ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆ: ನೂತನ ಅಧ್ಯಕ್ಷರಾಗಿ ಶಶಿಕಲಾ ನಾಗರಾಜು, ಉಪಾಧ್ಯಕ್ಷರಾಗಿ ಶೋಭಾ ಭಾಯಿ ಪ್ರಕಾಶ್ ಆಯ್ಕೆ 

ದೊಡ್ಡಬಳ್ಳಾಪುರ : ತಾಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ನಿರಂತರ ಪೈಪೋಟಿ ನಡುವೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ 12 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಕಲಾ ನಾಗರಾಜು 12 ಮತಗಳನ್ನು ಪಡೆದರು. ಎರಡು ಪಕ್ಷದ ಅಭ್ಯರ್ಥಿಗಳು ಸಮ ಮತಗಳನ್ನು ಪಡೆದ ಕಾರಣ ಲಾಟರಿ ಮೂಲಕ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು.

ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ ನಾಗರಾಜು ರವರಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ಗ್ರಾಮಸ್ಥರು ಪುಷ್ಪ ಮಾಲೆ ನೀಡಿ, ಜೈಕಾರ ಕೂಗುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಶಶಿಕಲಾ ನಾಗರಾಜು ಮಾತನಾಡಿ, ಈ ಗೆಲುವಿಗಾಗಿ ಕಳೆದ 12 ವರ್ಷಗಳಿಂದ ಶ್ರಮಿಸಿದ್ದೇನೆ. ಇದು ನನ್ನ ಗೆಲುವಲ್ಲ ಸತ್ಯದ ಗೆಲುವಾಗಿದೆ. ನನ್ನ ಬೆಂಬಲವಾಗಿ ನಿರಂತರ ಶ್ರಮಿಸಿದ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಸದಸ್ಯರಾದ ನಾಗೇಶ್ ಗೌಡ, ಜೆ ವೈ ಮಲ್ಲಣ್ಣ, ಸುರೇಶ್, ನಾಗರಾಜು ರವರಿಗೆ ಈ ಗೆಲುವು ಸಲ್ಲುತ್ತದೆ. ನನ್ನ ಪಕ್ಷದ ಎಲ್ಲಾ ಸಹ ಸದಸ್ಯರ ಬೆಂಬಲದಿಂದ ಇಂದಿನ ಈ ಗೆಲುವು ನನಗೆ ಲಭಿಸಿದೆ ಎಂದರು.

ಸದಸ್ಯರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಹೆಚ್ಚಿನ ಅನುದಾನ ತರುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಎಲ್ಲಾ ಸದಸ್ಯರಿಗೂ  ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ವಿಜಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲ ಮುಖಂಡರಿಗೂ, ಹಿರಿಯರಿಗೂ, ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಗೌಡ ಮಾತನಾಡಿ,  ಕಾಂಗ್ರೆಸ್ ದುರಾಡಳಿತದ ವಿರುದ್ಧ ಇಂದು ನಮಗೆ ಜಯ ಸಿಕ್ಕಿದೆ, ಸದಸ್ಯರು ಸೂಕ್ತ ವ್ಯಕ್ತಿಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶಶಿಕಲಾ ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಶೋಭಾ ಭಾಯಿ ಪ್ರಕಾಶ್ ರವರು ಆಯ್ಕೆಯಾಗಿದ್ದಾರೆ. ಹಿರಿಯರ ಮಾರ್ಗದರ್ಶನ ಹಾಗೂ ಸ್ಥಳೀಯ ಶಾಸಕರಿಂದ ಹೆಚ್ಚಿನ ಅನುದಾನಗಳನ್ನು ತರುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ದರ್ಗಾಜೋಗಿಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ  ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಈ ಗೆಲುವನ್ನು ಸಂಭ್ರಮಿಸಲಾಗುವುದು ಎಂದರು.

ಪಂಚಾಯತಿ ಸದಸ್ಯ ಹಾಗೂ ವಕೀಲರಾದ ಸುರೇಶ್ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆ ಮನಗಂಡ ಸದಸ್ಯರು ಇಂದು ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಉತ್ತಮ ಅಭ್ಯರ್ಥಿಯನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಪಂಚಾಯಿತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಾಲೂಕಿಗೆ ಮಾದರಿ ಪಂಚಾಯಿತಿಯನ್ನಾಗಿ ರೂಪಿಸುವ ಉದ್ದೇಶ ಹೊಂದಿದ್ದೇವೆ, ಈ ನಿಟ್ಟಿನಲ್ಲಿ  ಸರ್ವ ಸದಸ್ಯರು ಅಧ್ಯಕ್ಷರ  ಬೆಂಬಲವಾಗಿ ಸ್ಪಂದಿಸಿ ಉತ್ತಮ ಕಾರ್ಯಗಳ ಸಾಧನೆಗೆ ಮುಂದಾಗುತ್ತೇವೆ ಎಂದರು.

ಗ್ರಾಮ ಪಂಚಾಯತಿ ಸದಸ್ಯ ಜೆ ವೈ ಮಲ್ಲಣ್ಣ ಮಾತನಾಡಿ, ಇಂದು ನಮ್ಮ ಪಂಚಾಯಿತಿಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವಾಗಿದ್ದು, ಸರಳ ಮತ್ತು ಸಜ್ಜನ ವ್ಯಕ್ತಿತ್ವದ ಸದಸ್ಯೆ ಶಶಿಕಲಾ ನಾಗರಾಜು ರವರು ನಮ್ಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶೋಭಾಬಾಯಿ ಪ್ರಕಾಶ್ ಆಯ್ಕೆಯಾಗಿದ್ದಾರೆ. ಅವರಿಗೆ ಶುಭವಾಗಲಿ ,ಉತ್ತಮ ಸೇವೆ ಸಲ್ಲಿಸಲು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಲ್ಲರೂ ಒಗ್ಗೂಡಿ  ಪಂಚಾಯತಿ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸದಸ್ಯರ ಪ್ರತಿ ಮತಗಳಿಗೂ ಗೌರವ ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ, ಪಂಚಾಯಿತಿ ಸದಸ್ಯರಾದ ಶೋಭಾ ಭಾಯಿ ಪ್ರಕಾಶ್, ಜಯಶ್ರೀ ನಂದೀಶ್, ಪ್ರಕಾಶ್, ಸುರೇಶ್, ಆನಂದಮ್ಮ ಮುನಿರಾಜು,ಮಮತಾ ಮಾರುತಿ, ಅಂಜಿನಮ್ಮ ರಂಗಪ್ಪ, ನಾಗೇಶ್, ಮಲ್ಲಣ್ಣ , ಜನಾರ್ಧನ್, ಹಾಗೂ ಸ್ಥಳೀಯ ಮುಖಂಡರಾದ ನಾಗರಾಜು,  ಮಂಜುನಾಥ್, ಚಂದ್ರು, ಪರಮೇಶ್ವರಯ್ಯ, ಮನೋಜ್, ಗುರು, ಸುನಿಲ್   ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *