
ದೊಡ್ಡಬಳ್ಳಾಪುರದಲ್ಲಿ ಈ ಮೊದಲೇ ಅನುಮೋದನೆಗೊಂಡ ಜಿಲ್ಲಾಸ್ಪತ್ರೆಗೆ ಗುದ್ದಲಿಪೂಜೆ ಮಾಡಿ 2 ವರ್ಷವಾಗಿದೆ. ಈ ಬಾರಿಯಾದರೂ ಅನುದಾನ ನೀಡಿ ಜಿಲ್ಲಾಸ್ಪತ್ರೆ ಪ್ರಾರಂಭಿಸಲು ಕ್ರಮ ಕೈಗೊಳ್ಳಿ ಎಂದು ಸದನದಲ್ಲಿ ಮನವಿ ಮಾಡಿದ್ದಕ್ಕೆ ಸಚಿವರು ಸ್ಪಂದಿಸಿದ್ದು, ಶೀಘ್ರದಲ್ಲೇ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದ್ದಾರೆ…
ಸದನದಲ್ಲಿ ಚರ್ಚೆಯಾದ ವಿಷಯ

ಶಾಸಕ ಧೀರಜ್ ಮುನಿರಾಜ್: ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಸತತವಾಗಿ 2023ರಿಂದ ಸರ್ಕಾರದ ಬಳಿ ಕೇಳುತ್ತಲೇ ಬಂದಿದ್ದೇವೆ. ಸದ್ಯಕ್ಕೆ ಪೂರ್ಣ ಅನುದಾನ ಅಲ್ಲದಿದ್ದರೂ ಶೇ. 50ರಷ್ಟಾದರೂ ಅನುದಾನ ಕೊಟ್ಟು ಜಿಲ್ಲಾಸ್ಪತ್ರೆ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು..

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್: ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ಮಾಡಲು ಶಾಸಕ ಧೀರಜ್ ಮುನಿರಾಜ್ ಅವರು ಸಾಕಷ್ಟು ಕೇಳುತ್ತಲೇ ಬಂದಿದ್ದಾರೆ… ಹಿಂದಿನ ಸರ್ಕಾರ ಇದ್ದಾಗ ಕೊನೆ ಘಟ್ಟದಲ್ಲಿ ಅನುಮೋದನೆ ನೀಡಿತ್ತು. ನಂತರ ನಮ್ಮ ಸರ್ಕಾರ ಬಂದಾಗ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕಾ ಅಥವಾ ಬೇಡವಾ ಅಂತಾ ತಡೆಹಿಡಿಯಲಾಗಿತ್ತು. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಜಿಲ್ಲಾಸ್ಪತ್ರೆ ಜಿಲ್ಲೆಗೆ ಸಂಬಂಧಪಟ್ಟಿದ್ದು, ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ಆಗಬೇಕು ಎಂದು ಹೇಳಿದ್ದಾರೆ.. ಈಗಾಗಲೇ 20ಕೋಟಿ ವೆಚ್ಚದಲ್ಲಿ 50 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿ ಕಾಮಗಾರಿ ಶುರುವಾಗಿದೆ… ಇನ್ನೂ ಅದಕ್ಕೆ ಪ್ರಥಮ ಹಂತದಲ್ಲಿ 100 ಹಾಸಿಗೆ ವ್ಯವಸ್ಥೆಗೆ ಅನುಮೋದನೆ ನೀಡಲಾಗುತ್ತದೆ. ಜಿಲ್ಲಾಸ್ಪತ್ರೆಗೆ 250 ಹಾಸಿಗೆ ವ್ಯವಸ್ಥೆ ಇರಬೇಕಾಗುತ್ತದೆ. ಬೇಡಿಕೆ ಅನುಸಾರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು…