ಜೆಡಿಎಸ್ ಭದ್ರಕೋಟೆ ದೊಡ್ಡಬಳ್ಳಾಪುರದಲ್ಲಿ ಬಮೂಲ್ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಪಕ್ಷದವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಸುಮಾರು 40 ವರ್ಷದಿಂದಲೂ ಜೆಡಿಎಸ್ ಪಕ್ಷದಿಂದ ಅಧ್ಯಕ್ಷ, ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಮಾಡಿ ಗೆಲವು ಸಾಧಿಸಿರುವ ಉದಾಹರಣೆಗಳಿವೆ. ಕಳೆದ ತಿಂಗಳುಗಳ ಹಿಂದೆ ಬಮೂಲ್ ಮಾಜಿ ಅಧ್ಯಕ್ಷ ದಿ.ಎಚ್ ಅಪ್ಪಯ್ಯಣ್ಣನವರು ಇದ್ದಾಗ ಬಮೂಲ್ ಚುನಾವಣೆ ವಿಚಾರವಾಗಿ ಮಾಜಿ ಸಿಎಂ ಹಾಗೂ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಜೆಡಿಎಸ್ ಪಕ್ಷದ ಆಕಾಂಕ್ಷಿಗಳ ಕುರಿತು ಮಾತುಕತೆ ನಡೆದಿತ್ತು. ಬಮೂಲ್ ಚುನಾವಣೆ ಕುರಿತು ಅಂದು ನಡೆದ ಚರ್ಚೆ ಮತ್ತೆ ನಡೆದಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಅಂದು ಆಕಾಂಕ್ಷಿಗಳು ಅಂತಿಮವಾಗುತ್ತಾರೆ. ದೊಡ್ಡಬಳ್ಳಾಪುರದಲ್ಲಿ ಮೂರ್ನಾಲ್ಕು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಅತೀ ಶೀಘ್ರವಾಗಿ ಅಂತಿಮ ಅಕಾಂಕ್ಷಿಗಳ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.
ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಕೆಸರೆರಚಾಟ ಬಿಡಬೇಕು
ಹಾಲಿ ಹಾಗೂ ಮಾಜಿ ಶಾಸಕರ ನಡುವೆ ದೊಡ್ಡಬಳ್ಳಾಪುರ ಅಭಿವೃದ್ಧಿ ವಿಚಾರದಲ್ಲಿ ಕೆಸರೆರಚಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಾರ್ಟಿಯಿಂದ ಆರ್.ಜಿ.ವೆಂಕಟಾಚಲಯ್ಯನವರು ದೊಡ್ಡಬಳ್ಳಾಪುರ ಶಾಸಕರಾಗಿ ಆಯ್ಕೆಯಾಗಿದ್ದರು. ಅವರನ್ನು ಹೊರತುಪಡಿಸಿ ನಮ್ಮ ಪಕ್ಷದಿಂದ ಇದುವರೆಗೂ ಯಾರೂ ಶಾಸಕರಾಗಿ ಆಯ್ಕೆಯಾಗಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಜೆಡಿಎಸ್ ಪಕ್ಷದ ಶಕ್ತಿಯನ್ನು ಕಾಲಕ್ಕೆ ತಕ್ಕಂತೆ ಯಾವ ರೀತಿ ಬೇಕೋ ಆ ರೀತಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಹಾಲಿ ಶಾಸಕ ಹಾಗೂ ಮಾಜಿ ಶಾಸಕರಿಬ್ಬರೂ ನಮ್ಮ ಪಾರ್ಟಿಯ ಶಕ್ತಿಯನ್ನು ಉಪಯೋಗಿಸಿಕೊಂಡಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಾರ್ಟಿಯ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. 2019ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ, 2024ರಲ್ಲಿ ಬಿಜೆಪಿ ಜೊತೆ ಮೈತ್ರಿಯಿಂದಾಗಿ ಗೊಂದಲ ಉಂಟಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದಿಲ್ಲ. ಈ ಹಿನ್ನೆಲೆ ನಮ್ಮ ಶಕ್ತಿ ಪ್ರದರ್ಶನ ಮಾಡುವುದಕ್ಕೆ ಆಗುತ್ತಿಲ್ಲ. ಮೊದಲು ಈ ಎರಡು ರಾಷ್ಟ್ರೀಯ ಪಕ್ಷಗಳ ಹಾಲಿ ಹಾಗೂ ಮಾಜಿ ಶಾಸಕರು ಕೆಸರೆರಚಾಟ ಬಿಟ್ಟು ತಾಲೂಕಿನ ಅಭಿವೃದ್ಧಿ ಕಡೆಗೆ ಗಮನಕೊಡಬೇಕು. ಮಾಜಿ ಶಾಸಕ ಟಿ.ವೆಂಕಟರಮಣಯ್ಯನವರಿಗೆ ಸರ್ಕಾರವಿದೆ. ಹಾಲಿ ಶಾಸಕ ಧೀರಜ್ ಮುನಿರಾಜ್ ಅವರಿಗೆ ತಾಲೂಕಿನ ಜನತೆಯ ಸೇವೆ ಮಾಡುವುದಕ್ಕೆ ಅವಕಾಶವಿದೆ. ಈ ಹಿನ್ನೆಲೆ ಇಬ್ಬರೂ ಸಮನ್ವಯತೆ ಕಾಪಾಡಿಕೊಂಡು ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಗಮನವಿರಿಸಿ ಜನರ ಮನ್ನಣೆ ಗಳಿಸಬೇಕು ಎಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರ ತಾಲೂಕು ಜಿಲ್ಲಾ ಕೇಂದ್ರ ಆಗುತ್ತದೆ
ಜಿಲ್ಲಾ ಕೇಂದ್ರ ನಮ್ಮ ದೊಡ್ಡಬಳ್ಳಾಪುರಕ್ಕೆ ಬರಬೇಕು. ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ತಾಲೂಕು ಎಲ್ಲಾ ಅರ್ಹತೆ ಹೊಂದಿದೆ. ಈ ಹಿನ್ನೆಲೆ ಏ. 27ರಂದು ಸಿಎಂ ಸಿದ್ದರಾಮಯ್ಯನವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಮನವಿ ಮಾಡಲಾಗುವುದು. ಘಾಟಿ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಮುತ್ಯಾಲಮ್ಮ ತಾಯಿಯ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲೂಕು ಜಿಲ್ಲಾ ಕೇಂದ್ರ ಆಗುತ್ತದೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಹೈಕಮಾಂಡ್ ನಿರ್ಧಾರವೇ ಅಂತಿಮ ತೀರ್ಮಾನ
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ನಾನೇ ಅಭ್ಯರ್ಥಿ ಎಂದು ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಹೈಕಮಾಂಡ್ ಬಳಿ ಏನೇನು ಮಾತಾಡಿದ್ದಾರೆ ಅದರ ಪ್ರಕಾರ ಅವರು ನಡೆದುಕೊಳ್ಳಲಿ, ಅವರ ಚುನಾವಣೆಗೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ಪಕ್ಷ ಸಂಘಟನೆಯಲ್ಲೂ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಪಕ್ಷದ ಅಂತಿಮ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷಗಳಿವೆ. ಅಷ್ಟರೊಳಗೆ ಒಂದುರಾಷ್ಟ್ರ ಒಂದೇ ಚುನಾವಣೆ ಬಂದರೆ ಯಾವೆಲ್ಲಾ ರಾಜಕೀಯ ಸ್ಥಿತ್ಯಂತರಗಳು ಆಗ್ತಾವೋ ಕಾದು ನೋಡಬೇಕಿದೆ ಎಂದರು.
ಪಿಎಲ್ ಡಿ ಬ್ಯಾಂಕ್ ಫಲಿತಾಂಶ
ಪಿಎಲ್ ಡಿ ಬ್ಯಾಂಕ್ ಫಲಿತಾಂಶವು ಈ ಬಾರಿ ಜೆಡಿಎಸ್ ಪಕ್ಷದ ಅಸ್ತಿತ್ವವನ್ನು ತಾಲೂಕಿನ ಜನತೆಗೆ ತೋರಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟೀಯ ಪಕ್ಷಗಳ ಆರ್ಭಟಕ್ಕೆ ಜೆಡಿಎಸ್ ಪಕ್ಷ ತಕ್ಕ ಉತ್ತರ ಕೊಟ್ಟಿದೆ. ಈ ಬಾರಿಯ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷ ಪ್ರಬಲವಾಗಿ ಪೈಪೋಟಿ ನಡೆಸಲಿದೆ. ಇದರಿಂದ ಯಾರಿಗೂ ಕೋಟ್ಯಾಂರ ರೂಪಾಯಿ ಲಾಭ ಬರೋದಿಲ್ಲ. ಈ ಬ್ಯಾಂಕ್ ರೈತರದ್ದು, ಎಲ್ಲಾರು ಅನ್ಯೋನ್ಯವಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.