ನಗರಸಭಾ ಸದಸ್ಯ‌ ಎಂ.ಮುನಿರಾಜು(ಚಿಕ್ಕಪ್ಪಿ) ಗಡಿಪಾರು ಪ್ರಕರಣ: ಮುತ್ತೂರಿಗೆ ಆಸ್ಪತ್ರೆ, ಓವರ್ ಹೆಡ್ ಟ್ಯಾಂಕ್ ಬೇಕೆಂದು ಒತ್ತಾಯಿಸಿದ್ದಕ್ಕೆ ಗಡಿಪಾರು: ನಗರಸಭಾ ಸದಸ್ಯ‌ ಎಂ.ಮುನಿರಾಜು(ಚಿಕ್ಕಪ್ಪಿ) ಆರೋಪ

ನಗರದ ಮುತ್ತೂರಲ್ಲಿ (6ನೇ ವಾರ್ಡ್) ಆಸ್ಪತ್ರೆ ಹಾಗೂ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿಕೊಡುವಂತೆ ಒತ್ತಾಯಿಸಿದ್ದನ್ನೇ ನೆಪವಾಗಿಸಿಕೊಂಡು ರಾಜಕೀಯ ಪಕ್ಷಗಳು ನನ್ನನ್ನು ಗಡಿಪಾರು ಮಾಡಿಸಿವೆ. ರಾಜಕಾರಣಿಗಳ ಈ ಷಡ್ಯಂತ್ರ್ಯಕ್ಕೆ ಮತದಾರರು ಸರಿಯಾದ ಕಲಿಸಲಿದ್ದಾರೆ ಎಂದು ನಗರಸಭಾ ಸದಸ್ಯ‌ ಎಂ.ಮುನಿರಾಜು(ಚಿಕ್ಕಪ್ಪಿ) ಆರೋಪಿಸಿದ್ದಾರೆ.

ಗಡಿಪಾರು ಮಾಡಿರುವ ಕುರಿತು ‘ಪಬ್ಲಿಕ್.ಮಿರ್ಚಿ ನ್ಯೂಸ್’ ಜೊತೆ ಮಾತನಾಡಿದ ಅವರು, ನಗರಸಭಾ ಸದಸ್ಯನಾದ ಬಳಿಕ ಮುತ್ತೂರು ಗ್ರಾಮದ ಜನರ ಆಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದೇನೆ. ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇನೆ. 5000 ಜನಸಂಖ್ಯೆ ಒಳಗೊಂಡಿರುವ ವಾರ್ಡಿನಲ್ಲಿ ಆಸ್ಪತ್ರೆ ವ್ಯವಸ್ಥೆ ಹಾಗೂ ಓವರ್ ಹೆಡ್ ಟ್ಯಾಂಕ್ ಇಲ್ಲದಿರುವ ಕೊರಗಿತ್ತು. ಈ ಕುರಿತು ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ‌ ಮಾಡಿದ್ದೆ. ಆದರೆ, ಯಾರೂ ಕೂಡ ಸ್ಪಂದಿಸಿರಲಿಲ್ಲ. ಇದರಿಂದ ಬೇಸರಗೊಂಡು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು, ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು‌ ಸಿದ್ಧತೆ ನಡೆಸಿದ್ದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮತ ಕಳೆದುಕೊಳ್ಳುವ ಆತಂಕದಿಂದ ಷಡ್ಯಂತ್ರ ರೂಪಿಸಿ ರಾಜಕೀಯ ವ್ಯಕ್ತಿಗಳು ಗಡಿಪಾರು ಮಾಡಿಸಿದ್ದಾರೆ ಎಂದು ಗಂಭೀರ ಆರೋಪ‌ ಮಾಡಿದರು.

