ಡಿಸಿಸಿ ಬ್ಯಾಂಕ್ ಚುನಾವಣೆಗೆ ಒತ್ತಾಯಿಸಿ ಬ್ಯಾಂಕ್ ಮುಂದೆ ರೈತ ಸಂಘದಿಂದ ಪ್ರತಿಭಟನೆ

ಕೋಲಾರ: ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಸಿ ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ರೈತ, ಕೂಲಿ ಕಾರ್ಮಿಕರು, ಮಹಿಳೆಯರನ್ನು ರಕ್ಷಣೆ ಮಾಡಬೇಕೆಂದು ರೈತಸಂಘದಿಂದ ಬ್ಯಾಂಕ್ ಮುಂದೆ ಪಾರ್ಥೇನಿಯಂ ಸಸಿಗಳೊಂದಿಗೆ ಹೋರಾಟ ಮಾಡಿ ಎಜಿಎಂಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಬ್ಯಾಂಕ್ ನಲ್ಲಿ ಕೋಟಿಕೋಟಿ ಕೋಳಿಫಾರಂ ಮತ್ತಿತರ ಸಾಲ ಪಡೆಯುವಾಗ ಜನಪ್ರತಿನಿಧಿಗಳಿಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ, ಸಾಲ ಪಡೆದ ನಂತರ ಸಾಲ ಮರುಪಾವತಿ ಮಾಡುವಾಗ ಬ್ಯಾಂಕಿನಲ್ಲಿ ರಾಜಕೀಯ ಮಾಡುವುದು ಯಾವ ನ್ಯಾಯ. ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮಿಣ ಪ್ರದೇಶಗಳಲ್ಲಿ ಸಾಲ ಪಡೆದ ರೈತ ಕೂಲಿಕಾರ್ಮಿಕರು, ಮಹಿಳೆಯರು ಸಾಲ ತೀರಿಸಲಾಗದೆ ಸ್ವಾಭಿಮಾನದ ಬದುಕಿಗಾಗಿ ಅವಮಾನ ತಡೆದುಕೊಳ್ಳದೆ ಆತ್ಮಹತ್ಯೆಯ ಪ್ರಕರಣಗಳು ಸಂಭವಿಸುತ್ತಿದ್ದರೂ ಮನಸ್ಸು ಕರಗದ ಜನಪ್ರತಿನಿಧಿಗಳೇ ಇನ್ನಷ್ಟು ಅಮಾಯಕರ ಜೀವ ಬಲಿ ಬೇಕು ನಿಮ್ಮ ರಾಜಕೀಯ ತೆವಲಿಗೆ ಎಂದು ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಅಸಮಧಾನ ವ್ಯಕ್ತಪಡಿಸಿದರು.

ಒಂದು ವಾರದೊಳಗೆ ಬ್ಯಾಂಕಿಗೆ ಚುನಾವಣೆ ನಿಗದಿ ಮಾಡಿ ಇಲ್ಲವೇ ಬ್ಯಾಂಕನ್ನು ಸಂಪೂರ್ಣವಾಗಿ ಬಂದ್ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಬ್ಯಾಂಕ್ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಣ್ಣಿದ್ದೂ ಕುರುಡರಾಗಿ, ಕಿವಿಯಿದ್ದೂ ಕಿವುಡರಾಗಿ ಗ್ರಾಮೀಣ ಪ್ರದೇಶದ ರೈತ, ಕೂಲಿ ಕಾರ್ಮಿಕರು, ಮಹಿಳೆಯರು ಸಹಕಾರ ಸಂಘಗಳಲ್ಲಿ ಸಾಲ ಸಿಗದೆ ಶಿಕ್ಷಣ ಕೃಷಿ ಆರೋಗ್ಯ ಮತ್ತಿತರರ ಸಮಸ್ಯೆಗಳಿಗೆ ಹಣ ಒದಗಿಸಲು ಪರ್ಯಾಯವಾಗಿ ಮೀಟರ್ ಬಡ್ಡಿ ದಂಧೆಯಂತೆ ರಕ್ತ ಹೀರುವ ಖಾಸಗಿ ಫೈನಾನ್ಸ್ ಹಾವಳಿಗೆ ಸಿಲುಕಿ ಪರದಾಡುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮಾನವೀಯತೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಸುಮಾರು ೧೦ ವರ್ಷಗಳ ಹಿಂದೆ ಬ್ಯಾಂಕಿನ ಪರಿಸ್ಥಿತಿ ಯಾವ ಮಟ್ಟಕ್ಕೆ ಇತ್ತು ಎಂದರೆ ಹಾಳು ಬಿದ್ದ ಭೂತಬಂಗಲೆಯಂತಾಗಿ ಕೆಲಸಕ್ಕೆ ಬಾರದ ಮುಳ್ಳುಗಿಡಗಳು ಬೆಳೆದು ಗೂಡು ಕಟ್ಟಿದ್ದ ಬ್ಯಾಂಕಿಗೆ ಮರುಜೀವ ಕೊಟ್ಟು ಮತ್ತೆ ಗ್ರಾಮೀಣ ಪ್ರದೇಶಗಳ ಕೂಲಿಕಾರ್ಮಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಿ ಅಭಿವೃದ್ಧಿಪಡಿಸಿದಂತಹ ಬ್ಯಾಲಹಳ್ಳಿ ಗೋವಿಂದೇಗೌಡರು ಮೌನವಾಗಿರುವುದಕ್ಕೆ ಕಾರಣವಾದರೂ ಏನು ಎಂದು ಪ್ರಶ್ನೆ ಮಾಡಿದರು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರೈತರ ಕೃಷಿ ಜಮೀನಿನಲ್ಲಿ ಒಂದು ಕಾಲದಲ್ಲಿ ಪಾರ್ಥೇನಿಯಂ (ಕಾಂಗ್ರೆಸ್ ಸಸಿಗಳು) ಬಿದ್ದರೆ ಆ ಕೃಷಿಭೂಮಿ ಸಂಪೂರ್ಣವಾಗಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದ್ದಂತೆಯೇ ಈಗ ಜಿಲ್ಲೆಯ ಕಾಂಗ್ರೆಸ್ ನಾಯಕರ ಎರಡು ಗುಂಪುಗಳ ಹಗ್ಗಜಗ್ಗಾಟಕ್ಕೆ ಬ್ಯಾಂಕಿನಲ್ಲಿ ಪಾರ್ಥೇನಿಯಂ ಸಸಿಗಳು ಬೆಳೆದು ನಿಂತಿರುವುದು ದುರಾದೃಷ್ಟಕರ ಎಂದು ವಿಷಾಧ ವ್ಯಕ್ತಪಡಿಸಿದರು.

ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಸಹಕಾರ ಬ್ಯಾಂಕಿಗೆ ಚುನಾವಣೆ ನಡೆಸಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲವೇ ಎಲ್ಲಾ ರೈತರ ಖಾಸಗಿ ಸಾಲವನ್ನು ಸಂಬAಧಫಟ್ಟ ಜನಪ್ರತಿನಿಧಿಗಳು, ಇಲ್ಲವೇ ಬ್ಯಾಂಕ್ ಸಿಬ್ಬಂದಿಯೇ ತೀರಿಸಿ. ಇವರೆಡೂ ಮಾಡದೆ ಇದ್ದರೆ ಕಡೆಯದಾಗಿ ಬ್ಯಾಂಕ್ ಉಳಿವಿಗಾಗಿ ಸಂಕ್ರಾಂತ ಹಬ್ಬದ ನಂತರ ಬ್ಯಾಂಕ್ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಚುನಾವಣೆ ನಿಗದಿ ಮಾಡುವವರೆಗೂ ಜಾನುವಾರುಗಳ ಸಮೇತ ಅಹೋರಾತ್ರಿ ಉಪವಾಸ ಧರಣಿ ಜೊತೆಗೆ ಬೃಹತ್ ತಮಟೆ ಚಳುವಳಿ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕ್ ಎಜಿಎಂ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚುನಾವಣೆ ಬಗ್ಗೆ ಮಾಹಿತಿ ನೀಡುವ ಜೊತೆಗೆ ಖಾಸಗಿ ಫೈನಾನ್ಸ್ ಹಾವಳಿ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡುವ ಭರವಸೆಯನ್ನು ನೀಡಿದರು.

ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಶಿವಾರೆಡ್ಡಿ, ಚಂದ್ರಪ್ಪ, ತಿಮ್ಮಣ್ಣ, ವೆಂಕಟೇಶಪ್ಪ, ಯಲ್ಲಣ್ಣ, ಹರೀಶ್, ನಾಗರಾಜ್, ಫಾರೂಖ್, ರಾಜೇಶ್, ತರ‍್ನಹಳ್ಳಿ ಆಂಜಿನಪ್ಪ, ಕೇಶವ, ಸುಪ್ರೀಂಚಲ, ರತ್ನಮ್ಮ, ಶೈಲಜ, ಗೌರಮ್ಮ, ಮುನಿವೆಂಕಟಮ್ಮ ಮುಂತಾದವರಿದ್ದರು.

Leave a Reply

Your email address will not be published. Required fields are marked *