ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರದ ತನಿಖೆಗೆ ಒತ್ತಾಯಿಸಿ ಡಿ.4 ರಂದು ಬ್ಯಾಂಕ್ ಮುತ್ತಿಗೆಗೆ ರೈತ ಸಂಘ ನಿರ್ಧಾರ

ಕೋಲಾರ: ಲಕ್ಷಾಂತರ ರೈತ ಕೂಲಿಕಾರ್ಮಿಕರು, ಮಹಿಳೆಯರ ಜೀವನಾಡಿಯಾಗಿರುವ ಬಂಗಾರಪೇಟೆ ಡಿಸಿಸಿ ಬ್ಯಾಂಕ್ ನಲ್ಲಿ ನಡೆದಿರುವ ಕೋಟಿ ಕೋಟಿ ಹಗರಣವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಡಿ.4 ರಂದು ಪೋರಕೆಗಳ ಸಮೇತ ಬ್ಯಾಂಕ್ ಮುತ್ತಿಗೆ ಹಾಕಲು ಬಂಗಾರಪೇಟೆ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.

ಸ್ಥಳೀಯ ಶಾಸಕರು ಸರ್ಕಾರದ ಮುಖ್ಯಮಂತ್ರಿಗಳ ಜೊತೆ ಅತಿ ಆತ್ಮೀರಾಗಿದ್ದರೂ ಡಿ.ಸಿ.ಸಿ ಬ್ಯಾಂಕ್‌ಗೆ ಚುನಾವಣೆ ನಡೆಸುವಂತೆ ಏಕೆ ಒತ್ತಡ ಹಾಕುತ್ತಿಲ್ಲ. 3 ಬಾರಿ ಶಾಸಕರಾಗಿರುವ ಅವರು ಲಕ್ಷಾಂತರ ರೈತ ಕುಂಟುಂಬಗಳ ಅವ್ಯವಸ್ಥೆ ಹಾಗೂ ತನ್ನ ಕ್ಷೇತ್ರದ ಬ್ಯಾಂಕಿನಲ್ಲಿಯೇ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ದ್ವನಿ ಎತ್ತದೆ ಇರಲು ಕಾರಣ ಏನೂ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪ್ರಶ್ನೆ ಮಾಡಿದರು.

ಡಿಸಿಸಿ ಬ್ಯಾಂಕ್ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಶ್ರೀಮಂತರ ಹಾಗೂ ಅಧಿಕಾರಿಗಳ ಪಾಲಿಗೆ ಚಿನ್ನದ ಮೊಟ್ಟೆಯಿಡುವ ೨೪ ಗಂಟೆಯ ಎಟಿಎಂ ಆಗಿ ಮಾರ್ಪಟ್ಟಿರುವುದು ದುರಾದೃಷ್ಟಕರ. ಬಂಗಾರಪೇಟೆ ತಾಲೂಕಿನಾದ್ಯಂತ ಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಬರುವ ಎಲ್ಲಾ ಸಹಕಾರ ಬ್ಯಾಂಕ್ ಗಳಲ್ಲಿ ನಕಲಿ ಸಂಘಗಳ ಹಾವಳಿ ಹಾಗೂ ಸಾಲ ನೀಡುವಲ್ಲಿ ತಾರತಮ್ಯ ಮಾಡಿ ಬಡ ಮಹಿಳೆಯರ ಕೋಟ್ಯಾಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸತ್ಯವಲ್ಲವೇ ಎಂದು ವ್ಯವಸ್ಥಾಪಕರಿಗೆ ಸವಾಲು ಹಾಕಿದರು.

ನಿಯತ್ತಾಗಿ ಸಾಲ ಪಡೆದು, ಮರುಪಾವತಿ ಮಾಡಿರುವ ಸ್ವಾಭಿಮಾನ ಇರುವಂತಹ ಮಹಿಳೆಯರು ರೈತರಿಗೆ ಸಾಲ ಕೊಡಬೇಕಾದರೆ ಅಧಿಕಾರಿಗಳಿಗೆ ನೂರೊಂದು ಕಾನೂನು ಆದರೆ, ಬ್ಯಾಂಕಿನಲ್ಲಿ ರಾಜಕಾರಣ ಮಾಡುತ್ತಿರುವವರು ಕೋಟ್ಯಂತರ ರೂಪಾಯಿ ಕೋಳಿ, ಕೃಷಿ ಸಾಲ ಮತ್ತು ನಕಲಿ ಸ್ತ್ರೀಶಕ್ತಿ ಸಂಘಗಳನ್ನು ಸೃಷ್ಟಿ ಮಾಡಿ ಲೂಟಿ ಮಾಡಿದ್ದರೂ ಅವರ ವಿರುದ್ಧ ಕ್ರಮವಿಲ್ಲವೇಕೆ ಬಡವರ ಬ್ಯಾಂಕ್‌ನ್ನು ಹಾಳು ಮಾಡಿ ಖಾಸಗಿ ಫೈನಾನ್ಸ್ ಕಂಪನಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿನ ರೈತ ಕೂಲಿಕಾರ್ಮಿಕರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದರು.

ನೊಂದ ಸಾಲ ವಂಚಿತ ರೈತ ಮಹಿಳೆ ಶೈಲಜ ಮಾತನಾಡಿ, ಬಡವರ ಬದುಕಿಗೆ ಆಸರೆಯಾಗಿದ್ದ ಡಿ.ಸಿ.ಸಿ ಬ್ಯಾಂಕ್ ರಾಜಕಾರಣಿಗಳ ಗುಂಪುಗಾರಿಕೆಗೆ ಸಮಪೂರ್ಣವಾಗಿ ಸಾಲದ ಸುಳಿಗೆ ಸಿಲುಕಿ ನಷ್ಟದ ಹಾದಿ ಹಿಡಿಯುತ್ತಿದೆ. ಅದನ್ನೇ ನಂಬಿರುವ ನಮ್ಮಂತಹ ಸಾವಿರಾರು ಬಡ ಮಹಿಳೆಯರು ಬೀದಿಗೆ ಬೀಳುವ ಮಟ್ಟಕ್ಕೆ ಜನಪ್ರತಿನಿದಿಗಳು ನಡೆದುಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ.ಸಿಸಿ ಬ್ಯಾಂಕ್‌ನಲ್ಲಿ ಸಾಲ ಸಿಗದೆ ಮಕ್ಕಳ ವಿದ್ಯಾಭ್ಯಾಸ ಹಿರಿಯರ ಆರೋಗ್ಯಕ್ಕೆ ಹಣ ಇಲ್ಲದೆ ಖಾಸಗಿ ಪೈನಾನ್ಸ್ಗಳಿಗೆ ಮೊರೆ ಹೋಗಿ ಮೀಟರ್ ದಂದೆಯಂತೆ ಬಡವರ ರಕ್ತ ಹೀರುವ ಪೈನಾನ್ಸ್ಗಳಿಂದ ಸಾಲ ಪಡೆದು ಕೂಲಿ ಮಾಡಿದ ಹಣವನ್ನು ಕಟ್ಟಿ ಹೊಟ್ಟೆಗೆ ತಣ್ನಿರು ಬಗ್ಗೆ ಹಾಕಿಕೊಳ್ಳುವ ಮಟ್ಟಕ್ಕೆ ಬಡವರ ಬದುಕು ಬಂದು ನಿಂತಿದೆ. ಬಡವರ ಕಣ್ಣೀರು ಅಧಿಕಾರಿಗಳಿಗೆ ಜನಪ್ರತಿನಿದಿಗಳಿಗೆ ಶಾಪವಾಗಿ ತಟ್ಟುತ್ತದೆ ಎಂದರು.

ಬಡವರ ಬ್ಯಾಂಕ್ ಉಳಿಯಬೇಕು, ಚುನಾವಣೆ ನಡೆಸಬೇಕು. ನಕಲಿ ದಾಖಲೆಗಳನ್ನು ಸೃಷ್ಠಿಸಿ ಕೋಟಿಕೋಟಿ ಲೂಟಿ ಮಾಡಿರುವ ವ್ಯವಸ್ಥಾಪಕರು ಹಾಗೂ ಬಲಿತ ಶ್ರೀಮಂತರಿಂದ ಸಾಲ ವಸೂಲಾತಿ ಮಾಡಿ ಎಲ್ಲಾ ಸಹಕಾರ ಸಂಘಗಳಲ್ಲಿ ನಡೆದಿರುವ ಹಗರಣವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಬ್ಯಾಂಕ್ ಅನ್ನು ಉಳಿಸಬೇಕೆಂದು ಡಿ.೪ ಬುಧವಾರ ಪೊರಕೆಗಳ ಸಮೇತ ಬ್ಯಾಂಕ್ ವಹಿವಾಟನ್ನು ಸ್ಥಗಿತಗೊಳಿಸಿ ಹೋರಾಟ ಮಾಡುವ ತಿರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತೆಂದರು.

ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಸುಪ್ರೀಂಚಲ, ಶಶಿ, ವೇಣು, ಆಂಜಿನಪ್ಪ, ಬಂಗವಾದಿ ನಾಗರಾಜ್‌ಗೌಡ, ಅಪ್ಪೋಜಿರಾವ್, ಮುನಿಕೃಷ್ಣ, ರತ್ನಮ್ಮ, ಸುಗುಣ, ಚೌಡಮ್ಮ, ರಾಧ, ಮುನಿಯಮ್ಮ, ಮುಂತಾದವರಿದ್ದರು.