ಮಕ್ಕಳ ಕಲಿಕೆಯ ಬುನಾದಿಗೆ ಅಂಗನವಾಡಿಗಳು ಪೂರಕವಾಗಿರುವುದರಿಂದ ಇವುಗಳ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಎಜಾಕ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಿಎಸ್ಆರ್ ಅನುದಾನದಲ್ಲಿ ನಿರ್ಮಿಸಲಾಗಿರುವ ವಿಶೇಷ ವಿನ್ಯಾಸದ ಗೋಲ್ ಗುಂಬಜ್ ಮಾದರಿಯ ಅಂಗನವಾಡಿ ಕಟ್ಟಡ ಹಾಗೂ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಅಂಗನವಾಡಿ ನೂತನ ಕಟ್ಟಡವು ವಿಶೇಷವಾಗಿದ್ದು, ವಿನೂತನವಾದ ಡೂಮ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಕಟ್ಟಡದ ಒಳಗೆ ಆಹ್ಲಾದಕರ ವಾತಾವರಣದಿಂದ ಕೂಡಿದ್ದು ಮಕ್ಕಳು ಕಲಿಯಲು ಪೂರಕವಾದ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಏಜಾಕ್ಸ್ ಕಂಪನಿಯು ಸಾಮಾಜಿಕವಾಗಿ ಉತ್ತಮವಾದ ಕಾರ್ಯವನ್ನು ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಯವರು ಶಾಲೆಯ ಕೊಠಡಿ ನಿರ್ಮಾಣವು ಕೂಡ ಗುಣಮಟ್ಟದಿಂದ ಕೂಡಿದೆ ಎಂದರು.
ಕಂಪನಿಯವರು ನೀಡಿರುವ ಈ ಕಟ್ಟಡವನ್ನು ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ನಿರ್ವಹಿಸಿ, ಮತ್ತಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಪಾಡಿಕೊಳ್ಳಿ. ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಪೋಷಕರು ಮಾನವೀಯ ಮೌಲ್ಯಗಳನ್ನು ಬಾಲ್ಯದಲ್ಲೇ ಕಲಿಸಿ ಎಂದರು.
ನಂತರ ಶಾಸಕರಾದ ಟಿ.ವೆಂಕಟರಾಮಣಯ್ಯ ಮಾತನಾಡಿ, ಏಜಾಕ್ಸ್ ಕಂಪನಿಯ ಸಾಮಾಜಿಕ ಜವಾಬ್ಧಾರಿಯ ಸಹಕಾರದಿಂದ ನೂತನ ಕಟ್ಟಡವನ್ನು ನಿರ್ಮಿಸಿರುವುದು ಶ್ಲಾಘನೀಯವಾದದ್ದು. ಕೋವಿಡ್ ಸಂದರ್ಭದಲ್ಲಿ ಮೂರೂವರೆ ಕೋಟಿ ವೆಚ್ಚದ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸಿಕೊಟ್ಟಿದ್ದಾರೆ, ಅಲ್ಲದೆ ಶಾಲಾ ಕಟ್ಟಡವನ್ನು ಸಹಾ ನಿರ್ಮಿಸಿದ್ದಾರೆ, ಇದೇ ರೀತಿ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಆದ್ಯತೆ ನೀಡಿ ತಮ್ಮ ಸಾಮಾಜಿಕ ಕಾರ್ಯ ಮುಂದುವರೆಸಿ ಎಂದರು.
ಎಲ್ಲಾ ಸರ್ಕಾರಗಳು ಈ ಹಿಂದಿನಿಂದಲೂ ಶಿಕ್ಷಣಕ್ಕೆ ಮಹತ್ವ ನೀಡುತ್ತಿವೆ. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣವನ್ನು ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಮುಖ ಮಾಡದೇ ಹೆಮ್ಮೆಯಿಂದ ಸರಕಾರಿ ಶಾಲೆಗೆ ದಾಖಲಿಸಿ. ಸರ್ಕಾರಿ ಶಾಲೆಯ ಶಿಕ್ಷಕರು ಮೆರಿಟ್ ಆಧಾರದ ಮೇಲೆ ನೇಮಕವಾಗಿರುತ್ತಾರೆ. ಹಾಗಾಗಿ ಮಕ್ಕಳಿಗೆ ಕಲಿಯಲು ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಟರಾಜ್, ದೊಡ್ಡಬಳ್ಳಾಪುರ ತಹಶೀಲ್ದಾರ್ ಮೋಹನ್ ಕುಮಾರಿ, ಸಿಡಿಪಿಓ ಅನಿತಾಕುಮಾರಿ, ಅಜಾಕ್ಸ್ ಕಂಪನಿಯ ಹೆಚ್.ಆರ್.ಗಣಪತಿ, ಸಿ.ಎಸ್.ಆರ್. ಅಧಿಕಾರಿ ಮಂಜುನಾಥ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.