ದಲಿತರು 3ನೇ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು ಎಂಬುದು ಗದ್ದರ್ ಅವರ ಕನಸಾಗಿತ್ತು- ಮಾಜಿ ನಗರಸಭಾ ಸದಸ್ಯ ರಾಮಾಂಜಿನಪ್ಪ

ಈ ದೇಶದಲ್ಲಿ ದಲಿತರು ಮೂರನೇ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು ಎಂಬುದು ಗದ್ದರ್ ಅವರ ಕನಸಾಗಿತ್ತು, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಮಾಜಿ ನಗರಸಭಾ ಸದಸ್ಯ ರಾಮಾಂಜಿನಪ್ಪ.

ನಗರದ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ, ದಲಿತ ಮತ್ತು ಕನ್ನಡಪರ ಸಂಘಟನೆಗಳ ವತಿಯಿಂದ ನಡೆದ ಗದ್ದರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಆಳುವ ವರ್ಗ ಇಲ್ಲಸಲ್ಲದ ಸಮಸ್ಯೆಗಳನ್ನು ಹುಟ್ಟು ಹಾಕುವ ಮೂಲಕ ಜನಪರ ಹೋರಾಟಗಳನ್ನು ಮತ್ತು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಆರೋಪಿಸಿದರು.

ದಲಿತ ಸಂಘಟನೆಗಳು ಪ್ರಬಲವಾಗಿದ್ದ 70/80 ರ ದಶಕ, ಕ್ರಾಂತಿಕಾರಿ ಕವಿ ಗದ್ದರ್ ಅವರನ್ನು ದೊಡ್ಡಬಳ್ಳಾಪುರಕ್ಕೆ ಕರೆಸಬೇಕು ಎಂದು ಪ್ರಯತ್ನ ಮಾಡಿದ್ದೆವು, ಈ ಬಗ್ಗೆ ನಗರಿ ಬಾಬಯ್ಯ ಅವರ ಮೂಲಕ ಹೈದರಾಬಾದ್ ನಲ್ಲಿ ಗದ್ದರ್ ಮನೆಗೆ ಹೋಗಿದ್ವಿ ಅವರ ಮನೆ ಸರಳವಾಗಿದ್ದು, ಐದು ಛೇರ್ ಮಾತ್ರ ಇತ್ತು. ಗದ್ದರ್ ಅವರನ್ನು ದೊಡ್ಡಬಳ್ಳಾಪುರಕ್ಕೆ ಬರುವಂತೆ ಕರೆದೆವು ಆದರೆ, ಪೊಲೀಸರು ನಮಗೆ ಅನುಮತಿ ನೀಡಲಿಲ್ಲ, ಜೊತೆಗೆ ನಗರಿ ಬಾಬಯ್ಯ ಅವರನ್ನು ಬಂಧಿಸಿ 90 ದಿನ ಜೈಲಿನಲ್ಲಿ ಇಟ್ಟಿದ್ದರು. ಪೊಲೀಸರು ಅನುಮತಿ ನಿರಾಕರಿಸಿದ್ದಕ್ಕೆ ನಮ್ಮ ಪ್ರಯತ್ನ ನಿಲ್ಲಿಸಬೇಕಾಯಿತು ಎಂದು ನೆನಪು ಮಾಡಿಕೊಂಡರು.

ಪತ್ರಕರ್ತ ತೂಬಗೆರೆ ಷರೀಫ್ ಮಾತನಾಡಿ, ಗುಮ್ಮಡಿ ವಿಠಲ ರಾವ್ ಅವರು 1949 ರಲ್ಲಿ ಜನಿಸಿ, ಉಸ್ಮಾನಿಯಾ ವಿವಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು, ದೇಶದಲ್ಲಿ ನಡೆಯುವ ಅಸಮಾನತೆ, ದೌರ್ಜನ್ಯಗಳ ವಿರುದ್ಧ ಕಾಲೇಜು ದಿನಗಳಲ್ಲೇ ಕ್ರಾಂತಗೀತೆಗಳನ್ನ ಬರೆಯುತ್ತಿದ್ದರು, ಕಾಲಕ್ರಮೇಣ ತಾವು ಬರೆದ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಕಾಲಿಗೆ ಗೆಜ್ಜೆ ಕಟ್ಟಿ ಹಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದರು.