ನಗರಸಭೆಯಲ್ಲಿ‌ ಕಾಂಗ್ರೆಸ್ಸಿಗೆ ನೀಡಿದ ಬೆಂಬಲ ಹಿಂಪಡೆದ ಬಳಿಕ ವಿವಿಧ ಮುಖಂಡರು ತಮ್ಮ ತಮ್ಮ ಪಕ್ಷಕ್ಕೆ ಸೇರುವಂತೆ ಒತ್ತಡ ಹೇರಿದ್ದರು. ಆದರೆ, ವಾರ್ಡ್ ಮತದಾರರ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದೆ. ನಾಮಪತ್ರ ಸಲ್ಲಿಸುವ ಕೊನೆ ದಿನ ರಂಗಪ್ಪ ಸರ್ಕಲ್ ಕಚೇರಿಯಿಂದ ಬೃಹತ್‌ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಬೇಕೆಂದು ತೀರ್ಮಾನಿಸಿದ್ದೆ. ಅಷ್ಟರಲ್ಲಿ ನನ್ನನ್ನು ಗಡಿಪಾರು ಮಾಡಿಸಿದ್ದಾರೆ ಎಂದು ಕಿಡಿಕಾರಿದರು.

ತಹಶೀಲ್ದಾರ್ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೂ ರಾಜಕೀಯ ವ್ಯಕ್ತಿಗಳು ಚುನಾವಣೆಗೆ ನಿಲ್ಲದಂತೆ ಮಾಡಲು ಅಧಿಕಾರಿಗಳ‌ ಮೇಲೆ ಒತ್ತಡ ಹೇರಿ ಆದೇಶ ಜಾರಿ‌ ಮಾಡಿಸಿದ್ದಾರೆ. ವಾರ್ಡಿನ ಅಭಿವೃದ್ಧಿಗೆ ಶ್ರಮಿಸದ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಈ ಹಿಂದೆ ಕೂಡ ರಾಜಕೀಯ ಷಡ್ಯಂತ್ರದಿಂದ ನನ್ನ ಮೇಲೆ ರೌಡಿಶೀಟರ್ ಹಾಕಲಾಗಿತ್ತು. ಆ ನಂತರ ದಾನಿಗಳ ನೆರವಿನಿಂದ ರಾಜ್ಯ ಪ್ರಾಣಿ ಪಕ್ಷಿ ದಾಸೋಹ ಟ್ರಸ್ಟ್ ಮಾಡಿಕೊಂಡು, ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುತ್ತಾ‌ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ಶ್ರೀರಾಮ ನವಮಿ ಹಬ್ಬದ ದಿನ ನನ್ನ ವಾರ್ಡ್ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿರುವ ಕುರಿತು‌ ಮಹಿಳೆಯರು ನೀಡಿದ‌ ಮಾಹಿತಿಯನ್ನು ನಾನೇ ಪೊಲೀಸರಿಗೆ ಕರೆ‌ ಮಾಡಿ ತಿಳಿಸಿದ್ದೆ. ಆದರೆ, ಅವರು ಬರಲಿಲ್ಲ. ಆಗ ನಾನೇ ಖುದ್ದು ಜೂಜಾಟದ ಸ್ಥಳಕ್ಕೆ ತೆರಳಿ ತೆರವು ಮಾಡುವಂತೆ ಎಲ್ಲರಿಗೂ ಹೇಳುತ್ತಿದ್ದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರು ಠಾಣೆಗೆ ಕರೆಸಿ, ಪ್ರಕರಣ ದಾಖಲಿಸಿದರು ಎಂದು ದೂರಿದರು.

ಸದ್ಯ ಗಡಿಪಾರು ಆದೇಶದ ವಿರುದ್ಧ ನ್ಯಾಯಾಲಯದ‌ ಮೊರೆ ಹೋಗಿದ್ದೇನೆ.‌ ನ್ಯಾಯ‌ ಸಿಗುವ ವಿಶ್ವಾಸವಿದೆ.‌ ನನ್ನನ್ನು ಗಡಿಪಾರು ಮಾಡಿಸಿದ್ದು ಷಡ್ಯಂತ್ರ್ಯವಲ್ಲದೇ ಬೇರೇನೂ ಅಲ್ಲ. ಇದು ಖಂಡನೀಯ‌ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *