ದೊಡ್ಡಬಳ್ಳಾಪುರ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಜನರು ಹೆಚ್ಚಾಗಿ ಸೇರುವ ಬಸ್ ನಿಲ್ದಾಣ, ಮಾರುಕಟ್ಟೆ, ಪಾರ್ಕ್, ದೇವಸ್ಥಾನ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಸರಗಳ್ಳರಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದಾರೆ.
ಸರಗಳ್ಳರು ಹೆಚ್ಚಾಗಿ ಒಬ್ಬೊಂಟಿಯಾಗಿ ಓಡಾಡುವ, ಇರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೈಚಳಕ ತೋರಿಸುತ್ತಾರೆ. ಸರಗಳ್ಳರು ಹೆಚ್ಚಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆಯೇ ಸಕ್ರಿಯವಾಗುವ ಕಾರಣ ಮಹಿಳೆಯರು ಹಾಗೂ ವೃದ್ಧರು ಹೊರಗೆ ಓಡಾಡುವಾಗ ಆಭರಣ ಪ್ರದರ್ಶನವನ್ನು ಮಾಡಬಾರದು. ಹಾಗೆ ಮಾಡುವುದರಿಂದ ಸರಗಳ್ಳರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಪೊಲೀಸ್ ಸಹಾಯವಾಣಿ 100ಕ್ಕೆ ಹಾಗೂ 112 ಕರೆ ಮಾಡಬೇಕು.
ಒಂಟಿಯಾಗಿ ಓಡಾಡದೆ ಇಬ್ಬರಿಗಿಂತ ಹೆಚ್ಚಿನ ಜನರ ಗುಂಪಿನಲ್ಲಿ ಓಡಾಡಬೇಕು. ವಾಯು ವಿಹಾರ ಮಾಡುವಾಗ ನೆರೆಹೊರೆಯವರ ಜತೆ ಹೋಗಬೇಕು ಎಂದು ಜಾಗೃತಿ ಮೂಡಿಸಿದರು.
ಸರಗಳ್ಳತನ ತಡೆಯುವ ಬಗ್ಗೆ ಸಲಹೆಗಳು :
1. ಒಂಟಿಯಾಗಿ ಜನರಿಲ್ಲದ ಪ್ರದೇಶಗಳಲ್ಲಿ ಹೆಂಗಸರು ಓಡಾಡುವುದನ್ನು ತಪ್ಪಿಸಿ.
2. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈಗೆಟಕುವ ಅಂತರದಲ್ಲಿ ನಿಲ್ಲಬೇಡಿ.
3. ಅನುಮಾನಾಸ್ಪದ ವಾಹನಗಳು ನಿಮ್ಮ ಬಳಿ ಬರುವಾಗ ವಾಹನದ ವಿಧ, ಬಣ್ಣ, ನೊಂದಣಿ ಸಂಖ್ಯೆ ವಾಹನ ಸವಾರರು ಧರಿಸಿರುವ ಬಟ್ಟೆ, ಚಹರೆ, ಮುಖದಲ್ಲಿ ಗುರುತಿಸಬಹುದಾದ ಯಾವುದಾದರೂ ವಿಶೇಷತೆಗಳು ಇತ್ಯಾದಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ
4. ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ,
5. ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆ ಮಾಡಿಕೊಳ್ಳಿ
6. ಸರ ಮತ್ತು ಧರಿಸುವ ಬಟ್ಟೆಗೆ ಹೊಂದಿಸಿ ಸೇಫ್ಟಿ ಪಿನ್ಗಳನ್ನು ಹಾಕಿ.
7. ಅನಾವಶ್ಯಕವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ, ಕಳ್ಳರನ್ನು ಆಕರ್ಷಿಸಬೇಡಿ.
8. ಮನೆಯಿಂದ ಹೊರಗೆ ಹೋಗುವಾಗ, ಅಂಗಡಿಗೆ ಹೋಗುವಾಗ, ಅಂಗಡಿಯಿಂದ ಸಾಮಾನು ಖರೀದಿಸಿ ಹೊರಡುವಾಗ ಜಾಗ್ರತೆ ಅಗತ್ಯ.
9. ಬೆಳಗಿನ ಸಮುಯದಲ್ಲಿ ದೇವಸ್ಥಾನಕ್ಕೆ, ಅಂಗಡಿಗೆ ಒಂಟಿಯಾಗಿ ಹೋಗುವುದನ್ನು ತಪ್ಪಿಸಿ.
10. ಎದುರಿನಿಂದ ಬರುವ ವಾಹನಗಳ ದೀಪದ ಬೆಳಕು ಕಣ್ಣಿಗೆ ಬಿದ್ದಾಗ ನೀವು ಧರಿಸಿದ ಚಿನ್ನದ ಸರವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ
11. ಕತ್ತಲೆ ಪ್ರದೇಶದಲ್ಲಿ ಪವರ್ ಕಟ್ ಆದ ಸಮಯದಲ್ಲಿ ನಡೆದಾಡುವಾಗ ನಿಮ್ಮ ಆಭರಣಗಳ ಕಡೆ ಹೆಚ್ಚಿನ ಗಮನ ವಹಿಸಿ ಹಾಗೂ ನಿಮ್ಮ ಜೊತೆಗಾರರಿಗೂ ಸರಗಳ್ಳತನಗಳ ಬಗ್ಗೆ ಮನವರಿಕೆ ಮಾಡಿಕೊಡಿ.
12. ಅಪರಾಧ ತಡೆ ಮತ್ತು ಪತ್ತೆ ಪೊಲಿಸರಿಗಷ್ಟೇ ಜವಾಬ್ದಾರಿ ಎಂದು ಭಾವಿಸಬೇಡಿ. ನಿಮ್ಮ ಸಹಕಾರ ಕೂಡ ಅತ್ಯಗತ್ಯ ಎಂದು ಜಾಗೃತಿ ಮೂಡಿಸಲಾಯಿತು.