ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣ!

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹಳ ಜಿದ್ದಾಜಿದ್ದಿನಿಂದ ನಡೆದ ತ್ರಿಕೋನ ಸ್ಪರ್ಧೆಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಮೈಲುಗಲ್ಲು ಸ್ಥಾಪನೆಯಾಗಲಿದೆ. ಇದಕ್ಕೆ ಪೂರಕ ಎಂಬಂತೆ ತಾಲ್ಲೂಕಿನಲ್ಲಿ ಈ ಬಾರಿ ರಣಕಣದಲ್ಲಿ ಅತ್ಯಂತ ಅಧಿಕ ಶೇಕಡಾವಾರು ಮತದಾನ ದಾಖಲಾಗಿರುವುದು. ಮೂರು ಪಕ್ಷಗಳ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಟಿ.ವೆಂಕಟರಮಣಯ್ಯ, ಬಿಜೆಪಿಯ ಧೀರಜ್ ಮುನಿರಾಜ್, ಜೆಡಿಎಸ್ ನ ಬಿ.ಮುನೇಗೌಡರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

ಬಿಜೆಪಿಗೆ ವಿಜಯಮಾಲೆ ಒಲಿದರೆ ಹೊಸ ನಾಯಕನ ಸೃಷ್ಟಿ

ರಾಜ್ಯ ಬಿಜೆಪಿಯಲ್ಲಿ ಓರ್ವ ಅಭ್ಯರ್ಥಿ ಅಧಿಕಾರದ ಗದ್ದುಗೆ ಏರಿದ ಪ್ರಪ್ರಥಮ ಕ್ಷೇತ್ರವೇ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ. ಬಿಜೆಪಿ ಕಟ್ಟಾಳು ಹಿರಿಯ ಮುಖಂಡ ಕೆ.ಎಂ ಹನುಮಂತರಾಯಪ್ಪ ಮೊದಲ ಬಾರಿಗೆ (1983-85) ಪುರಸಭೆ ಚುನಾವಣೆಯಲ್ಲಿ ಗೆದ್ದು ಪುರಸಭೆ ಅಧ್ಯಕ್ಷರಾಗುವ ಮೂಲಕ ಬಿಜೆಪಿ ಬಾವುಟವನ್ನು ಹಾರಿಸಿದ್ದರು. ಬಳಿಕ ಬಿಜೆಪಿಯೂ ತಾಲ್ಲೂಕಿನಲ್ಲಿ ತನ್ನದೇ ಕಾರ್ಯಕರ್ತರ ಪಡೆಯನ್ನು ಸೃಷ್ಟಿ ಮಾಡಿತ್ತಾದರೂ ದೀರ್ಘಾವಧಿಯ ಆಡಳಿತ ನಡೆಸಲು ವಿಫಲವಾಯಿತು.

ಒಮ್ಮೆ ಗಂಟಿಗಾನಹಳ್ಳಿ ಕೃಷ್ಣಪ್ಪ ಮತ್ತು ಉಪ ಚುನಾವಣೆಯಲ್ಲಿ ಜೆ.ನರಸಿಂಹಸ್ವಾಮಿ ಬಿಜೆಪಿಯಿಂದ ಆರಿಸಿ ಬಂದರೂ ಪಕ್ಷ ಸಂಘಟನೆಯಲ್ಲಿ ವಿಫಲವಾದರು.
ಕಾಲಕಳೆದಂತೆ ಕ್ಷೇತ್ರದಲ್ಲಿ ಸುಮಾರು 30 ಸಾವಿರಾಕ್ಕೂ ಸಾಂಪ್ರದಾಯಿಕ ಮತಗಳಿದ್ದರೂ ವಿಧಾನಸಭೆ ಚುನಾವಣೆಗಳಲ್ಲಿ ಸೋಲನ್ನುಭವಿಸುವಂತಾಗಿತ್ತು. ಆದರೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಠಕ್ಕರ್ ಕೊಡುವಲ್ಲಿ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಯಶಸ್ವಿಯಾಗಿದ್ದಾರೆ. ಹಲವು ಸಾಮಾಜಿಕ,  ಧಾರ್ಮಿಕ, ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪಕ್ಷ ಸಂಘಟಿಸಿ ಚುನಾವಣೆ ಎದುರಿಸಿರುವ ಧೀರಜ್ ಮುನಿರಾಜು ವಿಜಯಮಾಲೆಯ ನಿರೀಕ್ಷೆಯಲ್ಲಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದರೆ ಬಿಜೆಪಿಗೆ ಹೊಸ ನಾಯಕನ ಆಗಮನವಾಗಲಿದೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಟಿ.ವೆಂಕಟರಮಣಯ್ಯ?

