ದೊಡ್ಡಬಳ್ಳಾಪುರ: ನಗರದ ನ್ಯಾಯಾಲಯದ ಆವರಣದಲ್ಲಿ ಕಸದರಾಶಿ, ತ್ಯಾಜ್ಯ ಗಿಡಗಳಿಂದ ಕೂಡಿದ್ದು, ದೊಡ್ಡಬಳ್ಳಾಪುರ ನಗರಸಭೆ ಸ್ವಚ್ಛತೆ ಮಾಡದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ, ನ್ಯಾಯಾಧೀಶರಿಗೆ ವಕೀಲರ ಸಂಘದಿಂದ ದೂರು ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವಕೀಲರು, ನ್ಯಾಯಾಲಯದ ಆವರಣದ ಸ್ವಚ್ಛತೆ ನಗರಸಭೆಯ ಕರ್ತವ್ಯವಾಗಿದೆ. ಆದರೆ ನ್ಯಾಯಾಲಯದ ಒಳಂಗಣ ವಕೀಲ ಸಂಘ ಆವರಣದಲ್ಲಿ ಸ್ವಚ್ಚತೆ ಇಲ್ಲವಾಗಿದ್ದು, ತ್ಯಾಜ್ಯದಿಂದ ತುಂಬಿದೆ.
ಈ ಮುಂಚೆ ಕೂಡ ನ್ಯಾಯಾಲಯದ ಮುಂಭಾಗದ ಒಳಚರಂಡಿ ಅವ್ಯವಸ್ಥೆ ಕುರಿತು ನಗರಸಭೆ ಬೇಜವಬ್ದಾರಿ ತೋರಿದ ಕಾರಣ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಆ ಬಳಿಕ ನಗರಸಭೆ ಎಚ್ಚರಗೊಂಡು ಕೆಲಸ ಮಾಡಿತ್ತು ಎನ್ನಲಾಗಿದೆ.
ಆದರೆ ನಗರಸಭೆ ಪದೇ ಪದೇ ತನ್ನ ಕೆಲಸ ಮರೆಯುತ್ತಿದ್ದು, ನ್ಯಾಯಾಲಯದ ಆವರಣವನ್ನೇ ಸ್ವಚ್ಛಗೊಳಿಸದ ನಗರಸಭೆ.. ದೊಡ್ಡಬಳ್ಳಾಪುರ ನಗರವನ್ನು ಹೇಗೆ ಸ್ವಚ್ಛ ಗೊಳಿಸುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಇಂದು ನ್ಯಾಯಾಲಯದ ಆವರಣ ಸ್ವಚ್ಛಗೊಳಿಸದ ನಗರಸಭೆ ಕುರಿತಂತೆ ವಕೀಲರ ಸಂಘ ಪದಾಧಿಕಾರಿಗಳು ನ್ಯಾಯಾಧೀಶರಿಗೆ ತಿಳಿಸಿದೆ. ನ್ಯಾಯಾಲಯ ನಗರಸಭೆಯ ಮೇಲೆ ಕ್ರಮ ಜರುಗಿಸುವ ಮುನ್ನ ಎಚ್ಚೆತ್ತು, ನ್ಯಾಯಾಲಯದ ಆವರಣ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ರವಿಮಾವಿನಕುಂಟೆ, ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಖಜಾಂಚಿ ಎಂ.ಮುನಿರಾಜು, ಜಂಟಿ ಕಾರ್ಯದರ್ಶಿ ವಿಜಯ್ ಕುಮಾರ್, ಸಯ್ಯದ್ ನಾಸಿಮ್, ವಕೀಲರಾದ ಮುಲ್ತಾಸ್, ಪ್ರವೀಣ್ ಕುಮಾರ್ ಗುಪ್ತ, ಚಂದೇಶ್ ಗೌಡ, ಪ್ರಭಾಕರ್, ಲೀಲಾವತಿ, ಅನಿತಾ, ಅನುಪಮಾ ಹೆಚ್, ಉಮೇಶ್, ಮೋಹನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.