ದೊಡ್ಡಬಳ್ಳಾಪುರ ಬಿಜೆಪಿ ಟಿಕೆಟ್ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಸಾರಥಿ ಸತ್ಯಪ್ರಕಾಶ್; ಸ್ಥಳೀಯ ಟಿಕೆಟ್ ಆಕಾಂಕ್ಷಿ ಮುಂದೆ ಮಂಕಾಗಿಯೇ ಬಿಟ್ಟರಾ ಹೊರಗಿನಿಂದ ಬಂದ ಟಿಕೆಟ್ ಆಕಾಂಕ್ಷಿಗಳು..?

ಇನ್ನೇನು ಕೆಲವೇ ದಿನಗಳಲ್ಲಿ 2023ರ ಸಾರ್ವತ್ರಿಕ ಚುನಾವಣೆ ನಡೆಯಲಿದೆ, ದಿನೇ‌ ದಿನೇ ಚುನಾವಣಾ ಕಾವು ರಂಗೇರುತ್ತಿದೆ, ಟಿಕೆಟ್ ಆಕಾಂಕ್ಷಿಗಳು ಸದ್ದಿಲ್ಲದೇ ಟಿಕೆಟ್ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಬಹಳ ಪ್ರತಿಷ್ಠಿತ ಕ್ಷೇತ್ರ. ಸಿದ್ದಲಿಂಗಯ್ಯ, ಜಿ.ರಾಮೇಗೌಡ, ಆರ್.ಎಲ್.ಜಾಲಪ್ಪ, ಆರ್.ಜಿ.ವೆಂಕಟಾಚಲಯ್ಯ ಅವರಂತಹ ಘಟಾನುಘಟಿಗಳು ಆಳಿರುವುದರಿಂದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾರೀ ಮಹತ್ವವಿದೆ. ಜೊತೆಗೆ ಬೆಂಗಳೂರಿಗೆ ಸಮೀಪವಿರುವುದರಿಂದ ಬಲಾಢ್ಯರ ಕಣ್ಣು ಕ್ಷೇತ್ರದ ಮೇಲೆ ಬಿದ್ದಿದ್ದು, ಇಲ್ಲಿಂದ ಸ್ಪರ್ಧಿಸಲೆಂದೇ ಹೊರಗಿನ ಸಾಕಷ್ಟು ಆಕಾಂಕ್ಷಿಗಳು ಬಂದು ಮಣ್ಣುಮುಕ್ಕಿರುವ ನಿದರ್ಶನಗಳಿವೆ.

ಪ್ರಸಕ್ತ ವಿಧಾನಸಭಾ ಚುನಾವಣೆಗೂ ಹೊರಗಿನ ಅಭ್ಯರ್ಥಿಗಳು ಕ್ಷೇತ್ರಕ್ಕೆ ದಾಂಗುಡಿ ಇಟ್ಟಿದ್ದು, ಟಿಕೆಟ್ ಪಡೆಯಲು ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ತಾರಕಕ್ಕೇರಿದೆ. ಸ್ಥಳೀಯ ಹಾಗೂ ಹೊರಗಿನವರು ಸೇರಿ ಐವರು ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಇಬ್ಬರು ಮಾತ್ರ ಸ್ಥಳೀಯರು.

ಕ್ಷೇತ್ರಕ್ಕೆ ಸಾರಥಿಯಾಗ್ತಾರಾ ಸತ್ಯಪ್ರಕಾಶ್, ಹಿನ್ನೆಲೆಯೇನು?

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿರುವರಲ್ಲಿ ಚಲನಚಿತ್ರ ನಿರ್ಮಾಪಕ ಸಾರಥಿ ಸತ್ಯಪ್ರಕಾಶ್ ಒಬ್ಬರು. ಇವರು ಮೂಲತಃ ತಾಲೂಕಿನ ಸಾಸಲು ಹೋಬಳಿಯ ಕಾಳೇನಹಳ್ಳಿ ರೈತ ಕುಟುಂಬದ ಮಗ. 1988 ರಿಂದಲೇ ತಾಲೂಕಿನ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಟೆರ್ರಾಫಾರಂ ಮುಚ್ಚಿಸುವಲ್ಲಿ ಸಾರಥಿ ಸತ್ಯಪ್ರಕಾಶ್ ಒಬ್ಬಂಟಿಯಾಗಿ ಹೋರಾಟ‌ ಮಾಡಿದ್ದರು. ನಂತರ ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ, ಪಕ್ಷ ಸಂಘಟನೆ ಮಾಡಿದ್ದರು.

