕಿನ ಜನರ ಆರೋಗ್ಯ, ಪರಿಸರ ರಕ್ಷಣೆ ಮುಖ್ಯ- ಶಾಸಕ ಧೀರಜ್ ಮುನಿರಾಜ್

  1. ಸಿ.ನರಸಿಂಹಮೂರ್ತಿ, ರಾಜ್ಯ ಉಪಾಧ್ಯಕ್ಷರು, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ says:

    ಭ್ರಷ್ಟ ರಾಜಕಾರಿಣಿಗಳ ಪಾಲು ಹಾಗು ಕಸ ತಂದು ಸುರಿಯುವ ಲಾರಿಗಳಲ್ಲಿ ಪಾಲುದಾರಿಕೆ ಇದ್ದಲ್ಲಿ ನಿಲ್ಲಿಸುವ ತಾಕತ್ ಯಾರಿಗಿದೆ ಅಲ್ಲವೇ ??? ನಿಲ್ಲಿಸದಿದ್ದಲ್ಲಿ ಕೈಗೆ ಬಳೆ ತೊಡುವುದಕ್ಕೆ ಸಿದ್ದವೇ???ಭ್ರಷ್ಟರ ಲೋಕದಲ್ಲಿ ಅಮಾಯಕ ಜನರು

Leave a Reply

Your email address will not be published. Required fields are marked *