ದೊಡ್ಡಬಳ್ಳಾಪುರದಲ್ಲಿ ಹೆಚ್ಚಾದ ಕಳ್ಳರ ಕೈಚಳಕ: ಮನೆ, ಅಂಗಡಿಗಳಿಗೆ ನುಗ್ಗಿ ಕನ್ನ: ಕಳೆದ ರಾತ್ರಿ ಮನೆ ಬಾಗಿಲು ಮುರಿದು ದೇವರ ಮನೆಯಲ್ಲಿದ್ದ ನಗದು ದೋಚಿ ಖದೀಮರು ಎಸ್ಕೇಪ್

ಮನೆಗಳಿಗೆ ಕನ್ನ ಹಾಕಲು ಹೊಂಚಾಕಿ‌ ಕುಳಿತ್ತಿದ್ದ ಕಳ್ಳರು, ಕಳೆದ ರಾತ್ರಿ ಸುಮಾರು 9:15ರ‌ ಸಮಯದಲ್ಲಿ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಮನೆ ಬಳಿ ಹೋಗಿ, ಬಾಗಿಲು ಮುರಿದು ದೇವರ ಮನೆಯಲ್ಲಿದ್ದ ಸುಮಾರು 80 ಸಾವಿರ ನಗದು ದೋಚಿ ಎಸ್ಕೇಪ್ ಆಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ಪಾಲನಜೋಗಿಹಳ್ಳಿ ರಸ್ತೆಯ ಎಪಿಎಂಸಿ ವೆಸ್ಟ್ ಗೇಟ್ ಎದುರಿನ ಸುಭಾಷ್ ನಗರದಲ್ಲಿರುವ ಮನೆಯಲ್ಲಿ ನಡೆದಿದೆ….

ಅರುಣ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ…. ಅರುಣ್ ರವರು ವರಮಹಾಲಕ್ಷ್ಮಿ ಹಬ್ಬದಂದು ದೇವರ ಮನೆಯಲ್ಲಿ ವರಲಕ್ಷ್ಮಿ ಪೂಜೆ ಮಾಡಿ‌ ದೇವರ ಬಳಿ ಸುಮಾರು 80 ಸಾವಿರ ಇಟ್ಟಿದ್ದರು, ಹಬ್ಬ ಮುಗಿದು ಹಲವು ದಿನಗಳಾದರೂ ಈ ಹಣವನ್ನು ತೆಗೆದುಕೊಳ್ಳದೇ ದೇವರ ಮನೆಯಲ್ಲಿ ಹಾಗೇ ಬಿಟ್ಟಿದ್ದರು. ಇದೀಗ ಕಳ್ಳರ ಪಾಲಾಗಿದೆ….

ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದೆ…

ನನ್ನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ನಂತರ ಆಸ್ಪತ್ರೆಯಿಂದ ಮತ್ತೆ ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು ಊಟ ಮಾಡಿಕೊಂಡು ಬರಲು ಹೆಂಡತಿ ಮನೆಗೆ ಹೋಗಿದ್ದೆ. ಊಟ ಮಾಡಿಕೊಂಡು ರಾತ್ರಿ ಸುಮಾರು 9:30ರಲ್ಲಿ ಮನೆಗೆ ವಾಪಸ್ ಬಂದು ನೋಡುವಷ್ಟರಲ್ಲಿ ಮನೆ ಬಾಗಿಲು ಮುರಿದಿತ್ತು, ಕಿಟಿಕಿ ಗಾಜಿಗೆ ಕಲ್ಲು ಬಿದ್ದು, ಕಿಟಕಿ ಗಾಜುಗಳು ಕೆಳಗೆ ಬಿದ್ದಿತ್ತು, ದೇವರ ಮನೆಯಲ್ಲಿದ್ದ 80 ಸಾವಿರ ನಗದು ದೋಚಿದ ಕಳ್ಳರು ಎಸ್ಕೇಪ್ ಆಗಿದ್ದಾರೆ ಎಂದು ಅರುಣ್ ಹೇಳಿದ್ದಾರೆ.

ಇತ್ತೀಚೆಗೆ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಂಗಡಿ ಕಳ್ಳರ ಕಾಟ ಹೆಚ್ಚಾಗಿದೆ. ಕಳೆದ ಶುಕ್ರವಾರ ರಾತ್ರಿಯಷ್ಟೇ ನಗರದ ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಫರ್ನೀಚರ್ಸ್ ಹಾಗೂ ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ಯತ್ನ ನಡೆದಿತ್ತು. ಬುಧವಾರದಂದು ತೂಬಗೆರೆ ಗ್ರಾಮದ ಎರಡು ದಿನಸಿ ಅಂಗಡಿಗಳಲ್ಲಿ ಕಳ್ಳರ ಕೈಚಳಕ ಕಂಡುಬಂದಿತ್ತು. ಅದೇ ದಿನ ಹಾಡೋನಹಳ್ಳಿಯಲ್ಲಿ ಎರಡು ಮೇಕೆ ಹೋತಗಳನ್ನು ಕದ್ದಿದ್ದರು. ಇದೀಗ ಮನಗೆ ಕನ್ನ ಹಾಕಿದ್ದಾರೆ….

ಕಳ್ಳರ ಕಾಟದಿಂದ ದೊಡ್ಡಬಳ್ಳಾಪುರ ಜನತೆ ಕಂಗಾಲಾಗಿದ್ದಾರೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು. ಕೂಡಲೇ ಕಳ್ಳರ ಜಾಡು ಹಿಡಿದು ಬಂಧಿಸಿ, ಇನ್ನುಮುಂದೆ ಯಾವುದೇ ಕಳ್ಳತನದ ಕೃತ್ಯಗಳು ಮರುಕಳಿಸದಂತೆ ಎಚ್ವರವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ…

Leave a Reply

Your email address will not be published. Required fields are marked *

error: Content is protected !!