ಪಿತ್ರಾರ್ಜಿತವಾಗಿ ಬಂದ ಎರಡು ಎಕರೆ ಸಾಗುವಳಿ ಭೂಮಿಗೆ ಬೆಂಗಳೂರಿನ ಬಲಾಢ್ಯ ವ್ಯಕ್ತಿಯೊಬ್ಬರು ಪೊಲೀಸ್ ರಕ್ಷಣೆಯಲ್ಲಿ ಕಾಂಪೌಂಡ್ ನಿರ್ಮಿಸಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ದಲಿತ ಕುಟುಂಬವೊಂದು ಜಮೀನಿನಲ್ಲೇ ಪ್ರತಿಭಟನೆ ನಡೆಸಿತು.
ತಾಲೂಕಿನ ಕಸಬಾ ಹೋಬಳಿಯ ಮಜರಾಹೊಸಹಳ್ಳಿ ಗ್ರಾಮದ ಸರ್ವೇ ನಂಬರ್ 58ರಲ್ಲಿ ನರಸಿಂಹಯ್ಯ ಎಂಬುವವರು 1970-71 ರಲ್ಲಿ ಬಹಿರಂಗ ಹರಾಜು ಮೂಲಕ ಸರ್ಕಾರಕ್ಕೆ ಕಿಮ್ಮತ್ತು ಕಟ್ಟಿ 2 ಎಕರೆ ಜಮೀನು ಕ್ರಯ ಮಾಡಿಕೊಂಡಿದ್ದರು. ತಾಲೂಕು ಆಡಳಿತ ಸಾಗುವಳಿ ಚೀಟಿ, ಕೈ ಬರಹದ ಪಹಣಿ, ಮ್ಯುಟೇಷನ್ ಕೂಡ ನೀಡಿತ್ತು. ಅಂದಿನಿಂದ ನರಸಿಂಹಯ್ಯನವರ ಮಕ್ಕಳು ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಬರುತ್ತಿದ್ದರು.
ಕಾಲಕಳೆದಂತೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ವಿಸ್ತರಣೆಯಾಗಿ ಮಜರಾ ಹೊಸಹಳ್ಳಿಯಲ್ಲೂ ಕೈಗಾರಿಕೆಗಳು ತಲೆ ಎತ್ತಿದವು. ನರಸಿಂಹಯ್ಯನವರ ಕುಟುಂಬ ತಮ್ಮ ಪಾಲಿನ ಜಮೀನಿನಲ್ಲಿ ರಾಗಿ, ಜೋಳ, ತೊಗರಿ ಬೆಳೆ ಬೆಳೆದು ಜೀವನ ಸಾಗಿಸುತ್ತಿತ್ತು. ಕಂಪ್ಯೂಟರ್ ಪಹಣಿ ಬಂದಾಗ ನರಸಿಂಹಯ್ಯ ಅವರ ಸರ್ವೇ ನಂಬರ್ ಅಪ್ ಡೇಟ್ ಆಗಿಲ್ಲ. ಈಗ ಕಂಪ್ಯೂಟರ್ ಪಹಣಿಯಲ್ಲಿ ನರಸಿಂಹಯ್ಯ ಅವರ ಜಮೀನನ್ನು ಗೋಮಾಳ ಎಂದು ತೋರಿಸಲಾಗಿದೆ.
