ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಸಮಬಲ ಹೋರಾಟದ ಪಂದ್ಯದಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಚಿತ್ತಾರ ಮೂಲೆ-ಮೂಲೆಯಲ್ಲೂ ಬಿಡಿಸಿದ್ದರೂ ಕೊನೆಯ ಓವರ್ ನಲ್ಲಿ ಗೆಲುವು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಸಿಎಸ್ ಕೆ ಪಾಲಾಯಿತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್ ಸಿಬಿ ನಾಯಕ ಪಾಫ್ ಡುಪ್ಲೆಸಿ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು, ಯಶಸ್ವಿ ಆರಂಭಿಕ ಜೋಡಿಯಾದ ಡೇವಿಡ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಅವರನ್ನು ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲು ಬಿಡಲಿಲ್ಲ, ಮೊಹಮ್ಮದ್ ಸಿರಾಜ್ ಅವರ ಮೊದಲ ಓವರ್ ನಲ್ಲಿಯೇ ಗಾಯಕ್ವಾಡ್ (3) ರನ್ ಗಳಿಸಿ ಔಟಾದರು.
ಈ ಸಂದರ್ಭದಲ್ಲಿ ಜೊತೆಯಾದ ಕಾನ್ವೆ ಆರು ಸಿಕ್ಸರ್ ಹಾಗೂ ಆರು ಬೌಂಡರಿ ಸಹಿತ (83)ರನ್ ಹಾಗೂ ಅಂಜಿಕ್ಯಾ ರಹಾನೆ (37) ರನ್ ಗಳಿಸಿ ಉತ್ತಮ ರನ್ ಕಲೆ ಹಾಕಿದರು, ನಂತರ ಬಂದ ಶಿವಂ ದುಬೆ ಐದು ಸಿಕ್ಸರ್ ಹಾಗೂ ಎರಡು ಬೌಂಡರಿ ಸಹಿತ ಭರ್ಜರಿ (52) ರನ್ ಗಳಿಸಿದರೆ ರಾಯಡು, ಮೊಯಿನ್ ಆಲಿ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
ಇಪ್ಪತ್ತು ಓವರುಗಳಲ್ಲಿ 224 ರನ್ ಗೆಲುವಿನ ಗುರಿ ನೀಡಿದರು, ಆರ್ ಸಿಬಿ ಪರವಾಗಿ ಬೌಲಿಂಗ್ ಮಾಡಿದ ಎಲ್ಲಾ ವೇಗಿಗಳು ದುಬಾರಿಯಾದರು.
ಬೃಹತ್ ಮೊತ್ತ ಬೆನ್ನಟ್ಟಿದ ಆರ್ ಸಿಬಿ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಅನುಭವಿ ಆಟಗಾರ ವಿರಾಟ್ ಕೊಹ್ಲಿ (6) ಆಕಾಶ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು, ಮತ್ತೊಬ್ಬ ಬ್ಯಾಟ್ಸ್ಮನ್ ಮಹಿಪಾಲ್ ಲೋಮರ್(0) ತುಷಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದರು 15 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಸಂದರ್ಭದಲ್ಲಿ ಜೊತೆಯಾದ ನಾಯಕ ಪಾಫ್ ಡುಪ್ಲೆಸಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ (62) ಹಾಗೂ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸವೆಲ್ ಮೂರು ಬೌಂಡರಿ ಹಾಗೂ ಎಂಟು ಸಿಕ್ಸರ್ ಸಿಡಿಸಿ (76) ರನ್ ಗಳಿಸುವ ಮೂಲಕ 126 ರನ್ ಜೊತೆಯಾಟ ಆಡಿದರು. ಒಂದು ಹಂತದಲ್ಲಿ ಗೆಲುವಿನ ಹತ್ತಿರ ಕೊಂಡೊಯ್ಯುವ ಪ್ರಯತ್ನ ಮಾಡಿದರು.
ನಂತರ ಹಂತ ಹಂತವಾಗಿ ವಿಕೆಟ್ ಕಳೆದುಕೊಂಡರು, ಚೆನ್ನೈ ತಂಡದ ಪರವಾಗಿ ತುಷಾರ್ ದೇಶಪಾಂಡೆ 3 ವಿಕೆಟ್ ಹಾಗೂ ಮತೀಷಾ ಪ್ರತೀರಾಣ 2 ವಿಕೆಟ್ ಪಡೆದು ಗಮನ ಸೆಳೆದರು, ಅದ್ಭುತವಾದ ಬ್ಯಾಟಿಂಗ್ ಮಾಡಿದ ಡೆವೊನ್ ಕಾನ್ವೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.