ಎರಡು ಬಾರಿ ಗೆದ್ದು ಬೀಗಿರುವ ‘ಕೈ’ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಮೂರನೇ ಬಾರಿಗೆ ಕಾಂಗ್ರೆಸ್ ನ ಹುರಿಯಾಳಾಗಿ ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ಒಂದು ವೇಳೆ ಟಿ.ವೆಂಕಟರಮಣಯ್ಯನವರು ಹ್ಯಾಟ್ರಿಕ್ ಗೆಲುವಿನ ನಗಾರಿ ಬಾರಿಸಿದರೆ ಕ್ಷೇತ್ರದ ಜನತೆಗೆ ಟಿ.ಸಿದ್ದಲಿಂಗಯ್ಯ, ಜಿ.ರಾಮೇಗೌಡ, ಮತ್ತು ಆರ್.ಎಲ್ ಜಾಲಪ್ಪ ಬಳಿಕ
ಸಚಿವ ಸ್ಥಾನ ಲಭಿಸುವ ವಿಶ್ವಾಸದಲ್ಲಿದ್ದಾರೆ.

ಮತ ಪ್ರಚಾರದಲ್ಲಿಯೂ ಕಾಂಗ್ರೆಸ್ ಮುಖಂಡರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಸಚಿವರಿಗೆ ನೀಡಿದಂತೆ ಎಂದು ಮತಯಾಚನೆ ಮಾಡಿದ್ದರು. ಈ ಮೂಲಕ ಹ್ಯಾಟ್ರಿಕ್ ಗೆಲುವು ಮತ್ತು ಮಂತ್ರಿಗಿರಿ ಪಟ್ಟ ಸಿಕ್ಕಿಯಾದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಜೆಡಿಎಸ್ ಗೆದ್ದರೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಪಟ್ಟ

ಸತತವಾಗಿ ಮೂರು ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡುತ್ತಾ ಜೆಡಿಎಸ್ ಪಕ್ಷ ಸಂಘಟನೆ ಮಾಡಿರುವ ಬಿ.ಮುನೇಗೌಡ ಅವರು ನಾಲ್ಕನೇ ಬಾರಿಗೆ ರಣಕಣದಲ್ಲಿ ಸೆಣಸಾಡಿದ್ದಾರೆ. ಕ್ಷೇತ್ರದಲ್ಲಿ ಸೋತರೂ
ಕಳೆದ 14 ವರ್ಷಗಳ ನಿರಂತರ ಸೇವೆ ಮಾಡಿ ನೀರು ಮುನೇಗೌಡರೆಂದೇ ಜನಮನ್ನಣೆ ಗಳಿಸಿರುವ ಮುನೇಗೌಡರಿಗೆ ಅಧಿಕಾರದ ಚುಕ್ಕಾಣಿ ಮಾತ್ರ ದೂರದ ಮಾತಾಗಿದೆ.

ಅಂತೆಯೇ ಪಕ್ಷದ ಕಾರ್ಯಕರ್ತರೂ ಅಧಿಕಾರವಿಲ್ಲದೆ ಪರಿತಪಿಸುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಹಿರಿಯ, ಕಿರಿಯ ಮುಖಂಡರು ಒಗ್ಗಟ್ಟಿನಿಂದ ಯಾವುದೇ ಗೊಂದಲವಿಲ್ಲದೆ ಚುನಾವಣೆ ನಡೆಸಿದ್ದಾರೆ. ಅಭ್ಯರ್ಥಿ ಮುನೇಗೌಡರ ಪತ್ನಿ ಪದ್ಮಾವತಿ ಅವರ ಕಣ್ಣೀರು, ಸೊರಗೊಡ್ಡಿ ಮತಯಾಚನೆ ಮಾಡಿರುವುದು ಅನುಕಂಪದ ಅಲೆ ಮತಗಳಾಗಿ ಪರಿವರ್ತನೆಯಾದರೆ ಜೆಡಿಎಸ್ ಇದೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆಗೆ ಏರಲಿದೆ.

ಕ್ಷೇತ್ರದಲ್ಲಿ ಮೊದಲ ಬಾರಿ ಸ್ಪರ್ಧಿಸಿರುವ ಎಎಪಿ ಪ್ರತಿ ಮನೆ‌ ಮನೆಗೂ ತಲುಪಿದ್ದು, ಮತ ಗಳಿಕೆ ಪ್ರಮಾಣವು ಹೆಚ್ಚಾಗುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *