ದೇಶದ ಒಳಿತಿಗೆ ಕನ್ನಡಿಗರ ಪರವಾಗಿ ಪ್ರಾರ್ಥಿಸಿ ಎಂದು ಹಜ್ ಯಾತ್ರಿಕರಲ್ಲಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ

ದೇಶದ ಒಳಿತಿಗೆ ಕನ್ನಡಿಗರ ಪರವಾಗಿ ಪ್ರಾರ್ಥಿಸಿ ಎಂದು ಹಜ್ ಯಾತ್ರಿಕರಲ್ಲಿ ಮನವಿ ಮಾಡುತ್ತೇನೆ. ಎಲ್ಲ ಧರ್ಮದವರೂ ಒಂದೇ ತಾಯಿಯ ಮಕ್ಕಳಂತೆ ಬದುಕುವುದೇ ಸಮಾಜಕ್ಕೆ ನೀಡುವ ಉತ್ತಮ ಕೊಡುಗೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ವರ್ಷ ಸುಮಾರು 8,635 ಜನ ಯಾತ್ರಿಕರು ಹಜ್ ಯಾತ್ರೆಗೆ ಹೊರಟಿದ್ದು, ಮುಂದಿನ ತಿಂಗಳ 15ರವರೆಗೆ ಸುಮಾರು 27 ವಿಮಾನಗಳಲ್ಲಿ ಪ್ರಯಾಣ ಕೈಗೊಳ್ಳಲಿದ್ದಾರೆ. ಪ್ರತಿಯೊಬ್ಬ ಮುಸಲ್ಮಾನ ತಮ್ಮ ಜೀವತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕೆಂಬುದು ಅವರ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ಹಜ್ ಯಾತ್ರಿಕರೆಲ್ಲರಿಗೂ ಅವರ ಪ್ರಯಾಣ ಸುಖಕರವಾಗಿಲಿ ಎಂದು ಹಾರೈಸುತ್ತೇನೆ. ಪವಿತ್ರ ಮೆಕ್ಕಾದಲ್ಲಿ ದೇಶದ ಒಳಿತಿಗೆ, ಭಾರತೀಯರ ಅದರಲ್ಲಿಯೂ ಕನ್ನಡಿಗರ ಪರವಾಗಿ ಪ್ರಾರ್ಥನೆ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.

ನಮ್ಮ ಸರ್ಕಾರ ಎಂದಿಗೂ ಒಂದು ವರ್ಗ, ಧರ್ಮದ ಜನರನ್ನು ಓಲೈಸಲು ಯಾವುದೇ ಕಾರ್ಯಕ್ರಮ ಕೈಗೊಳ್ಳುವುದಿಲ್ಲ. ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂಬುದು ನಮ್ಮ ಆಶಯ. ದೇಶದಲ್ಲಿ ವಿವಿಧ ಜಾತಿ ಧರ್ಮಗಳಿಗೆ ಸೇರಿದವರಾದರೂ, ನಾವೆಲ್ಲರೂ ಮೊದಲು ಮಾನವರಾಗಬೇಕು. ಯಾವ ಧರ್ಮವೂ ಮನುಷ್ಯತ್ವದ ಹೊರತಾದ ಮೃಗೀಯ ತತ್ವವನ್ನು ಬೋಧಿಸುವುದಿಲ್ಲ. ಮಾನವತಾ ಸಮಾಜವನ್ನು ನಿರ್ಮಿಸಬೇಕು. ದ್ವೇಷ, ಆಸೂಯೆಗಳಿಂದ ಯಾವ ಸಾಧನೆಯೂ ಸಾಧ್ಯವಿಲ್ಲ. ಸಮಸಮಾಜ, ಸೌಹಾರ್ದಯುತ ಸಮಾಜ ನಿರ್ಮಾಣವಾಗಬೇಕಾದರೆ ಪರಸ್ಪರ ಗೌರವಾದರಗಳು ಇರಬೇಕು ಎಂದು ತಿಳಿಸಿದರು.

ನಮ್ಮ ಸಂವಿಧಾನ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸ್ಪಷ್ಟವಾಗಿ ತಿಳಿಸಿದ್ದು, ಬೇರೆ ಧರ್ಮವನ್ನು ಸಹಿಸಿಕೊಳ್ಳುವ ಗುಣವನ್ನು ತಿಳಿಸುತ್ತದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವೆಂಬ ಮೂರು ಅಂಶಗಳನ್ನು ಸಂವಿಧಾನ ಬೋಧಿಸಿದ್ದು, ಅದರಂತೆ ಬಾಳಬೇಕಿದೆ. ಯಾರನ್ನೂ ದ್ವೇಷದಿಂದ, ವೈರತ್ವದಿಂದ ಗೆಲ್ಲಲು ಸಾಧ್ಯವಿಲ್ಲವೆಂಬುದನ್ನು ಎಲ್ಲ ಧರ್ಮದವರೂ ಮೂಲಭೂತವಾಗಿ ಅರ್ಥೈಸಿಕೊಳ್ಳಬೇಕು. ನಮ್ಮ ಸರ್ಕಾರ ಕೇವಲ ಒಂದು ಧರ್ಮವನ್ನು ಓಲೈಸಲು ಅಥವಾ ಒಂದು ಧರ್ಮದ ಅಭಿವೃದ್ಧಿಗೆ ಕೆಲಸ ಮಾಡುವುದಿಲ್ಲ. ಸಮಾಜದ ಎಲ್ಲಾ ಧರ್ಮದ ಬಡವರೂ ಸಮಾನತೆಯ ಬದುಕನ್ನು ತಮ್ಮದಾಗಿಸಿಕೊಳ್ಳಬೇಕೆಂಬುದು ನಮ್ಮ ಆಶಯ ಎಂದರು.

ಸಮಾನ ಅವಕಾಶಗಳನ್ನು ಪಡೆದು ಬದುಕಬೇಕು. ಸ್ವಾತಂತ್ರ್ಯ ಬಂದ ನಂತರ ದೇಶ ವಿಭಜನೆಯಾದಾಗ ಭಾರತದಲ್ಲಿ ಉಳಿದುಕೊಂಡ ಮುಸಲ್ಮಾನರು ಭಾರತೀಯರು. ಭಾರತೀಯರಾಗಿ ಇರಬೇಕೆ ಹೊರತು ಬೇರೊಂದು ಕೆಲಸ ಮಾಡುವ ಯೋಚನೆಯನ್ನು ಮಾಡಬಾರದು. ಮುಸಲ್ಮಾನರು ಮತ್ತು ಹಿಂದೂಗಳು ಪರಸ್ಪರರನ್ನು ನಮ್ಮ ಅಣ್ಣ ತಮ್ಮಂದಿರು ಎಂಬ ಭಾವನೆ ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ. ಕ್ರೈಸ್ತರೂ ನಮ್ಮವರೇ ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಸೌಹಾರ್ದತೆಯಿಂದ, ಸಮಾನತೆಯಿಂದ ಬಾಳಲು ಸಾಧ್ಯವಾಗುತ್ತದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ದೇವರು ಸಮಾನತೆಯನ್ನು ಬಯಸುತ್ತಾರೆಯೇ ಹೊರತು ದ್ವೇಷದ ಸಮಾಜವನ್ನು ಬಯಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ರಾಜ್ಯದ ಬಜೆಟ್ 4 ಲಕ್ಷದ 9 ಸಾವಿರ ಕೋಟಿಯಿದ್ದರೆ, ಅದರಲ್ಲಿ ಮುಸಲ್ಮಾನರಿಗೆ ನೀಡಿರುವುದು ₹4,500 ಕೋಟಿಗಳು. ಅದು ದೊಡ್ಡದಲ್ಲ. ಅವರವರ ಪಾಲನ್ನು ಅವರಿಗೆ ಕೊಡಬೇಕು. ಈ ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಜಾತಿ ಹೋಗಲು ಸಾಧ್ಯವಾಗುತ್ತದೆ. ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣವಾಗುತ್ತದೆ ಎಂದರು.

ರಾಜಕೀಯವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಮಾನತೆಯಿರಬೇಕು. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಒತ್ತಿ ಹೇಳಿದ್ದರು. ಅದರಲ್ಲಿ ನಮಗೆ ನಂಬಿಕೆ ಇದೆ. ನಮ್ಮ ಸಂವಿಧಾನ ಹೇಳಿರುವುದೇ ಅದು. ಸಂವಿಧಾನದ ಧ್ಯೇಯೋದ್ದೇಶಗಳನ್ನು, ಆಶಯಗಳನ್ನು ಜಾರಿ ಮಾಡುತ್ತೇವೆಯೇ ಹೊರತು ಯಾರನ್ನೂ ಓಲೈಸುವ ಕೆಲಸ ಮಾಡೋಲ್ಲ. ನಮಗೆ ಎಲ್ಲರೂ ಒಂದೇ. ನ್ಯಾಯಯುತವಾಗಿ ಸಿಗಬೇಕಾದ. ಹಕ್ಕುಗಳನ್ನು ದೊರಕಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಯಾರೂ ಏನೇ ಹೇಳಿದರೂ ಅದಕ್ಕೆ ನಾವು ಸೊಪ್ಪು ಹಾಕುವವರಲ್ಲ. ನಮಗೆ ಸಂವಿಧಾನ ಮುಖ್ಯ. ಅದರ ಆಶಯಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಮೇ 16 ರಂದು ಶಂಕುಸ್ಥಾಪನೆ ಮಾಡಲಾಗುವುದು.
ಜಮೀರ್ ಅಹ್ಮದ್ ಖಾನ್ ಅವರು ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಹಜ್ ಭವನಕ್ಕೆ ಬರುವ ಪ್ರವಾಸಿಗರು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಈ ಬಾರಿ 10 ಕೋಟಿ ಅನುದಾನ ನೀಡಲಾಗಿದೆ ಎಂದರು.

ಮುಸಲ್ಮಾನರಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗಬೇಕು. ಸಾಚಾರ್ ಸಮಿತಿ ವರದಿಯಲ್ಲಿ ಶಿಕ್ಷಣದ ಪ್ರಮಾಣ ಬಹಳ ಕಡಿಮೆ ಇದೆ ಎಂದು ತಿಳಿಸಲಾಗಿದೆ. ಶಿಕ್ಷಣ ಇಲ್ಲದಿದ್ದರೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಹೇಳಿದರು.

ನಾವು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರಿಗೂ ರಕ್ಷಣೆ ಕೊಡುವುದು ನಮ ಕರ್ತವ್ಯ. ಕರ್ನಾಟಕದಲ್ಲಿ ಯಾರೂ ಆತಂಕ ಪಡಬೇಕಾಗಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲರೂ ಒಂದು ತಾಯಿಯ ಮಕ್ಕಳಂತೆ ಬದುಕೋಣ ಎಂದು ಹಜ್ ಗೆ ತೆರಳುವವರು ಪ್ರಾರ್ಥನೆ ಮಾಡಿ, ಅಂತಹಾ ವಾತಾವರಣ ನಿರ್ಮಿಸೋಣ ಎಂದರು.

Ramesh Babu

Journalist

Recent Posts

ಅಕ್ರಮ ಪಡಿತರ ಅಕ್ಕಿ, ರಾಗಿ ವಶಕ್ಕೆ, ಪ್ರಕರಣ ದಾಖಲು

ಆಹಾರ ಸಚಿವ ಹಾಗೂ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪನವರ ಜಿಲ್ಲೆಯಲ್ಲಿ ಬಡವರಿಗೆ ನೀಡಬೇಕಿದ್ದ ಪಡಿತರ ಅಕ್ಕಿ, ರಾಗಿಯನ್ನು ಕಾಳ ಸಂತೆಯಲ್ಲಿ…

1 hour ago

ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು…

ದೃಷ್ಟಿಕೋನ........ ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು, ಕನಸು ಕಾಣುತ್ತಲೇ ಇರುವ ಬಡ, ಮಧ್ಯಮ ವರ್ಗದವರು, ಅಧಿಕ ಪ್ರಸಂಗಿಗಳಂತೆ…

3 hours ago

ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಯ ಖಾಸಗಿ ಅಂಗ ತುಳಿದು ದೌರ್ಜನ್ಯ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು: ವ್ಯಕ್ತಿ ಬಂಧನ

ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಯ ಖಾಸಗಿ ಅಂಗವನ್ನು ತುಳಿದು ದೌರ್ಜನ್ಯ ನಡೆಸಿ ಮಹಿಳೆಯ ಸಾವಿಗೆ ಕಾರಣನಾದ ಕಾಮುಕನನ್ನು ಪೊಲೀಸರು ಬಂಧಿಸಿರುವ…

14 hours ago

ಮೇ.5ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮೇ.5ರಂದು 66/11 ಕೆವಿ ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ DF17-ನಂದಿ ಮೋರಿ, DF18-ಬೀಡಿಕೆರೆ ಫೀಡರ್‌ಗಳಲ್ಲಿ ವಿದ್ಯುತ್…

20 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

1 day ago

ಕಾರ್ಮಿಕ ವರ್ಗದ ವೈದ್ಯಕೀಯ ಸೇವೆಗೆ ಇಎಸ್ಐಸಿ ಆಸ್ಪತ್ರೆ ವರದಾನ- ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ

ಶ್ರಮಿಕ ವರ್ಗದವರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಇಎಸ್ಐಸಿ ಆಸ್ಪತ್ರೆಯು ವರದಾನವಾಗಲಿದೆ. ಎಲ್ಲಾ ಕಾರ್ಮಿಕರು ವೈದ್ಯಕೀಯ…

2 days ago