ಡಿ.31 ರಿಂದ ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

ಕೋಲಾರ: ನೌಕರರಿಗೆ ಪರಿಷ್ಕೃತ ವೇತನ ಜಾರಿ, ‌ವೇತನ ಹಿಂಬಾಕಿ ಹಾಗೂ ನಿಗಮಗಳಿಗೆ ಶಕ್ತಿ ಯೋಜನೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ಡಿ.31ರ ಬೆಳಿಗ್ಗೆ 6 ಗಂಟೆಯಿಂದಲೇ ಬಸ್‌ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ‌ ಜಂಟಿ ಕ್ರಿಯಾ ಸಮಿತಿ ಮುಖಂಡರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಮುಖಂಡ ನಾರಾಯಣಸ್ವಾಮಿ, ‘ರಾಜ್ಯ ಸರ್ಕಾರವು ಸಾರಿಗೆ ನೌಕರರ 32 ಬೇಡಿಕೆಗಳನ್ನು ಈಡೇರಿಸಬೇಕಿದೆ. ಈ ಸಂಬಂಧ ಹಲವಾರು ಬಾರಿ ಮನವಿ ಮಾಡಿದರೂ ಸರ್ಕಾರ ಕ್ರಮ ವಹಿಸಿಲ್ಲ. ಸಾರಿಗೆ ಸಚಿವ ರಾಮಲಿಂಗಾರಡ್ಡಿ ಸ್ಪಂದಿಸಿಲ್ಲ. ಹೀಗಾಗಿ, ಅನಿವಾರ್ಯವಾಗಿ ಮುಷ್ಕರ ನಡೆಸಬೇಕಾಗಿದೆ. ಡಿ.31ರಿಂದ ಯಾವುದೇ ಸಾರಿಗೆ ಬಸ್‌ಗಳ ಸಂಚಾರ ಇರುವುದಿಲ್ಲ. ನಮ್ಮ ಸಮಸ್ಯೆ ಅರಿತು ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

‘ಸಾರಿಗೆ ನೌಕರರು ಸರ್ಕಾರದ ಮಹಾತ್ವಕಾಂಕ್ಷಿ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಆದರೆ, ಸಾರಿಗೆ ನಿಗಮಗಳಿಗೆ ಆ ಹಣ ಬಿಡುಗಡೆ ಮಾಡಿಲ್ಲ’ ಎಂದರು.

ಕ್ರಿಯಾ ಸಮಿತಿಯ ಪದಾಧಿಕಾರಿ ಬಾಲಕೃಷ್ಣ ಮಾತನಾಡಿ, ‘2020 ರ ಜ. 1 ರಿಂದಲೇ ವೇತನ ಪರಿಷ್ಕರಣೆ ಆಗಿಬೇಕಿತ್ತು. ಆದರೆ, ಕೋವಿಡ್‌ ಕಾರಣ ಜಾರಿ ಆಗಲಿಲ್ಲ. 2024ರ ಜನವರಿ 1ರಿಂದ ಹೊಸ ವೇತನ ಪರಿಷ್ಕರಣೆ ಆಯಿತು. ಪರಿಷ್ಕರಣೆ ವೇತನ ಜಾರಿ ಜೊತೆಗೆ 38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ಶಕ್ತಿ ಯೋಜನೆ ಜಾರಿಗೆ ಸಾರಿಗೆ ಸಿಬ್ಬಂದಿ ಶ್ರಮ ಅಪಾರ. ಆದರೆ, ನೌಕರರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈಗ ಕರೆದರೂ ನಾವು ಚರ್ಚೆಗೆ ಸಿದ್ಧವಿದ್ದೇವೆ. ಬೇಡಿಕೆ ಈಡೇರಿಸಿದರೆ ಮುಷ್ಕರ ವಾಪಸ್ ಪಡೆಯುತ್ತೇವೆ’ ಎಂದರು.

ಕ್ರಿಯಾ ಸಮಿತಿ ಪದಾಧಿಕಾರಿ ಆರ್‌.ಪ್ರಸಾದ್‌ ಮಾತನಾಡಿ, ‘ಮುಷ್ಕರ ನಡೆಸುವ ಬಗ್ಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಡಿ.9 ರಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದಿದೆ. ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ, ಮುಷ್ಕರ ಮಾಡುವ ಮುನ್ನಾ 21 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ನೋಟಿಸ್‌ ನೀಡಿ ಗಮನಕ್ಕೆ ತಂದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಾರಿಗೆ ನೌಕರರ 2,900 ಕೋಟಿಯನ್ನು ಪಿಎಫ್‌ ರೂಪದಲ್ಲಿ ರಾಜ್ಯ ಸರ್ಕಾರವು ಸಂಬಳದಲ್ಲಿ ಕಡಿತ ಮಾಡಿದೆ. ನಾವು ಪಾವತಿಸಿದ ಹಣವನ್ನು ಸಾಲದ ರೂಪದಲ್ಲಿ ಕೊಡುವಂತೆ ಕೇಳಿದರೂ ನೀಡುತ್ತಿಲ್ಲ’ ಎಂದರು.

ಕ್ರಿಯಾ ಸಮಿತಿ ಪದಾಧಿಕಾರಿ ಅಶೋಕ್ ಕುಮಾರ್ ಮಾತನಾಡಿ, ‘ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ಆದರೆ,‌ ನಮ್ಮ ಹೊಟ್ಟೆಗೆ ಇಲ್ಲವೆಂದ‌‌ ಮೇಲೆ ಏನು‌ ಮಾಡುವುದು? ಕುಟುಂಬದ ಪಾಡೇನು’ ಎಂದು ಪ್ರಶ್ನಿಸಿದರು.

‘ಈ ಬಾರಿ ಎಸ್ಮಾ ಜಾರಿ ಮಾಡಿದರೂ ಪರವಾಗಿಲ್ಲ. ನಾವು ಸಂಕಷ್ಟಕ್ಕೆ ‌ಸಿಲುಕಿದ್ದು, ನ್ಯಾಯಬೇಕಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್, ವೆಂಕಟೇಶ್ ಇದ್ದರು.

Leave a Reply

Your email address will not be published. Required fields are marked *