ದೊಡ್ಡಬಳ್ಳಾಪುರಕ್ಕೂ ಗದ್ದರ್ ಅವರಿಗೂ ಅವಿನಾಭಾವ ಸಂಬಂಧ ಇತ್ತು ಏಕೆಂದರೆ ಇಲ್ಲಿ ಡಾ.ವೆಂಕಟರೆಡ್ಡಿ ಸೇರಿದಂತೆ ಹಲವಾರು ದಲಿತ ಮತ್ತು ಪ್ರಗತಿಪರ ಚಿಂತಕರು ಇದ್ದರು ಎಂದರು.

ಇಂದು ದೇಶದಲ್ಲಿ ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗಿದ್ದು ಇದನ್ನು ಪ್ರಶ್ನೆ ಮಾಡುವ ಜನಪರ ಹೋರಾಟಗಾರರಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ಯುಎಪಿಎ ಕಾಯ್ದೆ ಮೂಲಕ ಕತ್ತಲ ಕೋಣೆಯಲ್ಲಿಡುತ್ತಾರೆ ಎಂದರು.

ಕನ್ನಡ ಪಕ್ಷದ ಮುಖಂಡ ಸಂಜೀವ ನಾಯಕ ಮಾತನಾಡಿ, ಆಂಧ್ರದಲ್ಲಿ ಜಾತಿವಾದಿ, ಬಂಡವಾಳಶಾಹಿ ಭೂ ಮಾಲಿಕರು ದಲಿತರು ಬಡವರನ್ನ ಜೀತಕ್ಕೆ ಇಟ್ಟುಕೊಂಡಿತ್ತು, ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದವು, ಗದ್ದರ್ ಅವರು ಚಳುವಳಿಯನ್ನು ಕಟ್ಟಿ

20/30 ವರ್ಷ ಅರಣ್ಯದಲ್ಲಿ ಇದ್ದು ಚಳುವಳಿಯ ಮೂಲಕ ಭೂ ಮಾಲಿಕರು ದಲಿತರನ್ನು ಕಂಡರೆ ಭಯಪಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ಅಂತಹ ಧೀಮಂತ ನಾಯಕ ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ವಿಚಾರ ಎಂದರು.

ಮಾನವ ಬಂಧ್ವುತ್ವ ವೇದಿಕೆಯ ವೆಂಕಟೇಶ್ ಅವರು ಮಾತನಾಡಿ, ದಲಿತ ಚಳುವಳಿಗೆ ಭದ್ರ ಬೂನಾದಿ ಹಾಕಿಕೊಟ್ಟ ವಿಪ್ಲವ ಪುರುಷ ಗದ್ದರ್ ಅವರು ಪುರೋಹಿತಶಾಹಿ ಭೂ ಮಾಲಿಕರ ಬಳಿ ಇದ್ದ
ಸಾವಿರಾರು ಎಕರೆ ಭೂಮಿ ದಲಿತ ಹಿಂದುಳಿದವರಿಗೆ ಕೊಡಿಸುವುದರಲ್ಲಿ ಯಶಸ್ವಿಯಾದವರು.
ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ವಿದ್ಯಾರ್ಥಿ ಜೀವನದಲ್ಲೇ ರ‌್ಯಾಡಿಕಲ್ ಸ್ಟೂಡೆಂಟ್ ವಿಂಗ್ ಸಂಘಟನೆಯ ಮೂಲಕ ಹೊರಗೆ ಬಂದವರು ಎಂದರು.

ದಲಿತ ಮುಖಂಡ ಮಾಲಿ ಜಯರಾಮ್ ಮಾತನಾಡಿ ಗದ್ದರ್ ದಲಿತರ ಪಾಲಿನ ಕೆಂಪು ಸೂರ್ಯ, ಅವರ ಗುರುಗಳಾದ ಚರಬಂಡರಾಜು ಅವರು ಗುಮ್ಮಡಿ ವಿಠಲ್ ರಾವ್ ಅವರಿಗೆ ಗದ್ದರ್ ಎಂಬ ಬಿರುದು ಕೊಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿ.ಗುರುರಾಜಪ್ಪ, ದಲಿತ ಮುಖಂಡರಾದ ಮುನಿಸುಬ್ಬಯ್ಯ, ಬಸವರಾಜು, ಕರೀಂ ಸೊಣ್ಣೇನಹಳ್ಳಿ ಮುನಿಯಪ್ಪ, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಚಂದ್ರು ಉಪ್ಪಾರ, ಮಂಜುನಾಥ, ಬಿ.ನಯಾಜ್ ಖಾನ್ ಕೊಡಿಗೇಹಳ್ಳಿ ಮಧು, ರಾಜುಸಣ್ಣಕ್ಕಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *