ಡಿಜೆ-ಕೆಜಿ ಹಳ್ಳಿ ಗಲಭೆಯ ಬಂಧಿತರ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಸರ್ಕಾರಕ್ಕೆ ಪತ್ರ ಬರೆದ ವಿಚಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಜೆ-ಕೆಜಿ ಹಳ್ಳಿ ಗಲಭೆ ವಿಚಾರದಲ್ಲಿ ಪೊಲೀಸರ ಮೇಲೆ ದಾಳಿ, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿರೋದು, ಪುಲಕೇಶಿನಗರದಲ್ಲಿ ನಮ್ಮ ಸಂಘಟನೆಯ ಅಧ್ಯಕ್ಷ ಮುನೇಗೌಡರ ಮನೆ ಮೇಲೆ ದಾಳಿ ಬೈಕ್ ಸುಟ್ಟಿರುವುದು ಇದನ್ನೆಲ್ಲ ನೆನಪು ಮಾಡಿಕೊಳ್ಳದೆ ಅವರೆಲ್ಲ ಅಮಾಯಕರು ಅವರ ಕೇಸ್ ವಾಪಸ್ ಪಡೆಯಿರಿ ಎಂದು ಹೇಳುತ್ತಿರುವುದು ತಪ್ಪು ಎಂದು ತನ್ವೀರ್ ಸೇಠ್ ವಿರುದ್ಧ ಪ್ರವೀಣ್ ಶೆಟ್ಟಿ ಕಿಡಿಕಾರಿದ್ದಾರೆ.
ಕನ್ನಡಪರ ಹೋರಾಟಗಾರರು ರೈತ ಸಮಸ್ಯೆಗಳ ಬಗ್ಗೆ ನಾಡು ನುಡಿ ಬಗ್ಗೆ ಜಲ ಭಾಷೆಗಾಗಿ ನಾವು ಹೋರಾಟ ಮಾಡಿದ್ದೇವೆ. ನಮ್ಮ ಮೇಲೆ ಸಾಕಷ್ಟು ಕೇಸ್ ಹಾಕಲಾಗಿದೆ ಆಗ ನೀವು ಒಂದು ಮಾತು ಮಾತನಾಡಿಲ್ಲ. ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಲು ಸಾಕಷ್ಟು ಮನವಿ ಮಾಡಿದ್ದೇವೆ ಆದರೂ ವಾಪಸ್ ಪಡೆಯಲಿಲ್ಲ. ಬಿಜೆಪಿ ಸರ್ಕಾರವನ್ನ ಜನರು ಮನೆಗೆ ಕಳಿಸಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರವಿದೆ ನೀವು ಕೂಡಾ ಈಗ ಇದೇ ಹಾದಿ ತುಳಿಯುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ನೀವು ಕನ್ನಡಪರ ಹೋರಾಟಗಾರರು ಹಾಗೂ ರೈತರ ಮೇಲಿನ ಕೇಸ್ ವಾಪಸ್ ಪಡೆಯಬೇಕು, ನಾವು ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಮಾಡುತ್ತೇವೆ, ಈ ಕೂಡಲೇ ಕನ್ನಡಪರ ಹೋರಾಟಗಾರರು ಹಾಗೂ ರೈತರ ಮೇಲಿನ ಕೇಸ್ ವಾಪಸ್ ಪಡೆಯಬೇಕು, ಕೇಸ್ ವಾಪಸ್ ಪಡೆಯದೇ ಇದ್ದರೆ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ ನೀಡಿದರು.