ಜೆಡಿಎಸ್ ನಿಂದ ಎರಡು ಬಾರಿ ‘ಬಿ’ ಫಾರಂ ಕೊಟ್ಟು ವಾಪಸ್ ಪಡೆದಿದ್ದರಿಂದ ಬೇಸತ್ತು, ರಾಜಕೀಯ ಬಿಟ್ಟು ರಿಯಲ್ ಎಸ್ಟೇಟ್ ಹಾಗೂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಯಶಸ್ವಿಯಾಗಿದ್ದಾರೆ. 2018ರಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಜಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಸೇರ್ಪಡೆಗೊಂಡರು. 2019ರಲ್ಲಿ ನಡೆದ ಎಂಪಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಲನಚಿತ್ರ ನಿರ್ಮಾಣ, ರಾಜಕಾರಣದ ಜೊತೆ ಜೊತೆಯಲ್ಲೇ ಸಮಾಜ‌ ಸೇವೆಯಲ್ಲೂ ತೊಡಗಿಸಿಕೊಂಡು ತಾಲೂಕಿನ‌ ಮನೆ ಮಾತಾಗಿದ್ದಾರೆ.

ಪಕ್ಷದ ನಾಯಕರ ಜೊತೆ ಇರುವ ಹತ್ತಿರ ನಂಟಿನಷ್ಟೇ ಇನ್ನೂ ಹೆಚ್ಚಾಗಿ ಕ್ಷೇತ್ರದ ಜನತೆ ಜೊತೆ ನಂಟಿದೆ. ಕ್ಷೇತ್ರದ ಜನರ ನಾಡಿಮಿಡಿತ ಗೊತ್ತಿರುವ ರಾಜಕಾರಣಿ, ಕ್ಷೇತ್ರದಲ್ಲಿರುವ ಜೀವಂತ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಅನುಭವಸಿದ ವ್ಯಕ್ತಿ, ಆದ್ದರಿಂದ ಈ ಸಮಸ್ಯೆಗಳನ್ನು ಬಗೆಹರಿಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲೇಬೇಕು ಎಂದು ಪಣತೊಟ್ಟು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಸಾರಥಿ ಸತ್ಯಪ್ರಕಾಶ್.

ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ಘೋಷಣೆ ಆಗಬೇಕು ಅದರಲ್ಲೂ ಸ್ಥಳೀಯರಿಗೆ ಎಂಬ ಕೂಗು ಸ್ಥಳೀಯ ಮುಖಂಡರದ್ದು, ಈ ಎಲ್ಲಾ ಮಾನದಂಡಗಳು ಸಾರಥಿ ಸತ್ಯಪ್ರಕಾಶ್ ಅವರಿಗೆ ಸರಿಹೊಂದುತ್ತವೆ‌‌. ಇವರಿಗೆ ಕ್ಷೇತ್ರ ಪರಿಚಯ, ಕ್ಷೇತ್ರದ ಒಳ ಹೊರಗಿನ ಅರಿವಿದೆ, ಸಂಪನ್ಮೂಲ ಹೊಂದಿರುವ ವ್ಯಕ್ತಿ, ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಂಬ ಮುಖಂಡರಿಗೆ ವಿಶ್ವಾಸ, ಮುಖ್ಯವಾಗಿ ಒಕ್ಕಲಿಗ ಸಮುದಾಯದವರು. ಅದೇ ರೀತಿ ಬಿ.ಎಸ್.ಯಡಿಯೂರಪ್ಪ, ಅಬಕಾರಿ‌ ಸಚಿವ ಕೆ.ಗೋಪಾಲಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಚಿವರಾದ ಅಶ್ವತ್ಥ ನಾರಾಯಣ, ಶೋಭಾ ಕರಂದ್ಲಾಜೆ, ಸೇರಿದಂತೆ ರಾಷ್ಟ್ರ, ರಾಜ್ಯ‌ ಮಟ್ಟದ ನಾಯಕರ ಜೊತೆ ಒಡನಾಟ ಉತ್ತಮವಾಗಿದೆ. ಆದ್ದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಾರಥಿ ಸತ್ಯಪ್ರಕಾಶ್ ಅವರ ಹೆಸರು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ನಡೆಸಿದ ಸಮೀಕ್ಷೆಯಲ್ಲಿ ಪ್ರಬಲವಾಗಿ ಕೇಳಿಬಂದಿದೆ.