ದಲಿತರ ಭೂಮಿ ಮೇಲೆ ಭೂಮಾಫಿಯಾ ಕಣ್ಣು
ಕಂಪ್ಯೂಟರ್ ಪಹಣಿಯಲ್ಲಿ ಸರ್ಕಾರಿ ಗೋಮಾಳ ಎಂದು ತೋರಿಸುತ್ತಿರುವುದನ್ನು ಗಮನಿಸಿದ ಕೆಲ ಭೂಮಾಫಿಯಾದವರು ಹಾಗೂ ಬೆಂಗಳೂರಿನ ಕುಶಾಲ್ ಕುಮಾರ್ ಜೈನ್ ಎಂಬುವರು ರಾತ್ರೋರಾತ್ರಿ ಜಮೀನಿನಲ್ಲಿ ನಿರ್ಮಿಸಿದ್ದ ಶೆಡ್ ತೆರವುಮಾಡಿ ಮಣ್ಣು ಹೊಡೆಸುತ್ತಿದ್ದಾರೆ. ಪ್ರಶ್ನಿಸಲು ಹೋದ ಭೂಮಾಲೀಕರಿಗೆ ಪೊಲೀಸರನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕುಶಾಲ್ ಕುಮಾರ್ ಜೈನ್ ಎಂಬುವರು ಕೈಗಾರಿಕಾ ಉದ್ದೇಶಕ್ಕಾಗಿ ನಮ್ಮ ಜಮೀನು ಸುತ್ತಲಿನ ಭೂಮಿ ಖರೀದಿಸಿ, ಕಾಂಪೌಂಡ್ ನಿರ್ಮಿಸುತ್ತಿದ್ದರು. ಅವರ ಜಾಗದಲ್ಲಿ ಅವರ ಕಾಂಪೌಂಡ್ ಹಾಕಿಕೊಳ್ಳುತ್ತಿದ್ದಾರೆ ಎಂದು ನಾವು ಸುಮ್ಮನಿದ್ದೆವು. ಆದರೆ, ಕಳೆದ ಮೂರು ದಿನಗಳ ಹಿಂದೆ ಏಕಾಏಕಿ ಪೊಲೀಸರನ್ನು ಕರೆಸಿ, ಜೆಸಿಬಿಗಳ ಮೂಲಕ ಸರ್ವೇ ನಂಬರ್ ಜಾಗವನ್ನು ಸಮತಟ್ಟು ಮಾಡಲು ಬಂದರು. ಇದು ನಮಗೆ ಸೇರಿದ ಜಾಗ ಎಂದು ದಾಖಲೆ ತೋರಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಜೆಸಿಬಿಗಳನ್ನು ತಡೆಯಲು ಮುಂದಾದಾಗ ಪೊಲೀಸರನ್ನು ಕರೆಸಿ ದೌರ್ಜನ್ಯದಿಂದ, ಬಲವಂತವಾಗಿ ಕಾಂಪೌಂಡ್ ನಿರ್ಮಿಸಲು ಯತ್ನಿಸಿದ್ದಾರೆ ಎಂದು ನರಸಿಂಹಯ್ಯ ಅವರ ಪುತ್ರ ಮಂಜುನಾಥ್ ದೂರಿದರು.
ನರಸಿಂಹಯ್ಯ ಅವರ ಪತ್ನಿ ಮುನಿಯಮ್ಮ ಮಾತನಾಡಿ, ನಾವು 50 ವರ್ಷದಿಂದ ಜಮೀನಿ ಸ್ವಾಧೀನದಲ್ಲಿದ್ದೇವೆ. ಪೊಲೀಸರು ಬಂದು ನಮಗೆ ಹೀನಾಮಾನ ಬೈದು ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಇಷ್ಟು ವರ್ಷ ದುಡಿದು ತಿಂದಿದ್ದು, ಸಾಕು. ಜಾಗ ಖಾಲಿ ಮಾಡಿ ಎಂದು ಬೆದರಿಕೆ ಹಾಕಿದರು. ಪೊಲೀಸರ ದೌರ್ಜನ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ನಮ್ಮ ಸೊಸೆಯನ್ನು ಎಳೆದು, ಮೊಬೈಲ್ ಕಸಿದರು. ವಯಸ್ಸಾದ ನನ್ನನ್ನೂ ನೂಕಿ ಗಾಯಗೊಳಿಸಿದರು ಎಂದು ದೂರಿದರು.
ಜಮೀನಿನಲ್ಲೇ ಧರಣಿ- ಆಕ್ರೋಶ
ಬೆಂಗಳೂರಿನ ಬಲಾಢ್ಯ ವ್ಯಕ್ತಿಗೆ ಸ್ಥಳೀಯರಾದ ಅಶೋಕ್ ಎಂಬುವರು ಕುಮ್ಮಕ್ಕು ನೀಡುತ್ತಿದ್ದು, ಎಷ್ಟೇ ವಿರೋಧಿಸಿದರೂ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ. ನಮ್ಮನ್ನು ಜೆಸಿಬಿಯಲ್ಲೇ ಹೂತು ಹಾಕಿದರೂ ಜಾಗ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಇಡೀ ಕುಟುಂಬ ಸ್ಥಳದಲ್ಲೇ ಧರಣಿ ನಡೆಸಿತು.