ದಯಾನಂದ ಸಾಗರ ವಿದ್ಯಾಸಂಸ್ಥೆ ವತಿಯಿಂದ ಲಘುಮೇನಹಳ್ಳಿ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಲಘುಮೇನಹಳ್ಳಿ ಗ್ರಾಮದಲ್ಲಿ 5 ದಿನಗಳಿಂದ ನಡೆದ ಶಿಬಿರದಲ್ಲಿ ಎನ್‌ಎನ್ಎಸ್ ವಿದ್ಯಾರ್ಥಿಗಳು ಗ್ರಾಮದಾದ್ಯಂತ ಸ್ವಚ್ಚತೆ ಕೈಗೊಂಡರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು‌ ನಡೆಸಿ, ಪ್ರೋತ್ಸಾಹ ನೀಡಿದರು.

ವಿದ್ಯಾಸಂಸ್ಥೆಯ ಡಾ.ವಿಶ್ವನಾಥ್ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕ್ಷೇತ್ರ ಅಧ್ಯಯನದ ಭಾಗವಾಗಿ ಐದು ದಿನಗಳ ಕಾಲ ಎನ್ಎಸ್ಎಸ್ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಮೊದಲ ದಿನದಂದು ಗ್ರಾಮದಲ್ಲಿ‌ನ ಸಮಸ್ಯೆಗಳ ವಸ್ತುಸ್ಥಿತಿ‌ ಅಧ್ಯಯನ ನಡೆಸಲಾಯಿತು. ನಂತರ ಶ್ರಮದಾನದ ಮೂಲಕ ಸ್ವಚ್ಚತೆ‌ ಕೈಗೊಳ್ಳಲಾಯಿತು.

ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಚಿತ್ರಕಲೆ, ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು ಎಂದು ಹೇಳಿದರು.

ಶಾಲೆಯ ಸುತ್ತ ನೈರ್ಮಲ್ಯ ಕಾಪಾಡುವ ಜೊತೆಗೆ ಗ್ರಾಮದ ಚರಂಡಿಗಳನ್ನು ಸ್ವಚ್ಚ‌ ಮಾಡಲಾಯಿತು. ಕೆರೆಯ ಆವರಣದಲ್ಲಿ‌ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ‌ ಮಾಡಲಾಯಿತು. ಎನ್ಎಸ್ಎಸ್ ಅಧಿಕಾರಿ ಡಾ.ಮಧುಸೂಧನ್, ಡಾ.ಆನಂದ್ ನೇತೃತ್ವದಲ್ಲಿ‌ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಪರಿಸರ. ಸಂರಕ್ಷಣೆ ಹಾಗೂ ಸ್ವಚ್ಛತೆಯ ಅರಿವು ಮೂಡಿಸಲಾಯಿತು. ಗ್ರಾಮದ ಹಲವೆಡೆ ಹಾಗೂ ಶಾಲೆಯ ಆವರಣದಲ್ಲಿ ಸಸಿಗಳನ್ನು‌ ನೆಟ್ಟು ಪರಿಸರ ಜಾಗೃತಿ‌‌ ಮೂಡಿಸಿದರು.

ಎನ್ಎಸ್ಎಸ್ ವಿದ್ಯಾರ್ಥಿನಿ ನವ್ಯಾ‌ ಮಾತನಾಡಿ, ಐದು ದಿನಗಳ‌ ಎನ್ಎಸ್ಎಸ್ ಶಿಬಿರವು ಸಾಕಷ್ಟು ಅನುಭವಗಳ ಪಾಠ ಕಲಿಸಿದೆ. ಹಳ್ಳಿಯ ವಾತಾವರಣ ನಮ್ಮಲ್ಲಿ ಹುರುಪು ತುಂಬಿದೆ. ಎನ್ ಎಸ್ ಎಸ್ ಶಿಬಿರದಿಂದ ಗ್ರಾಮದ ಅಭಿವೃದ್ದಿಯಲ್ಲಿ‌ ತೊಡಗಿಸಿಕೊಳ್ಳಲು ಸ್ಫೂರ್ತಿ ತುಂಬಿದಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 25 ಎನ್ಎಸ್ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರಾಮಸ್ಥರು ಕೂಡ ಎನ್ಎಸ್ಎಸ್ ವಿದ್ಯಾರ್ಥಿಗಳ‌ ಶ್ರಮದಾನವನ್ನು‌ ಮುಕ್ತಕಂಠದಿಂದ ಶ್ಲಾಘಿಸಿದರು.

Leave a Reply

Your email address will not be published. Required fields are marked *