ನಕಾಶೆ ರಸ್ತೆಯನ್ನು ತೆರವು ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟ ಕಂದಾಯ ಇಲಾಖಾಧಿಕಾರಿಗಳು

ದೊಡ್ಡಬಳ್ಳಾಪುರ ತಾಲೂಕಿನ ಮಾಚಗೊಂಡಹಳ್ಳಿಯಿಂದ ಹೆಗ್ಗಡೆಹಳ್ಳಿ ಸಂಪರ್ಕಿಸುತ್ತಿದ್ದ ನಕಾಶೆ ರಸ್ತೆಯನ್ನ ತೆರವುಗೊಳಿಸಿ ರೈತರಿಗೆ ಅನುವುಮಾಡಿಕೊಟ್ಟ ಕಂದಾಯ ಇಲಾಖಾಧಿಕಾರಿಗಳು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಶಿವಣ್ಣ, ಅನಾದಿಕಾಲದಿಂದಲೂ ಇದ್ದ ನಕಾಶೆ ರಸ್ತೆಯನ್ನು ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ರೈತರು ತಮ್ಮ  ಹೊಲಗಳಿಗೆ ಹೋಗಲು ರಸ್ತೆ ಇಲ್ಲದೆ ತಮ್ಮ ತೋಟ, ಹೊಲಗಳಲ್ಲಿ ಬೆಳೆದ ಬೆಳೆಯನ್ನು ಸಾಗಿಸಲು ಪರದಾಡುವಂತಾಗಿತ್ತು. ಕಳೆದ ಹಲವು ದಿನಗಳಿಂದ ನಕಾಶೆ ರಸ್ತೆಯನ್ನು ತೆರವುಗೊಳಿಸಲು ಊರಿನ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಸಂಘ, ಪ್ರಜಾ ವಿಮೋಚನಾ ಸಮಿತಿ ‌ನೇತೃತ್ವದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದ ಪರಿಣಾಮವಾಗಿ ಇಂದು ಒತ್ತುವರಿ ಮಾಡಿದ್ದ‌ ರಸ್ತೆಯನ್ನು ಎಲ್ಲರ ಒಮ್ಮತದಿಂದ ಅಧಿಕಾರಿಗಳು ತೆರವುಗೊಳಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ‌ಹನುಮೇಗೌಡ ಮಾತನಾಡಿ, ಎರಡು ಊರುಗಳನ್ನು ಸಂಪರ್ಕಿಸುತ್ತಿದ್ದ ನಕಾಶೆ ರಸ್ತೆಯನ್ನು ಒತ್ತುವರಿ ಮಾಡಿದ್ದರಿಂದ ರೈತರಿಗೆ ಅನಾನುಕೂಲವಾಗಿತ್ತು. ಇದನ್ನು ಮನಗಂಡು ಒತ್ತುವರಿ ಮಾಡಿಕೊಂಡಿದ್ದ ರಸ್ತೆಯನ್ನು ತೆರವುಗೊಳಿಸುವಂತೆ ಸಂಬಂದಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಇಂದು ಕಂದಾಯ ಇಲಾಖೆ ಅಧಿಕಾರಿಗಳು, ರೈತರ ಸಮ್ಮುಖದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು. ಇದರಿಂದ ರೈತರಿಗೆ ತುಂಬಾ ಅನುಕೂಲವಾದಂತಾಗಿದೆ ಎಂದರು.

ಈ ವೇಳೆ ರೈತ ಮುಂಖಡರಾದ ಮುನಿನಾರಾಯಣಪ್ಪ, ಉಮಾ, ಚಲುವರಾಜ್, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗುಳ್ಯ ಹನುಮಣ್ಣ, ತಾಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ತಾಲೂಕು ಗೌರವಾಧ್ಯಕ್ಷ ಮೈಲಾರಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *