ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪ್ರಕೃತಿ ವಿಕೋಪದಿಂದ 16,952 ಹೆಕ್ಟೇರ್ ನಷ್ಟು ಬೆಳೆ ನಾಶವಾಗಿದೆ. ಮಳೆಯನ್ನೇ ನೆಚ್ಚಿಕೊಂಡು ರೈತರು ಸಾವಿರಾರು ರೂಪಾಯಿ ವ್ಯಯ ಮಾಡಿ ಬೆಳೆದಿದ್ದ ಬೆಳೆ ಬಾಡಿಹೋಗಿದೆ. ಆಗೊಮ್ಮೆ ಈಗೊಮ್ಮೆ ಬಿದ್ದಿದ್ದ ಮಳೆಗೆ ರಾಗಿ, ಜೊಳ ಸೇರಿದಂತೆ ಇತರೆ ಬೆಳೆಗಳಿಗೆ ಕಳೆ ಬಂದಿತ್ತು, ಆದರೆ ಕಳೆದ ಎರಡ್ಮೂರು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ಅದೂ ಸಹ ನೆಲಕಚ್ಚಿ ರೈತರನ್ನ ಸಂಕಷ್ಟದ ದವಡೆಗೆ ನೂಕಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಜೊತೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಬರ ವೀಕ್ಷಣೆಯನ್ನ ಮಾಡಿ ಮಾತನಾಡಿದ ಅವರು, ಬರ ಘೋಷಣೆ ಮಾಡಿ ಬರ ಪರಿಹಾರವೆಂದು ಇಡೀ ರಾಜ್ಯಕ್ಕೆ 342 ಕೋಟಿ ರೂ. ರಾಜ್ಯ ಸರ್ಕಾರದಿಂದ ಬಿಡುಗಡೆ ಆಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೇವಲ 1ಕೋಟಿ ಮಾತ್ರ ಬಿಡುಗಡೆ ಆಗಿದೆ. ಈ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ, 15-20ಕೋಟಿ ಬೇಕಾಗಿದೆ ಎಂದರು.
ಬರ ಘೋಷಣೆ ಮಾಡುವುದಕ್ಕಿಂತ ಮೊದಲು ದೊಡ್ಡಬಳ್ಳಾಪುರ ತಾಲೂಕಿಗೆ ಕೇವಲ 25 ಲಕ್ಷವನ್ನ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗಿತ್ತು. ಈಗ ಕುಡಿಯುವ ನೀರಿನ ಜೊತೆಗೆ ದನಕರುಗಳಿಗೆ ಮೇವನ್ನ ಒದಗಿಸಲು ಮೇವಿನ ಬ್ಯಾಂಕ್ ಸ್ಥಾಪನೆ ಮಾಡಬೇಕು, ತುರ್ತು ಪರಿಹಾರ ನಿಧಿಯನ್ನು ಸ್ಥಾಪನೆ ಮಾಡಬೇಕು. ಬೆಳೆ ನಾಶಕ್ಕೆ ಹೆಚ್ಚಿನ ಪರಿಹಾರ ತಾಲೂಕಿಗೆ ಅವಶ್ಯಕತೆ ಇದೆ. ಆದ್ದರಿಂದ ಆದಷ್ಟು ಬೇಗ ರೈತರಿಗೆ ಅನುಕೂಲವಾಗುವಂತೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಹಿಂದುಳಿದಿದೆ. ಈ ತಾಲೂಕಿನಲ್ಲಿ ಸಾಸಲು ಹೋಬಳಿ ಎಲ್ಲಾ ರೀತಿಯಲ್ಲಿ ತೀರಾ ಹಿಂದುಳಿದಿದೆ, ಆದ್ದರಿಂದ ಮೊದಲ ಆದ್ಯತೆ ಈ ಭಾಗದ ರೈತರಿಗೆ ನೀಡಬೇಕಾಗಿದೆ ಎಂದು ತಿಳಿಸಿದರು.
ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಮೊದಲು 10 ಸಾವಿರ ಕೋಟಿ ಬಿಡುಗಡೆ ಮಾಡಲಿ ತದನಂತರ ಕೇಂದ್ರ ಸರ್ಕಾರದ ಬಳಿ 10 ಸಾವಿರ ಕೋಟಿ ಬಿಡುಗಡೆ ಮಾಡಿಸಿಕೊಳ್ಳುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ. ಪ್ರಸ್ತುತ ಈ ಬರ ಪರಿಸ್ಥಿತಿ ಅವಲೋಕಿಸಿ ಸಂಪೂರ್ಣ ಅಂಕಿಅಂಶಗಳ ಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೂ ಕಳುಹಿಸಿಕೊಡಲಾಗುವುದು ಎಂದರು.
ನಮ್ಮ ತಾಲೂಕಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಬಳಿ ಅನುದಾನ ಬೇಕೆಂದು ನಿರಂತರವಾಗಿ ಬೇಡಿಕೆ ಇಡಲಾಗುತ್ತಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(SHDP)ಗೆ 16ಕೋಟಿ 75ಲಕ್ಷ ಕೇಳಿದ್ದೆ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 20ಕೋಟಿ ಕೇಳಿದ್ದೆ. ನಾವು ಬೇಡಿಕೆ ಇಟ್ಟಷ್ಟು ರಾಜ್ಯ ಸರ್ಕಾರ ನೀಡಲಾಗುತ್ತಿದಿಯೇ?, ಆದ್ದರಿಂದ ತಾವು ಮೊದಲು ಬೇಡಿಕೆ ಇಟ್ಟ ಅನುದಾನಕ್ಕೆ ಸ್ಪಂದಿಸುವ ಕೆಲಸ ಮಾಡಿ ತದನಂತರ ಕೇಂದ್ರದ ಮೊರೆ ಹೋಗಬೇಕು, ಅದನ್ನ ಬಿಟ್ಟು ಕೇವಲ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸಿದರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿತು, ಆ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಒಂದೇ ಒಂದು ಯೋಜನೆ ಜಾರಿ ಮಾಡಿರುವ ಉದಾಹರಣೆ ಇಲ್ಲ ಎಂದು ದೂರಿದ್ದಲ್ಲದೇ, ಯುಪಿಎ ಸರ್ಕಾರದ ಬಗ್ಗೆ, ಅದು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಕಾಂಗ್ರೆಸ್ ನವರಿಗೇ ಯಾರಿಗೂ ಗೊತ್ತಿಲ್ಲ, ಇನ್ನೂ ಜನಗಳಿಗೆ ಎಲ್ಲಿ ನೆನಪಿರುತ್ತದೆ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಪ್ರಧಾನಿ ಆದ ನಂತರ ಕಿಸಾನ್ ಸಮ್ಮಾನ್, ಫಸಲ್ ಭಿಮಾ ಯೋಜನೆ ಸೇರಿದಂತೆ ಹತ್ತು ಹಲವಾರು ಜನ ಹಾಗೂ ರೈತ ಸ್ನೇಹಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆದ್ದರಿಂದ ನನಗೆ ಮೋದಿ ಸರ್ಕಾರದ ಬಗ್ಗೆ ಗೊತ್ತು ಅಷ್ಟೇ ಯುಪಿಎ ಸರ್ಕಾರದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರ್ಣಬಹುಮತ ಕೊಟ್ಟು ಗೆಲ್ಲಿಸಿ ಅಧಿಕಾರದಲ್ಲಿರಿಸಿದ್ದಾರೆ. ಆದ್ದರಿಂದ ಜನರ ಮನಸ್ಸು ಗೆದ್ದು ಜನ ಪರ ಆಡಳಿತ ನಡೆಸಿ, ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದನ್ನ ನಿಲ್ಲಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಿವಿಮಾತನ್ನ ಹೇಳಿದರು.