ತಾಲೂಕಿನಾದ್ಯಂತ ತಮ್ಮ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯಡಿ ಬೃಹತ್ ಆರೋಗ್ಯ ಮೇಳ, ನೂರಾರು ಜನರಿಗೆ ಶಸ್ತ್ರಚಿಕಿತ್ಸೆ, ನಾಲ್ಕೂ ಹೋಬಳಿಗಳಲ್ಲಿ‌‌ ಅಂಬುಲೆನ್ಸ್ ಸೇವೆ ಸಹ ಒದಗಿಸಿದ್ದಾರೆ. ಶಿವರಾತ್ರಿ ಜಾಗರಣೆ ಮಹೋತ್ಸವ ಆಚರಿಸಿದ್ದು, ಯಶಸ್ವಿ ಕಾರ್ಯಕ್ರಮವಾಗಿ ತಾಲೂಕಿನ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಸದ್ಯ ಬಿಜೆಪಿ ಪಕ್ಷ ನಡೆಸಿದ ಕೇಂದ್ರ ಗುಪ್ತಚರ ಹಾಗೂ ನಮೋ ಸಮೀಕ್ಷೆಯಲ್ಲಿ ಸತ್ಯಪ್ರಕಾಶ್ ಹೆಸರು ದಿಢೀರ್ ಮುನ್ನೆಲೆಗೆ ಬಂದಿರುವುದು ಕೂಡ ಸಾರಥಿ ಪರಿಗಣನೆ ನಿಚ್ಚಳವಾಗಬಹುದು‌ ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಒಕ್ಕಲಿಗ ಅಭ್ಯರ್ಥಿಯಾದ ಸಾರಥಿ ಸತ್ಯಪ್ರಕಾಶ್ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಶಿಫಾರಸು ಮಾಡಿದ್ದಾರೆ‌ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಕ್ಷೇತ್ರದಲ್ಲಿ ಜಾಲಪ್ಪ‌ ಪ್ರಭಾವ ಹೆಚ್ಚಾಗಿದ್ದ‌ ಸಂದರ್ಭದಲ್ಲಿ ಅವರ ವಿರುದ್ಧ‌ ದನಿ ಎತ್ತಿದ ಮೊದಲ ವ್ಯಕ್ತಿ‌ ಎಂಬ ಖ್ಯಾತಿ ಸಾರಥಿ ಸತ್ಯಪ್ರಕಾಶ್ ಅವರಿಗೆ ಸಲ್ಲುತ್ತದೆ.

ಸಾಸಲು ಹಾಗೂ ದೊಡ್ಡಬೆಳವಂಗಲ ಹೋಬಳಿ ಜನರ ಜೀವಕ್ಕೆ ಕಂಟಕವಾಗಿದ್ದ ಬೆಂಗಳೂರು ಕಸದ ಟೆರ್ರಾಫಾರಂ ಅನ್ನು ಹೋರಾಟ‌ ನಡೆಸಿ ಮುಚ್ಚಿಸಿದ ಹೆಗ್ಗಳಿಕೆ ಸಾರಥಿ ಸತ್ಯಪ್ರಕಾಶ್ ಅವರಿಗೆ ಸಲ್ಲುತ್ತದೆ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದೇ 2015 ರಲ್ಲಿ ಸಿದ್ದರಾಮಯ್ಯ‌ ಸಿಎಂ ಆಗಿದ್ದ ವೇಳೆ ಸತತ 22 ದಿನಗಳ ಹೋರಾಟ‌ ನಡೆಸಿದರು. ಸಾರಥಿ ಸತ್ಯಪ್ರಕಾಶ್ ಅವರ ಹೋರಾಟಕ್ಕೆ ಮಣಿದ ಸರ್ಕಾರ ಟೆರ್ರಾಫಾರಂ ಮುಚ್ಚಿತು.‌ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷರಾಗಿ ಎಂಎಸ್ಜಿಪಿ ಘಟಕದ ವಿರುದ್ಧ ಹೋರಾಟ‌ ಮುಂದುವರಿಸಿದ್ದಾರೆ.

