ದೇಶವನ್ನು ಸ್ವಾವಲಂಬಿಯಾಗಿಸಲು ಆತ್ಮನಿರ್ಭರ ಭಾರತ ಅಭಿಯಾನ ಆರಂಭ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ- ಎಚ್.ರಾಮಕೃಷ್ಣಪ್ಪ

ಆತ್ಮನಿರ್ಭರ ಭಾರತ ಅಭಿಯಾನವು ಪ್ರಧಾನಿ ನರೇಂದ್ರ ಮೋದಿಯವರು ಮೇ 2020ರಲ್ಲಿ ಪ್ರಾರಂಭಿಸಿದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶವನ್ನು ಸ್ವಾವಲಂಬಿಯಾಗಿಸುವುದು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಒಂದು ಪ್ರಮುಖ ಕೇಂದ್ರವಾಗಿ ಪರಿವರ್ತಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಚ್.ರಾಮಕೃಷ್ಣಪ್ಪ ಹೇಳಿದರು.

ಈ ಕುರಿತು‌ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಅಭಿಯಾನವು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆಗಳು, ಪ್ರಬಲ ಜನಸಂಖ್ಯಾಶಾಸ್ತ್ರ ಮತ್ತು ಬೇಡಿಕೆ ಎಂಬ ಐದು ಸ್ತಂಭಗಳ ಮೇಲೆ ಆಧಾರಿತವಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಎದುರಾದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಭಾರತದ ಜಿಡಿಪಿಯ ಶೇ.10ರಷ್ಟಕ್ಕೆ ಸಮಾನವಾದ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಲಾಯಿತು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಸಣ್ಣ ಉದ್ಯಮಿಗಳಿಗೆ ಒತ್ತು ಕೊಟ್ಟು, ಈ ದೇಶದ ಉತ್ಪಾದಕರು, ವಸ್ತುಗಳಿಗೆ ಬೆಂಬಲ ನೀಡಿದರೆ ಸಣ್ಣ‌ಸಣ್ಣ ಉದ್ದಿಮೆದಾರರು ಆರ್ಥಿಕವಾಗಿ ಸದೃಢರಾಗುತ್ತಾರೆ. ಇದು ನರೇಂದ್ರ ಮೋದಿಯವರ ಸಂಕಲ್ಪ. ನಾವೇ ಉತ್ಪಾದಕರಾಗಿ, ನಾವೇ ಬಳಕೆದಾರರಾಗಬೇಕು ಎಂದರು.

ಕಾಂಗ್ರೆಸ್ ಮಾಡೋದಕ್ಕೆ ಆಗದೇ ಇರುವುದನ್ನು, ಬಿಜೆಪಿ ಕೈಯಲ್ಲಿ ಆಗಲ್ಲ ಎಂದು ಮೂದಲಿಸಿದ ಕೆಲಸಗಳನ್ನು ಬಿಜೆಪಿ ಮಾಡಿ ತೋರಿಸುತ್ತಿದೆ ಎಂದು ಹೇಳಿದರು.

ಭಾರತೀಯ ಉದ್ಯಮಗಳು ಮತ್ತು ಸಾರ್ವಜನಿಕ ವಲಯಗಳು ತಮ್ಮದೇ ಆದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಮಾಡುವುದು. “ವೋಕಲ್ ಫಾರ್ ಲೋಕಲ್” (ಸ್ಥಳೀಯಕ್ಕಾಗಿ ಧ್ವನಿ) ಮತ್ತು “ಮೇಕ್ ಫಾರ್ ವರ್ಲ್ಡ್” (ಪ್ರಪಂಚಕ್ಕಾಗಿ ಮಾಡಿ) ಎಂಬ ಸಿದ್ಧಾಂತಗಳ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಪ್ರಚಾರ ಮಾಡುವುದು. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವುದು: ದೇಶೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಗತಿಕ ಮಾರುಕಟ್ಟೆಗೆ ಒದಗಿಸುವ ಮೂಲಕ ಭಾರತವನ್ನು ಒಂದು ಪ್ರಮುಖ ಕೇಂದ್ರವಾಗಿ ರೂಪಿಸುವುದು. ದೇಶದ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿ, ನಿರ್ದಿಷ್ಟ ವಸ್ತುಗಳ ಆಮದನ್ನು ಕಡಿಮೆಗೊಳಿಸುವುದು ಇದರ ಮೂಲ ಉದ್ದೇಶ ಎಂದರು.

ನಂತರ ಆತ್ಮನಿರ್ಭರ ಸಂಕಲ್ಪ ಅಭಿಯಾನ ಜಿಲ್ಲಾ ಸಂಚಾಲಕ ಓಬ್ದೇನಹಳ್ಳಿ ಮುನಿಯಪ್ಪ ಮಾತನಾಡಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು. ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳನ್ನು ಸುಧಾರಿಸುವುದು. ಪಾರದರ್ಶಕ ಮತ್ತು ಸುಲಭವಾದ ವ್ಯವಸ್ಥೆಗಳನ್ನು ನಿರ್ಮಿಸುವುದು. ದೇಶದ ಬೃಹತ್ ಜನಸಂಖ್ಯೆಯನ್ನು ಸದುಪಯೋಗಪಡಿಸಿಕೊಂಡು, ಮಾನವ ಸಂಪನ್ಮೂಲ ಅಭಿವೃದ್ಧಿ ಮಾಡುವುದು. ದೇಶೀಯ ಬೇಡಿಕೆಯನ್ನು ಹೆಚ್ಚಿಸುವುದು ಮತ್ತು ಆ ಮೂಲಕ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ನಗರ ಬ್ಲಾಕ್ ಅಧ್ಯಕ್ಷ ಮುದ್ದಪ್ಪ, ಜಿಲ್ಲಾ ಬಿಜೆಪಿ ಕಚೇರಿ ಕಾರ್ಯಾಲಯ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!