ಸಾರಥಿ ಸತ್ಯಪ್ರಕಾಶ್ ಅವರ ಹೋರಾಟದಿಂದ ಎಚ್ಚೆತ್ತುಕೊಂಡ ಸರ್ಕಾರ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳನ್ನು ಸ್ಯಾಟಲೈಟ್ ಟೌನ್ ಗಳಾಗಿ ಅಭಿವೃದ್ಧಿಪಡಿಸುವ ತೀರ್ಮಾನ ಮಾಡಿದೆ.

ಬೆಂಗಳೂರಿನ ಕಸದ ಸಮಸ್ಯೆಯಿಂದ ದೊಡ್ಡಬಳ್ಳಾಪುರ ಜನರನ್ನು ಪಾರು ಮಾಡುವುದೇ ಸಾರಥಿ ಸತ್ಯಪ್ರಕಾಶ್ ಅವರ ಉದ್ದೇಶವಾಗಿದೆ.

ಸಾರಥಿ ಸತ್ಯಪ್ರಕಾಶ್ ಅವರ ಸ್ಪರ್ಧೆಗೆ ಮಠಾಧೀಶರ ಬೆಂಬಲವೂ ಇದೆ ಎನ್ನಲಾಗಿದೆ. ದಶಕಗಳಿಂದ ಆದಿಚುಂಚನಗಿರಿ ಮಹಾಸಂಸ್ಥಾ‌ನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಾಖಾ ಮಠದ ಶ್ರೀಗಳೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದು, ಇದು ಬಿಜೆಪಿ ಅಭ್ಯರ್ಥಿಯಾಗಿ ಪರಿಗಣಿಸಲು ಪರೋಕ್ಷವಾಗಿ ವರದಾನ ಆಗಬಹುದು ಎನ್ನಲಾಗಿದೆ.

ಶ್ರೀಮಠಕ್ಕೆ‌ ಪ್ರತಿ ಬಾರಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ಭೇಟಿ‌ ನೀಡುವುದುಂಟು. ಇತ್ತೀಚೆಗೆ ಶ್ರೀಗಳೇ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಕ್ಕಲಿಗೆ‌ ಸಮುದಾಯ ಆಕಾಂಕ್ಷಿಗೆ ಟಿಕೆಟ್‌ ನೀಡುವಂತೆ ಬಿಜೆಪಿ‌ ನಾಯಕರಿಗೆ ಸೂಚಿಸಿರುವುದು ಸಾರಥಿ ಸತ್ಯಪ್ರಕಾಶ್ ಅವರಿಗೆ ವರವಾಗಿ‌ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಶ್ರೀಗಳ ಬೇಡಿಕೆಯನ್ನೂ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದೆ‌ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, ಬಿಜೆಪಿಯಲ್ಲಿ ಸ್ಥಳೀಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಾರಥಿ ಸತ್ಯಪ್ರಕಾಶ್ ಅವರೇ ಪ್ರಬಲರಾಗಿದ್ದು, ಸಮುದಾಯ, ಸ್ಥಳೀಯತೆ ಮಾನದಂಡ ಗಣನೆಗೆ ತೆಗೆದುಕೊಂಡರೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

18 hours ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

23 hours ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

2 days ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

2 days ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

2 days ago

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆರೋಗ್ಯ ಕಾಳಜಿ; ಹೀಲಿನ್ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…

2 days ago